ವಿಷಯಕ್ಕೆ ಹೋಗಿ

ದೇಶವುಳಿಸಲು ಇನ್ನೊಬ್ಬ ಸರ್ದಾರ್ ಪಟೇಲ್ ಬೇಕು!

ಪ್ರಾಮಾಣಿಕವಾಗಿ ಒಮ್ಮೆ ಪ್ರಶ್ನಿಸಿಕೊಳ್ಳಿ.


ಭಾರತದ ರಾಜಧಾನಿ ದೆಹಲಿಯಲ್ಲಿ ನಿಜಕ್ಕೂ ಒಂದು ಚುನಾಯಿತ ಸರಕಾರ ಇದೆಯಾ? ಆ ಸರಕಾರದಲ್ಲಿ ರಕ್ಷಣಾ ಮಂತ್ರಿ ಮತ್ತು ಗೃಹ ಮಂತ್ರಿಗಳು ಇದ್ದಾರಾ? ಅವರೆಲ್ಲರ ಉಸ್ತುವಾರಿಯನ್ನು ನೋಡಿಕೊಳ್ಳಲು ಪ್ರಧಾನ ಮಂತ್ರಿ ಅಂತ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾನಾ? ಒಂದು ವೇಳೆ ನಮ್ಮ ದೇಶಕ್ಕೆ ಒಬ್ಬ ಪ್ರಧಾನಿ, ಒಬ್ಬ ಗೃಹ ಮಂತ್ರಿ, ಮತ್ತೊಬ್ಬ ರಕ್ಷಣಾ ಮಂತ್ರಿ ಅಂತ ಇದ್ದಾರೆ ಅಂತಾದರೆ ನಿಜಕ್ಕೂ ಅವರು ಗಂಡಸರಾ?!


ಮೇಲೆ ಕೇಳಿದ ಪ್ರಶ್ನೆಗಳು ಬಾಲಿಶ ಅನಿಸಬಹುದು. ಅತಿರೇಕದ್ದು ಅಂತಲೂ ಕೆಲವರಿಗೆ ಅನಿಸಿರಬಹುದು. ಕಾಂಗ್ರೆಸ್ ಎಂಬ ರಾಜಕೀಯ ಎದೆಗಾರಿಕೆಯೇ ಇಲ್ಲದ ಪಕ್ಷಕ್ಕೆ ೨೦೦೪ರ ಚುನಾವಣೆಯಲ್ಲಿ ಓಟು ಹಾಕಿದವರಿಗೆ ಕೋಪ ನೆತ್ತಿಗೇರಿರಬಹುದು. ಆದರೆ ಇಂಥ ಪ್ರಶೆಗಳನ್ನು ಕೇಳುವುದು ಅನಿವಾರ್ಯವಾಗಿದೆ.


ಭಾರತದ ಪಾಲಿಗೆ ಮತೀಯ ಭಯೋತ್ಪಾದನೆಯೆಂಬುದು ಖಂಡಿತಾ ಹೊಸದಲ್ಲ. ಕೇಂದ್ರದಲ್ಲಿ ಯಾವ ಪಕ್ಷದ ಸರಕಾರವಿದ್ದರೂ ಭಾರತದ ಮೇಲೆ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ತೀವ್ರತೆಯೇನೂ ಕಡಿಮೆಯಾಗಿಲ್ಲ. ಆದರೆ ಒಮ್ಮೆ ಯೋಚಿಸಿ. ೨೦೦೪ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಸೋನಿಯಾ ಮೈನೋ ನೇತೃತ್ವದ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಒಂದಾದರೂ ಪ್ರಾಮಾಣಿಕ ಪ್ರಯತ್ನ ಮಾಡಿದೆಯಾ? ಇಲ್ಲ. ಏಕೆಂದರೆ ಇವತ್ತಿನವರೆಗೂ ಭಯೋತ್ಪಾದಕ ದಾಳಿಯಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಸತ್ತಿಲ್ಲ.


