ವಿಷಯಕ್ಕೆ ಹೋಗಿ

ಇದು ಸಂವಾದದ ಹೊತ್ತು ಆಗಬೇಕಲ್ಲವೇ?

ನಾವು ಬದುಕುತ್ತಿರುವ ಸಂದರ್ಭವನ್ನು ‘ಫೇಸ್‌ಬುಕ್‌ ಮೂಲಕ ವಿಕಾರಗಳನ್ನು ತೋರಿಸಿಕೊಳ್ಳುವ ಹೊತ್ತು’ ಎಂದು ಕರೆಯಲು ಅಡ್ಡಿಯಿಲ್ಲ ಅನಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಕೆಲವು ಚರ್ಚೆಗಳ ಮಟ್ಟವನ್ನು ಗಮನಿಸಿದರೆ ನಿಮಗೂ ಹಾಗೆ ಅನಿಸಬಹುದು. ಅದರಲ್ಲೂ ಎಡ–ಬಲ ಪಂಥಗಳ ಚರ್ಚೆಗಳಿಗೆ ತಲೆ ಹಾಕಿದರೆ ಮುಗಿದೇ ಹೋಯಿತು. ಅಲ್ಲಿ ಏನಾಗುತ್ತದೆ ಎಂಬುದು ನಿಮ್ಮೆಲ್ಲರ ಗಮನಕ್ಕೂ ಬಂದಿರಬಹುದು ಎಂಬುದು ನನ್ನ ಭಾವನೆ.

ಮೂಡುಬಿದಿರೆಯಲ್ಲಿ ಇದ್ದುಕೊಂಡು, ಮಕ್ಕಳಿಗೆ ಪಾಠ ಹೇಳಿಕೊಡುತ್ತ, ಸಾಹಿತ್ಯ, ಸಮಾಜ, ಅರ್ಥವ್ಯವಸ್ಥೆ ಬಗ್ಗೆ ಮಾತನಾಡುವ, ನಾನು ಅವರ ಮನೆಗೆ ಹೋದಾಗಲೆಲ್ಲ ಒಳ್ಳೆಯ ಎಲೆ ಅಡಿಕೆ ಕೊಡುವ ಅರವಿಂದ ಚೊಕ್ಕಾಡಿಯವರು ಎಡ–ಬಲ ಪಂಥಗಳ ಬಗ್ಗೆ, ಅವೆರಡರ ನಡುವೆ ಸಂವಾದ ಆಗಬೇಕಿರುವ ಅಗತ್ಯದ ಬಗ್ಗೆ ಪುಟ್ಟ ಬರಹ ಬರೆದಿದ್ದಾರೆ. ಆ ಬರಹವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಅವರ ಬರಹಕ್ಕೆ ನಾನು ಬರೆದ ಪ್ರತಿಕ್ರಿಯೆ ಕೂಡ ಇಲ್ಲಿದೆ. ದಯವಿಟ್ಟು ಎರಡನ್ನೂ ಓದಿ. ನಿಮ್ಮ ಅನಿಸಿಕೆ ತಿಳಿಸಿ.
===========




ಚೊಕ್ಕಾಡಿಯವರಿಗೆ ಬರೆದ ಪ್ರತಿಕ್ರಿಯೆ...

