ವಿಷಯಕ್ಕೆ ಹೋಗಿ

"ಪ್ರತಿಭಟನೆ, ಬಂದ್‌ನ ಆಚೆಗೂ ವಿದ್ಯಾರ್ಥಿ ಪರಿಷತ್ ಕೆಲಸ ಮಾಡುತ್ತಿದೆ"


ಅಕ್ಟೋಬರ್ ೯ ರಿಂದ ೧೧ರವರೆಗೆ ಬಳ್ಳಾರಿಯ ರಾಘವ ಕಲಾಮಂದಿರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ’ರಂಗತೋರಣ’ ವಿದ್ಯಾರ್ಥಿ ನಾಟಕೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು. ನಾಟಕೋತ್ಸವದಲ್ಲಿ ಸ್ಪರ್ಧಿಸಿದ್ದ ಸುಮಾರು ೨೭ ನಾಟಕಗಳ ಪೈಕಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಮ್‌ಬಿಅ ಕಾಲೇಜಿನ ವಿದ್ಯಾರ್ಥಿಗಳು ಆಡಿದ ’ನಾನು ಮತ್ತು ನಾಳೆ’ ನಾಟಕ ಪ್ರಥಮ ಬಹುಮಾನ ಪಡೆದುಕೊಂಡಿತು.

೨೦೦೩ನೆಯ ಇಸವಿಯಲ್ಲಿ ಪ್ರಾರಂಭಗೊಂಡ ಈ ನಾಟಕೋತ್ಸವಕ್ಕೆ ಈ ಬಾರಿ ಐದರ ಹರೆಯ. ಇಡೀ ನಾಟಕೋತ್ಸವದ ರೂವಾರಿ, ನಾಟಕೋತ್ಸವದುದ್ದಕ್ಕೂ ಪಾದರಸದಂತೆ ಓಡಾಡುತ್ತಾ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರನ್ನು ಪ್ರತಿ ನಿಮಿಷವೂ ಹುರಿದುಂಬಿಸುತ್ತಿದ್ದ ಪ್ರೊ. ಭೀಮಸೇನ್ ಅವರ ಜೊತೆ ಆಡಿದ ಎರಡು ಮಾತುಗಳು ಇಲ್ಲಿವೆ.

*****

ಎಬಿವಿಪಿಯವರು ಎಂದರೆ ಕೇವಲ ಬಂದ್ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ನಕಾರಾತ್ಮಕ ಹಣೆಪಟ್ಟಿಗಳಿದ್ದರೂ ವಿದ್ಯಾರ್ಥಿ ಪರಿಷತ್ತಿನವರು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತೆಗೆಯುವತ್ತ ಮಾಡುತ್ತಿರುವ ಕೆಲಸದ ಕೆಲವು ಝಲಕ್ ಕೂಡ ಇಲ್ಲಿದೆ.

*****

"ಇದು ನಮ್ಮ ಐದನೆಯ ವರ್ಷದ ರಂಗತೋರಣ. ಈ ನಾಟಕೋತ್ಸವವನ್ನು ಆರಂಭಸಲು ಸಾಕಷ್ಟು ಕಾರಣಗಳಿವೆ. ಸಾಮಾನ್ಯವಾಗಿ ಎಬಿವಿಪಿಯ ಹುಡುಗರು ಎಂದರೆ ಬಂದ್ ಮಾಡುವವರು, ಗಲಾಟೆ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ಹಣೆಪಟ್ಟಿಗಳಿವೆ. ಆದರೆ ಬಂದ್, ಪ್ರತಿಭಟನೆ ಮತ್ತು ಗಲಾಟೆಯ ಆಚೆಗೂ ಎಬಿವಿಪಿಯ ಹುಡುಗರು ಕೆಲಸ ಮಾಡುತ್ತಾರೆ. ಅವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿದೆ."

"ರಜಾ ದಿನಗಳಲ್ಲಿ ಎಬಿವಿಪಿಯ ಹುಡುಗರಿಗೆ ಸಮಯ ನಿರ್ವಹಣೆ, ನಾಯಕತ್ವದ ಕೌಶಗಳು, ಪರಿಣಾಮಕಾರಿ ಸಂವಹನ ಕಲೆ, ವಿಜ್ಞಾನ ಹೀಗೆ ಅನೇಕ ವಿಷಯಗಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಮಗೆ ಇಂಥ ಎಲ್ಲ ಕಲೆ-ಕೌಶಲಗಳನ್ನು ಒಂದೇ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಕಲಿಸುವ ಆಸೆಯಿತ್ತು."