ದೇಶದ ಆರ್ಥಿಕ ರಾಜಧಾನಿ ಮುಂಬೈಯಿಯ ಮೇಲೆ ಬುಧವಾರ ರಾತ್ರಿ ಉಗ್ರಗಾಮಿಗಳು ಮತ್ತೊಮ್ಮೆ ದಾಳಿ ಮಾಡಿದ್ದಾರೆ. ಕನಿಷ್ಟಪಕ್ಷ ನೂರು ಮಂದಿಯನ್ನು ಬಲಿತೆಗೆದುಕೊಂಡಿದ್ದಾರೆ. ಈ ವೇಳೆಯಲ್ಲಿ ನಡೆದ ಪೋಲೀಸ್ ಮತ್ತು ಮಿಲಿಟರಿ ಕಾರ್ಯಾಚರಣೆಯಲ್ಲಿ ದೇಶದ ಹೆಮ್ಮೆಯ ಪುತ್ರರಾದ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆ, ಎಸಿಪಿ ಅಶೋಕ್ ತಾಮ್ಟೆ ಮತ್ತು ಎನ್‌ಕೌಂಟರ್ ವಿಶೇಷಜ್ಞ ವಿಜಯ್ ವೀರಮರಣವನ್ನಪ್ಪಿದ್ದಾರೆ. ಇವರ ಜೋತೆ ಇನ್ನೂ ಹಲವು ಮಂದಿ ರಕ್ಷಣಾ ಸಿಬ್ಬಂದಿ ಜೀವ ತೆತ್ತಿದ್ದರೆ, ಕೆಲವು ಮಂದಿ ಉಗ್ರಗಾಮಿಗಳನ್ನೂ ಕೊಲ್ಲಲಾಗಿದೆ.


ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಮಾಧ್ಯಮಗಳ ಎದುರು ಸೂಟು-ಬೂಟು ಹಾಕಿಕೊಂಡು ಹಾಜರಾದ ನಮ್ಮ ಗೃಹ ಸಚಿವ (ಅವರು ನಿಜಕ್ಕೂ ಈ ದೇಶದ ಗೃಹ ಸಚಿವ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನಗಳು ಮೂಡಲಾರಂಭಿಸಿವೆ!) ಶಿವರಾಜ ಪಾಟೀಲ್ ಯಥಾಪ್ರಕಾರ ಉಗ್ರರ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದು ಹಲುಬಿಕೊಂಡಿದ್ದಾರೆ. ಇನ್ನು ನಮ್ಮ ದೇಶದ ಪ್ರಧಾನ ಮಂತ್ರಿ ಎಂದು ಕರೆಸಿಕೊಂಡಿರುವ ಮನಮೋಹನ್ ಸಿಂಗ್, ನಿರ್ಭಾವುಕ ಸ್ಥಿತಿಯಲ್ಲಿ ಕುಳಿತುಕೊಂಡು ಖಂಡನಾ ಹೇಳಿಕೆ ನೀಡಿದ್ದಾರೆ.


ಹಾಗಾದರೆ ಉಗ್ರಗಾಮಿಗಳ ವಿರುದ್ಧ ಖಂಡನಾ ಹೇಳಿಕೆ ನೀಡುವುದರ ಬದಲು ಬೇರೇನೂ ಮಾಡಲು ನಮ್ಮ ರಾಜಕಾರಣಿಗಳಿಂದ ಸಾಧ್ಯವಿಲ್ಲವಾ?


ಅಮೆರಿಕದಲ್ಲಿ ಸೆಪ್ಟೆಂಬರ್ ೧೧, ೨೦೦೧ರಂದು ಭಯೋತ್ಪಾದಕ ದಾಳಿ ನಡೆದ ಕೆಲವೇ ನಿಮಿಷಗಳಲ್ಲಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಷ್ ಘಟನಾ ಸ್ಥಳಕ್ಕೆ ಭೇಟಿ ನೀಡಿದರು. ಮಾರನೆಯ ದಿನವೇ ಅಮೆರಿಕದ ಮೇಲೆ ದಾಳಿ ಮಾಡಿದ ಪಾಪಿಗಳ ವಿರುದ್ಧ ಯುದ್ಧ ಎಂಬ ಎದೆಗಾರಿಕೆಯ ಮಾತುಗಳನ್ನು ಆಡಿದರು. ಕೇವಲ ಆಡಿ ತೋರಿಸಿದ್ದಷ್ಟೇ ಅಲ್ಲ, ಮಾಡಿಯೂ ತೋರಿಸಿದರು. ನಂತರದ ದಿನಗಳಲ್ಲಿ ಅಮೆರಿಕದ ಸೈನ್ಯ ಅಪಘಾನಿಸ್ಥಾನದ ಬೆಟ್ಟ-ಗುಡ್ಡಗಳಲ್ಲಿ ಅಡಗಿ ಕುಳಿತಿದ್ದ ತಾಲಿಬಾನಿಗಳನ್ನು ಹೆಕ್ಕಿ ಕೊಂದಿದ್ದು ಎಲ್ಲರಿಗೂ ಗೊತ್ತಿದೆ.