ಸರ್, ನಿಮ್ಮ ಬರಹ ಓದಿದ ನಂತರ ಹಳೆಯ ಕೆಲವು ಪ್ರಯತ್ನಗಳು ನೆನಪಿಗೆ ಬಂದವು. ಆ ಪ್ರಯತ್ನಗಳು ನಡೆದಿದ್ದ ಹೊತ್ತಿನಲ್ಲಿ ನೀವೂ ಜೊತೆಯಲ್ಲಿ ಇದ್ದಿದ್ದು ಅಥವಾ ನಾವು ನಿಮ್ಮ ಜೊತೆಯಲ್ಲಿ ಇದ್ದಿದ್ದು ನಿಮ್ಮ ನೆನಪಿನಲ್ಲಿ ಇದೆ ಎಂದು ಭಾವಿಸುವೆ.
ಎಡಪಂಥೀಯರು ಮತ್ತು ಬಲಪಂಥೀಯರಲ್ಲಿ ಇರುವ, ಸಂವಾದಿಸುವ ಮನಸ್ಸಿನ ಹಿರಿಯರನ್ನು ಒಗ್ಗೂಡಿಸಿ ಕಾರ್ಯಕ್ರಮವೊಂದನ್ನು ರೂಪಿಸಬೇಕು ಎಂದು ನಾನು ಮತ್ತು ನನ್ನ ಕೆಲವು ಗೆಳೆಯರು ಆಲೋಚಿಸಿ, ಸಣ್ಣ ಪ್ರಮಾಣದ ಪ್ರಯತ್ನ ನಡೆಸಿದ್ದೆವು. ಇದು ಆಗಿದ್ದು ನಾನು ಸ್ನಾತಕೋತ್ತರ ಪದವಿ ಓದುತ್ತಿದ್ದ ಸಂದರ್ಭದಲ್ಲಿ. ಆಗ ಈ ವಿಚಾರವನ್ನು ನಾನು ನಿಮ್ಮೊಂದಿಗೆ ಹಂಚಿಕೊಂಡಿದ್ದೆ - ಮೂಡುಬಿದಿರೆಯಲ್ಲಿನ ನಿಮ್ಮ ಹಳೆಯ ಮನೆಗೆ ಬಂದು, ಊಟ ಮಾಡಿ, ಜಡಿ ಮಳೆ ಹೊಡೆಯುತ್ತಿದ್ದ ಹೊತ್ತಿನಲ್ಲಿ. ಅಂಥದ್ದೊಂದು ಸಂವಾದ ಆಗಲೇಬೇಕು ಎಂದು ನೀವು ಹೇಳಿದ್ದಿರಿ - ನಮ್ಮ ಎದುರು ಆಗ ಬಿಸಿ ಬಿಸಿ ಅಂಬೊಡೆಯೋ, ಬಜ್ಜಿಯೋ ಇತ್ತು!
ಎಡಪಂಥೀಯರಾಗಿ ಗುರುತಿಸಿಕೊಂಡಿರುವ ಜಿ. ರಾಮಕೃಷ್ಣ ಻ಅಥವಾ ರಾಜಶೇಖರ್ ಅವರನ್ನು ಕರೆಸಬೇಕು. ಬಲಪಂಥೀಯ ಆಲೋಚನೆಗಳನ್ನು ಪರಿಣಾಮಕಾರಿಯಾಗಿ, ಸಹೃದಯರಿಗೆ ಅರ್ಥವಾಗುವ ರೀತಿಯಲ್ಲಿ ಹೇಳುವ ಮುಕುಂದ ಅಥವಾ ವಾದಿರಾಜ್ ಅವರನ್ನು ಕರೆಸಬೇಕು. ಎರಡೂ ಕಡೆಯವರನ್ನು ಒಂದೇ ವೇದಿಕೆಯಲ್ಲಿ ಕೂರಿಸಿ ಜಾತಿ ವ್ಯವಸ್ಥೆ, ಕೋಮುವಾದ, ಆರ್ಥಿಕತೆ ಬಗ್ಗೆ ಅಭಿಪ್ರಾಯಗಳನ್ನು ಅವರಿಂದ ಕೇಳಬೇಕು, ಅಂತಹ ಕಾರ್ಯಕ್ರಮ ಮಾಡಬೇಕು. ಆ ಕಾರ್ಯಕ್ರಮ ಮೂಡುಬಿದಿರೆಯಲ್ಲೇ ಆಗಬೇಕು ಎಂಬ ಆಸೆಯೂ ನಮ್ಮದಾಗಿತ್ತು.