"ಇಂಥ ಸಂದರ್ಭದಲ್ಲಿಯೇ ಕನ್ನಡ ಹಿರಿಯ ನಾಟಕಕಾರ ಡಾ ಚಂದ್ರಶೇಖರ ಕಂಬಾರರಿಗೆ ನಾಡೋಜ ಪ್ರಶಸ್ತಿ ಬಂತು. ಆಗ ನಾವೂ ನಾಟಕಗಳ ಬಗ್ಗೆ ಏನಾದರೂ ಮಾಡಬೇಕು. ನಾಟಕಕ್ಕಾಗಿ ಕೆಲಸ ಮಾಡಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡಿತು."

"ನಾಯಕತ್ವದ ಕಲೆ, ಪರಿಣಾಮಕಾರಿ ಸಂವಹನ, ಸಮಯ ನಿರ್ವಹಣೆ ಇಂಥಹ ಅನೇಕ ಕೌಶಲಗಳನ್ನು ವ್ಯವಸ್ಥಿತವಾಗಿ ಮೈಗೂಡಿಸಿಕೊಳ್ಳಬೇಕಾದದ್ದು ಒಬ್ಬ ನಾಟಕಕಾರನ ಮತ್ತು ನಟನ ಅಗತ್ಯ ಗುಣ. ಎಬಿವಿಪಿಯವರು ಹೇಗಿದ್ದರೂ ಇಂಥ ಕೌಶಲಗಳನ್ನು ಅನೇಕ ಕಾರ್ಯಕ್ರಮಗಳ ಮೂಲಕ ತಮ್ಮ ಹುಡುಗರಿಗೆ ಕಲಿಸುತ್ತಾರೆ. ಹಾಗೆ ಕಲಿತ ವಿಚಾರಗಳ ಅಭಿವ್ಯಕ್ತಿ ಹೇಗಾಗುತ್ತದೆ ಎಂದು ನೋಡಬೇಕು. ಅದಕ್ಕೆ ನಾಟಕಕ್ಕಿಂತ ಪರಿಣಾಮಕಾರಿ ಮಾಧ್ಯಮ ಯಾವುದಿದೆ?"

"ಈ ಒಂದು ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ೨೦೦೩ ರಲ್ಲಿ ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವವನ್ನು ’ರಂಗತೋರಣ’ ಎಂಬ ಹೆಸರಿನಲ್ಲಿ ಆರಂಭಿಸಿದೆವು. ಜಿಲ್ಲಾ ಮಟ್ಟದಲ್ಲಿ ನಡೆದ ಮೊದಲ ನಾಟಕೋತ್ಸವದಲ್ಲಿ ಏಳು ತಂಡಗಳು ಭಾಗವಹಿಸಿದ್ದವು."

"ನಂತರ ೨೦೦೪ರಲ್ಲಿ ಎರಡನೆಯ ರಂಗತೋರಣ ವಿಭಾಗ ಮಟ್ಟದಲ್ಲಿ ನಡೆಯಿತು. ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಾದ ಗುಲ್ಬರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿ ನಾಟಕ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದ್ದವು. ೨೦೦೭ನೆಯ ಇಸವಿಯಿಂದ ಈ ಉತ್ಸವ ರಾಜ್ಯಮಟ್ಟದ್ದಾಯಿತು."

"ಪಿಯುಸಿಯಿಂದ ಹಿಡಿದು ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳವರೆಗೆ ಈ ನಾಟಕೋತ್ಸವದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಸಿದ್ಧಾಂತ ಬೇಧಗಳನ್ನು ಮರೆತು ಎಲ್ಲ ರೀತಿಯ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ."