ಅಮೆರಿಕವನ್ನು ಮತ್ತು ಜಾರ್ಜ್ ಬುಷ್‌ರನ್ನು ಯಾರೇನೇ ತೆಗಳಬಹುದು. ಅಮೆರಿಕದ ಮನಸ್ಥಿತಿಯನ್ನು ’ಯುದ್ಧೋನ್ಮಾದಿ’ ಮನಸ್ಥಿತಿ ಅಂತ ಮೂದಲಿಸಬಹುದು. ಆದರೆ ಒಂದು ಮಾತು ನೆನಪಿಡಿ; ತನ್ನ ಮೇಲೆ ತೀವ್ರತರಹದ ದಾಳಿಯಾದಾಲೂ ತೆಪ್ಪಗೆ ಕುಳಿತಿರಲು ಅಮೆರಿಕವೇನೂ ಭಾರತವಲ್ಲ. ಭಯೋತ್ಪಾದಕರ ಮೇಲೆ ಉಗ್ರ ಕ್ರಮ ಕೈಗೊಂಡರೆ ಮುಸ್ಲಿಮರ ಮತಗಳು ಎಲ್ಲಿ ಕೈತಪ್ಪಿ ಹೋಗುತ್ತವೆಯೋ ಎಂದು ಹಲುಬಲು ಅಲ್ಲಿ ಕಾಂಗ್ರೆಸ್ ಎಂಬ ಪಕ್ಷವೇ ಇಲ್ಲ. ಅವತ್ತು ಅಮೆರಿಕ ತೆಗೆದುಕೊಂಡ ಒಂದು ದಿಟ್ಟ ನಿರ್ಧಾರದಿಂದಾಗಿ ಇವತ್ತಿನವರೆಗೂ ಅಮೆರಿಕವನ್ನು ತಮ್ಮ ಗುರಿಯಾಗಿಟುಕೊಂಡು ದಾಳಿಮಾಡಲು ಉಗ್ರಗಾಮಿಗಳಿಗೆ ಸಾಧ್ಯವಾಗಿಲ್ಲ.


ನಮ್ಮ ಕರ್ನಾಟಕದ ಅರ್ದದಷ್ಟೂ ಇಲ್ಲದ ಇಸ್ರೇಲ್ ಕೂಡ ಹಿಂದೊಮ್ಮೆ ತನ್ನ ಮೇಲೆ ದಾಳಿ ಮಾಡಲು ಬಂದ ದೇಶಗಳಿಗೆ ತಕ್ಕ ಪ್ರತ್ಯುತ್ತರ ನೀಡಿತ್ತು. ಇವತ್ತಿಗೂ ಅದೇ ಎದೆಗಾರಿಕೆ ಇಸ್ರೇಲಿನ ಆಡಿಳತಕ್ಕೆ ಇದೆ. ಏಕೆಂದರೆ ಇಸ್ರೇಲ್ ಕೂಡ ಭಾರತವಲ್ಲ! ಅದೇ ಕಾರಣಕ್ಕೆ ತನ್ನ ಸುತ್ತಲೂ ಹುರಿದು ಮುಕ್ಕಲು ಸಿದ್ಧರಾಗಿರುವ ಇಸ್ಲಾಮಿಕ್ ದೇಶಗಳೇ ತುಂಬಿಕೊಂಡಿದ್ದರೂ ಇಸ್ರೇಲ್ ತನ್ನ ಭೌಗೋಳಿಕ ಸಮಗ್ರತೆಯನ್ನು ರಕ್ಷಿಸಿಕೊಂಡಿದೆ.


ಆದರೆ ಭಾರತದ ರಾಜಕಾರಣಿಗಳಿಗೇನಾಗಿದೆ? ಉಗ್ರರ ವಿರುದ್ಧ ಯುದ್ಧ ಸಾರಲು ಇವರ ಯಾರಪ್ಪನ ಅಪ್ಪಣೆಗಾಗಿ ಕಾಯಬೇಕು? ಪಾಕಿಸ್ತಾನದ ಒಪ್ಪಿಗೆ ಬೇಕಾ? ಅಥವಾ ಸೋನಿಯಾ ಮೈನೋ ಒಪ್ಪುತ್ತಿಲ್ಲವಾ? ಹಾಗಾದರೆ ನಮ್ಮ ಬಳಿ ಅಣುಬಾಂಬುಗಳು ಮತ್ತಿತರ ಆಧುನಿಕ ಶಸ್ತ್ರಾಸ್ತ್ರಗಳು ಇರುವುದು ಏಕೆ? ಅವನ್ನೆಲ್ಲ ಕೊಂಡುಹೋಗಿ ಅರಬ್ಬೀ ಸಮುದ್ರಕ್ಕೆ ಎಸೆದು ಬರಬಹುದಲ್ಲ?! ನಮ್ಮ ದೇಶದ ರಕ್ಷಣಾ ವ್ಯವಸ್ಥೆ ಅದೆಷ್ಟು ಹದಗೆಟ್ಟಿದೆಯೆಂದರೆ ಉಗ್ರರು ಪಾಕಿಸ್ತಾನದ ಕರಾಚಿಯಿಂದ ಹಡಗಿನ ಮೂಲಕ ಮುಂಬಯಿಯ ಕಡಲು ತೀರವನ್ನು ಪ್ರವೇಶಿಸಿದರೂ ನಮ್ಮ ನೌಕಾಪಡೆಗೆ ಈ ವಿಷಯವೇ ಗೊತ್ತಾಗುತ್ತಿಲ್ಲ. ದೇಶದೊಳಗೇ ಇದ್ದುಕೊಂಡು, ಈ ದೇಶದ್ದೇ ಅನ್ನ ತಿಂದುಕೊಂಡು ನಂತರ ಈ ದೇಶಕ್ಕೆ ಬಾಂಬಿಡುವವರಿಗೇನೂ ಈ ದೇಶದಲ್ಲಿ ಕೊರತೆಯಿಲ್ಲ.