"ಈ ನಾಟಕೋತ್ಸವವನ್ನು ಪ್ರತಿ ವರ್ಷವೂ ಬಳ್ಳಾರಿಯಲ್ಲೇ ನಡೆಸುವುದಕ್ಕೆ ಕಾರಣವಿದೆ. ಬಳ್ಳಾರಿಯ ರಾಘವ ಅವರು ಮತ್ತು ಬೀಚಿಯವರು ನಾಟಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಸಂಪಾದಿಸಿದ್ದವರು. ಅದು ನಿಮಗೂ ಗೊತ್ತು. ಬಳ್ಳಾರಿಯ ರಾಘವರಂತೂ ಷೇಕ್ಸ್‌ಪಿಯರ್‌ನ ನಾಟಕಗಳನ್ನು ಜಾರ್ಜ್ ಬರ್ನಾರ್ಡ್ ಷಾ ಎದುರಿಗೆ ಆಡಿತೋರಿಸಿದ್ದರಂತೆ. ಷೇಕ್ಸ್‌ಪಿಯರ್‌ಗೂ ಬರ್ನಾರ್ಡ್ ಷಾಗೂ ಆಗಿಬರುತ್ತಿರಲಿಲ್ಲ. ಆದರೂ ಬರ್ನಾರ್ಡ್ ಷಾ ರಾಘವರು ಆ ನಾಟಕಗಳನ್ನು ಆಡುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ಅದನ್ನು ನೋಡುತ್ತಿದ್ದರಂತೆ."

"ಒಮ್ಮೆ ಗಾಂಧೀಜಿಯವರು ಇಲ್ಲಿಗೆ ಬಂದಿದ್ದಾಗ ಅವರೆದುರಿಗೆ ಒಂದು ನಾಟಕ ತೋರಿಸುವ ಆಸೆಯಾಯಿತಂತೆ. ಗಾಂಧೀಜಿಯವರಿಗೆ ಬಹಳ ಕೆಲಸವಿತ್ತು. ಆದರೂ ಇಪ್ಪತ್ತು ನಿಮಿಷಗಳ ಮಟ್ಟಿಗೆ ನಾಟಕ ನೋಡಲು ಕುಳಿತರು. ನಾಟಕ ನೋಡುವುದರಲ್ಲಿ ತಲ್ಲೀನರಾಗಿಬಿಟ್ಟ ಗಾಂಧೀಜಿ ತಮ್ಮ ಪ್ರಾರ್ಥನೆಯ ಸಮಯವನ್ನೂ ಮರೆತು ನಾಟಕ ನೋಡಿದರಂತೆ. ನಂತರ ರಾಘವರ ಬೆನ್ನು ತಟ್ಟಿ ಹೋದರಂತೆ. ಅಷ್ಟೇ ಅಲ್ಲದೆ, ತಿಲಕರೆದುರು ಮಹಾತ್ಮಾ ಕಬೀರ್ ನಾಟಕವನ್ನು ಆಡಿ ತೋರಿಸಿದ್ದರಂತೆ ನಮ್ಮ ರಾಘವರು."

"ಅಂಥ ನಾಟಕಕಾರರು ಮತ್ತು ಸಾಹಿತಿಗಳು ಜನಿಸಿದ ಈ ನಾಡಿನಲ್ಲಿ ನಾಟಕ ಕಾರ್ಯಕ್ರಮಗಳಿಗೆ ಬಹುವಾದ ಬೆಂಬಲವಿದೆ. ಇಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಬಹುದೊಡ್ಡ ದಂಡೇ ಇದೆ. ಇದು ಒಂದರ್ಥದಲ್ಲಿ ವೃತ್ತಿ ರಂಗಭೂಮಿ ಕಲಾವಿದರ ತವರೂರು."

"ಹಾಗಾಗಿ ಬಳ್ಳಾರಿಯ ಸಾಂಸ್ಕೃತಿಕ ಮುಖವನ್ನು ಜನರಿಗೆ ತೋರಿಸುವುದಕ್ಕೋಸ್ಕರ ಮತ್ತು ರಾಜಕೀಯದಾಚೆಗೂ ಬಳ್ಳಾರಿಗೆ ಒಂದು ಒಳ್ಳೆಯ ಹೆಸರಿದೆ ಎಂಬುದನ್ನು ಜನರಿಗೆ ತೋರಿಸಲು ಈ ಉತ್ಸವವನ್ನು ಬಳ್ಳಾರಿಯಲ್ಲೇ ನಡೆಸುತ್ತೇವೆ."

ಕಾಮೆಂಟ್‌ಗಳು

Unknown ಹೇಳಿದ್ದಾರೆ…
ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮ ಚೆನ್ನಾಗಿದೆ. ನನಗೆ ಪತ್ರಿಕೆ ತೋರಿಸಲಿಲ್ಲಾ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