ಇನ್ನು ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್‌ನ ಮುಖ್ಯ ಮತಬ್ಯಾಂಕ್ ದಲಿತರು, ಹಿಂದುಳಿದವರು ಮತ್ತು ಮುಸ್ಲಿಮರು. ಮಾಯಾವತಿ ನೇತೃತ್ವದಲ್ಲಿ ಪ್ರಬಲವಾಗಿರುವ ಬಿಎಸ್‌ಪಿ ಕಾಂಗ್ರೆಸ್‌ನ ಪಾರಂಪರಿಕ ಮತಬ್ಯಾಂಕ್‌ಗಳಾದ ದಲಿತರ ಮತ್ತು ಹಿಂದುಳಿದವರ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ತನ್ನ ಬುಟ್ಟಿಗೆ ಹಾಕಿಕೊಂಡಿದೆ. ಇತ್ತ ಸಮಾಜವಾದಿ ಪಕ್ಷ, ಲಾಲೂ ಯಾದವರ ರಾಷ್ಟ್ರೀಯ ಜನತಾದಳದಂತಹ ಪಕ್ಷಗಳು ಮುಸ್ಲಿಮರ ಮತ ಬುಟ್ಟಿಗೂ ಕೈಹಾಕಿವೆ. ಕಾಂಗ್ರೆಸ್‌ನ ತಳಪಾಯವೇ ಕುಸಿಯತೊಡಗಿದೆ. ದಲಿತರು ಮತ್ತು ಹಿಂದುಳಿದವರ ಮತಬ್ಯಾಂಕ್ ಗಟ್ಟಿಮಾಡಿಕೊಳ್ಳಲು ಮೀಸಲಾತಿಯ ಆಟ ಆಡುವ ಕಾಂಗ್ರೆಸ್, ಕ್ರೈಸ್ತರ ಓಟು ಹೆಚ್ಚಿಸಿಕೊಳ್ಳಲು ಹಿಂದೂ ಧರ್ಮದಿಂದ ಕ್ರಿಶ್ಚಿಯಾನಿಟಿಗೆ ಮತಾಂತರಗೊಂಡ ದಲಿತರಿಗೂ ಮೀಸಲಾತಿ ಮುಂದುವರೆಸುವ ಮಾತಾಡುತ್ತಿದೆ. ಇವಿಷ್ಟೇ ಅಲ್ಲದೆ, ಇನ್ನೊಂದು ಅಲ್ಪಸಂಖ್ಯಾತ ಸಮುದಾಯದ ಮತಗಳನ್ನು ತನ್ನ ಖಾತೆಗೆ ಜಮಾ ಮಾಡಿಕೊಳುವ ಉದ್ದೇಶದಿಂದ ಭಯೋತ್ಪಾದಕರ ವಿರುದ್ಧ ಹುಲ್ಲುಕಡ್ಡಿಯನ್ನೆತ್ತಲೂ ಹಿಂಜರಿಯುತ್ತಿದೆ. ರಂಜಾನ್ ತಿಂಗಳಲ್ಲಿ ಅಫ್ಜಲ್ ಗುರುವನ್ನು ನೇಣಿಗೇರಿಸಿದರೆ ಮುಸ್ಲಿಮರಿಗೆ ನೋವಾಗಬಹುದು ಅಂತ ಕಾಂಗ್ರೆಸ್ಸಿನ ಗುಲಾಂ ನಬಿ ಆಜಾದ್ ನೀಡಿರುವ ಹೇಳಿಕೆ ಮುಸ್ಲಿಮರ ಮತಕ್ಕಾಗಿ ಜೊಲ್ಲು ಸುರಿಸುವ ಕಾಂಗ್ರೆಸ್ಸಿನ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.


ಬಾಂಗ್ಲಾದೇಶದಿಂದ ಅನಿಯಂತ್ರಿತವಾಗಿ ದೇಶದೊಳಕ್ಕೆ ಹರಿದುಬರುತ್ತಿರುವವರ ವಿರುದ್ಧ ಮಾತನಾಡಲೂ ಕಾಂಗ್ರೆಸ್ಸಿಗೆ ಹೆದರಿಕೆ. ಕಾರಣ ಅದೇ; ಎಲ್ಲಾದರೂ ಮುಸ್ಲಿಮರ ಮತ ಕೈತಪ್ಪಿಹೋದರೆ?


ಕಾಂಗ್ರೆಸ್ಸಿನ ಇಂಥ ಬೇಜವಾಬ್ದಾರಿತನದಿಂದಾಗಿಯೇ ಭಾರತ ಇವತ್ತು ಜಗತ್ತಿನ ಅತ್ಯಂತ ಅಸುರಕ್ಷಿತ ದೇಶಗಳಲ್ಲಿ ಒಂದಾಗಿದೆ. ಇಂಥ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಖಂಡಿತಾ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕಿಲ್ಲ. ಮೊದಲು ಲೋಕಸಭೆಯನ್ನು ವಿಸರ್ಜಿಸಬೇಕು. ರಾಷ್ಟ್ರಪತಿಯ ಕೈಗೆ ಆಡಳಿತ ಒಪ್ಪಿಸಿ ಚುನಾವಣೆಗೆ ಮುಂದಾಗಬೇಕು.


ಮತ್ತೆ ಚುನಾವಣೆಯಾದರೆ ಬಿಜೆಪಿ ಅಧಿಕಾರಕ್ಕೆ ಬರಬಹುದು. ಆದರೆ ಭಯೋತ್ಪಾದನೆಯನ್ನು ಹತ್ತಿಕ್ಕಲು ಬಿಜೆಪಿಯಿಂದಲೂ ಸಾಧ್ಯವಿಲ್ಲ. ದೇಶಭಕ್ತಿ, ರಾಷ್ಟ್ರೀಯತೆಯ ಬಗ್ಗೆ ಬಿಜೆಪಿ ಆವೇಶದ ಮಾತನಾಡುತ್ತದಯೆ ವಿನಹ ಭಯೋತ್ಪಾದನೆಯನ್ನು ಹತ್ತಿಕ್ಕಲು ಬೇಕಾದ ಎದೆಗಾರಿಕೆ ಅದಕ್ಕಿಲ್ಲ. ಬಿಜೆಪಿ ಕೂಡ ಕಾಂಗ್ರೆಸ್ಸೀಕರಣಗೊಂಡಿದೆ.


ಇವತ್ತು ಭಾರತವನ್ನು ಕಾಪಾಡಲು ಈಗ ಇರುವ ಯಾವ ರಾಜಕೀಯ ಪಕ್ಷಗಳಿಂದಲೂ ಸಾಧ್ಯವಿಲ್ಲ. ಇವತ್ತು ನಮಗೆ ಬೇಕಿರುವುದು ದೇಶಹಿತಕ್ಕಾಗಿ ಸಂಘರ್ಷಮಯ ಬದುಕು ಸವೆಸಿದ ಸರ್ದಾರ್ ವಲ್ಲಭಬಾಯ್ ಪಟೇಲ್. ದೇಶದ ಐಕ್ಯತೆಯ ರಕ್ಷಣೆಗಾಗಿ ’ಆಪರೇಷನ್ ಬ್ಲೂಸ್ಟಾರ್’ ಕಾರ್ಯಾಚರಣೆಗೆ ಆದೇಶ ನೀಡಿ ಕೊನೆಗೆ ತನ್ನ ಜೀವವನ್ನೇ ಬಲಿಕೊಟ್ಟ ಇಂದಿರಾಗಾಂಧಿ ಮತ್ತು ’ಆಪರೇಷನ್ ವಿಜಯ್’ ಮೂಲಕ ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ್ದ ಅಟಲ್ ಬಿಹಾರಿ ವಾಜಪೇಯಿ.


ಇಂಥ ನಾಯಕರನ್ನು ಮತ್ತೊಮ್ಮೆ ಹುಡುಕಿಕೊಳ್ಳದಿದ್ದರೆ ಭಾರತಕ್ಕೆ ನಿಜಕ್ಕೂ ಭವಿಷ್ಯವಿಲ್ಲ.

ಕಾಮೆಂಟ್‌ಗಳು

Harisha - ಹರೀಶ ಹೇಳಿದ್ದಾರೆ…
ಸರಿಯಾದ ಮಾತು ಹೇಳಿದ್ದೀರಿ.. ಈ ರಾಜಕಾರಣಿಗಳು ಇರುವವರೆಗೂ ದೇಶ ಉದ್ಧಾರವಾಗಲಾರದು.
ಅನಾಮಧೇಯಹೇಳಿದ್ದಾರೆ…
Namaste Vijay,
nanna blog updates omme gamanisi.
link kaLuhisikoTTiddakke dhanyavaada.

Vande,
Chetana Teerthahalli
Ravi Adapathya ಹೇಳಿದ್ದಾರೆ…
ಸ್ವಾಮಿ....
ಕಾಂಗ್ರೆಸ್ govt ಬಂದ ಮೇಲೆ ಬಯೋತ್ಪಾದನೆ ವಿರುದ್ದ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ದಿದಿರಿ...ಆದರೆ ಭಾಜಪ ಪಕ್ಷ ಇರುವಾಗ ಏನು ಮಾಡಿದ್ದಾರೆ......?
ಒಬ್ಬನೇ ಒಬ್ಬ ಭಯೋತ್ಪಾದಕನಿಗೆ ಶಿಕ್ಷೆ ಆಗಿದೆಯೇ.........? ಇನ್ನಾದರೂ ಒಂದೇ ಪಕ್ಷವನ್ನು ಹೊಗಳಿ ಬರೆಯುದನ್ನು ಬಿಡಿ.... ಆಗ ನಿಜವಾದ ಪತ್ರಕರ್ತ ಎಂದೆನಿಸಿಕೊಳ್ಳಬಹುದು..!!!!!!!!!!!!
ಅನಾಮಧೇಯಹೇಳಿದ್ದಾರೆ…
ಜೋಶಿಯವರೇ,
ಬೆಂಗಳೂರಿನಲ್ಲಿ ಬಾಂಬ್ ಸ್ಪೋಟ ಆಗಿ ತಿಂಗಳು ಕಳೆದರೂ ಯಾರೆಂದು ಹುಡುಕಲು ಆಗದ ನಿಮ್ಮ ರಾಜ್ಯ ಸರಕಾರ ಏನು ಮಾಡುತ್ತಿದೆ .....?
ರಾಜ್ಯ ಸರಕಾರದ ಗ್ರಹ ಮಂತ್ರಿಗಳು 'ತೆಪ್ಪು' ಗುದ್ದುತ್ತಿರುವರೇ.......?

ನಿಮ್ಮ ಲೇಖನದ ಮೊದಲ ಎರಡು ಸಾಲುಗಳನ್ನು ಓಧಿದರೆ ಸಂಪೂರ್ಣ ಲೇಖನದ ಸಾರಾಂಶ ತಿಳಿಯುತ್ತದೆ.........
prasca ಹೇಳಿದ್ದಾರೆ…
ವಾಜಪೇಯಿ ಕೂಡ ಕಾರ್ಗಿಲ್ ನಿಂದ ಕಾಲ್ತೆಗೆದದ್ದು ಏಕೆ ವಿಜಯ್? ಪಾಕ್ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಭಯೋತ್ಪಾದಕ ತರಭೇತಿ ಶಿಬಿರಗಳನ್ನು ನೆಲಸಮ ಮಾಡಬಹುದಿತ್ತಲ್ವ? ೨೫ ವರ್ಷ ಹಿಂದೆ ಹೋದರೂ ಪರ್ವಾಗಿಲ್ಲ ಯುದ್ದ ಮಾಡಿ ಒಂದೆ ಬಾರಿಗೆ ನಮ್ಮ ಕಂಟಕಗಳನ್ನು ನಿವಾರಿಸಿಕೊಳ್ಳಿ. ಹೇಗಿದ್ದರೂ ಈಗ ೪೫೦೦ ಕೋಟಿ ನಷ್ಟ ಆಗಿದೆ ಅದೂ ಆಗೇ ಬಿಡ್ಲಿ. ಅದೆಲ್ಲ ಕಾಂಗ್ರೆಸ್ ಸರ್ಕಾರದಿಮ್ದ ಸಾಧ್ಯ ಇಲ್ಲ ಬಿಡಿ. ಅಡ್ವಾಣಿಗಂತೂ ಆ ತಾಕತ್ತೆ ಇಲ್ಲ.
ಅನಾಮಧೇಯಹೇಳಿದ್ದಾರೆ…
ಜೋಷಿಯವರೇ? ಯಾಕೇ ಹಂಗೆ ಬಟ್ಟೆ ಹರಿದುಕೊಳ್ಳುತ್ತೀರಿ.
ಸ್ವಲ್ಪ ಕೂಲ್ ಆಗಿ ಆಲೋಚನೆ ಮಾಡಿ. ನೀವು ಹೊಗಳುವ ಅಮೇರಿಕಾವೇ ಈ ಭಯೋತ್ಪಾದಕರನ್ನು ತಯ್ಯಾರಿಸಿ, ಜಗತ್ತಿನ ತುಂಬಾ ಬಿಟ್ಟಿವೆ. ಇವರ ವಿರುದ್ಧ ಧ್ವನಿ ಎತ್ತುವಂತೆ ಕರೆ ನೀಡಿಯೇ ಭಯೋತ್ಪಾದಕರು ಭಾರತವನ್ನು ನೋಡುವಂತೆ ಮಾಡಿದೆ. ವಾಜಪೇಯಿ ಸರ್ಕಾರ, ಅಂದಿನ ರಕ್ಷಣಾಸಚಿವ ಜಸ್ವಂತ್ ಸಿಂಗ್ ಬಂಧಿಸಿರುವ ಭಯೋತ್ಪಾದಕರನ್ನು ವಿಶೇಷ ವಿಮಾನದಲ್ಲಿ ಕರಾಚಿಯವರಿಗೆ ಹೋಗಿ ಬಿಟ್ಟು ಬಂದಿದ್ದಾರೆ. ಇವರ ಕಾಲದಲ್ಲಿಯೇ ಪಾರ್ಲಿಮೆಂಟ್ ಮೇಲೆ ಧಾಳಿ ನಡೆಯಿತು. ಇವನ್ನೆಲ್ಲಾ ನೆನಪಿಸಿಕೊಂಡರೆ ನಿಮ್ಮ ಆವೇಶ ಬರಹದಲ್ಲಿ ಅರ್ಥಸಿಗುತ್ತದೆ. ಇಲ್ಲವಾದರೆ ನಿಮ್ಮದು ಕೇಸರಿ ಕೂಗಾಟವಾಗಿ ಬಿಡುತ್ತದೆ ಅಷ್ಟೇ.
- ಪರುಶುರಾಮ ಕಲಾಲ್
Unknown ಹೇಳಿದ್ದಾರೆ…
ಯಾವ ಸಕಾಱರ ಬಂದರೂ ಬಯೋತ್ಪಾದನೆ ತಡೆಗಟ್ಟುವುದು ಕಷ್ಟ ಇದೆ. ಬಯೋತ್ಪಾದನೆಯನ್ನು ಎಲ್ಲಾ ಪಕ್ಷದವರು ಸಾಕಿ ಬೆಳಸಿದ್ದಾರೆ. ನಮ್ಮ ದೇಶವನ್ನು ಆ ದೇವರು ಬಂದರೂ ಕಾಪಾಡಲುಸಾಧ್ಯವಿಲ್ಲ. ದೇವರೇ ಗತಿ
ಅನಾಮಧೇಯಹೇಳಿದ್ದಾರೆ…
ಯಾವುದೇ ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದರೂ ಭಯೋತ್ಪಾದಕರಿಗೆ ಶಿಕ್ಷೆ ಆಗಿದ್ದು ಹುಡುಕಬೇಕಷ್ಟೆ????ಭಯೋತ್ಪಾದನೆಗೆ ಅವಕಾಶ ಮಾಡಿ ಕೊಟ್ಟಿದ್ದೇ ರಾಜಕೀಯ ಪಕ್ಷಗಳು...ಈಗ ಯಾವ ಪಕ್ಷ ಆಡಳಿತಕ್ಕೆ ಬಂದರೂ ದೇಶಕ್ಕಾಗಿ ಮಾಡೋದು ಅಷ್ಡರಲ್ಲೇ ಇದೆ....
Unknown ಹೇಳಿದ್ದಾರೆ…
ಪಾಪ ವಿಜಯ್ ಜೋಷಿಯವರ ಕಾಮಾಲೆ ಮೋಹ ಒಬ್ಬ ಪತ್ರಕರ್ತನಿಗೆ ಹೇಳಿಸಿದ್ದಲ್ಲ, ಏನೋ ಬಿ.ಜೆ.ಪಿ. ಯ ಮೇಲಿನ ಅತಿಯಾದ ಪ್ರೀತಿಯಿಂದಲೋ ಏನೋ ಬಿ.ಜೆ.ಪಿ.ಸರಕಾರ ನಡೆದ ಘಟನೆ ಒಂದು ನೆನಪಿಗೆ ಬರುವಂತೆ ತೋರುತ್ತಿಲ್ಲ, ಯಾಕಂದರೆ ಜೋಷಿ ಕಲಿತ ಶಾಲೆಯಲ್ಲಿ ಈ ಪಟ್ಯ ಪುಸ್ತಕ ಇದ್ದಿಲ್ಲ ಅಂತ ತೋರುತ್ತೆ. ಜೋಶಿಯವರೇ ನೀವು ಕೂಡ ಪ್ರತಾಪ ಸಿಂಹ ಅವರನ್ನ ಫಾಲ್ಲೌ ಮಾಡಿದರೆ ನಿಮಗೆ ಖಂಡಿತ ರಾಜ್ಯೋತ್ಸವ ಪ್ರಶಸ್ತಿ ಸಿಗುತ್ತೆ ಬಿಡಿ....

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