ಅದಾದ ನಂತರ ನಾವು ಕೆಲವರು, ಬಲ ಹಾಗೂ ಎಡಪಂಥಗಳಲ್ಲಿರುವ ಸಹೃದಯರ ಜೊತೆ ಮಾತನಾಡಿದ್ದೆವು. ಅವರಲ್ಲಿ ಕೆಲವರು ಖುಷಿಯಿಂದ ಬರಲು ಒಪ್ಪಿಕೊಂಡಿದ್ದರು. ಆದರೆ, ನಮ್ಮ ಪರೀಕ್ಷೆಗಳು, ಕೋರ್ಸಿನ ಒತ್ತಡಗಳು ಹಾಗೂ ಹಣ ಇಲ್ಲದಿರುವಿಕೆ ಅಂಥದ್ದೊಂದು ಕಾರ್ಯಕ್ರಮ ಆಯೋಜಿಸಲು ಅವಕಾಶ ಕೊಡಲಿಲ್ಲ.
ಅಂಥದ್ದೊಂದು ಕಾರ್ಯಕ್ರಮ ನಾಡಿನ ಬೇರೆ ಬೇರೆ ಕಡೆಗಳಲ್ಲಿ ವ್ಯಾಪಕವಾಗಿ ಆಗಿದ್ದರೆ ಬಲ ಹಾಗೂ ಎಡ ಪಂಥಗಳ ವಿದ್ವಾಂಸರು ಮುಕ್ತವಾಗಿ ಸಂವಾದಿಸುವ ಅವಕಾಶ ಸೃಷ್ಟಿಯಾಗುತ್ತಿತ್ತು. ಈಗಿನಂತೆ ಫೇಸ್‍ಬುಕ್‍‍ ಮೂಲಕ ವಿಕಾರಗಳನ್ನು ತೋರಿಸಿಕೊಳ್ಳುವ ಸಂದರ್ಭ ಎದುರಾಗುತ್ತಿರಲಿಲ್ಲವೇನೋ.
ಈಗಲೂ ಕಾಲ ಮಿಂಚಿಲ್ಲ. ಯಾರಾದರೂ (ಯಾರಾದರೂ ಅಂದರೆ ಅದು ಯಾರೂ ಆಗಬಹುದು) ಇಂಥ ಕಾರ್ಯಕ್ರಮ ಆಯೋಜಿಸಬೇಕು. ಖಂಡಿತ ಆಯೋಜಿಸಬೇಕು. ಅದು ದಕ್ಷಿಣ ಕನ್ನಡ ಜಿಲ್ಲೆಯಿಂದಲೇ ಆರಂಭವಾಗಬೇಕು. ಏಕೆಂದರೆ ಕಮ್ಯುನಿಸ್ಟ್ ಹಾಗೂ ಆರೆಸ್ಸೆಸ್ ಸಂಘಟನೆಗಳೆರೂ ಬಲಿಷ್ಠವಾಗಿರುವ ನೆಲ ಅದು.
ಈ ಫೇಸ್‍ಬುಕ್‍ ಗಲಾಟೆಗಳನ್ನು ಮರೆತು, ವಿಕಾರಗಳನ್ನು ಬದಿಗಿಟ್ಟು ಎಲ್ಲರೂ ಸಂವಾದಿಸುವಂತಹ ಸಂದರ್ಭ ಆದಷ್ಟು ಬೇಗ ಬರಲಿ.

===

ಚೊಕ್ಕಾಡಿಯವರು ಬರೆದಿದ್ದು...

ಎಡಪಂಥೀಯ ಚಿಂತಕರೊಬ್ಬರಿಗೆ ಬೆದರಿಕೆ ಎಂಬ ಸುದ್ದಿ ಕೇಳಿದೆ.ಒಳ್ಳೆಯ ಬೆಳವಣಿಗೆ ಅಂತೂ ಖಂಡಿತಾ ಅಲ್ಲ.
ಆದರೆ ಇಂಥ ಸನ್ನಿವೇಶ ತಾನೇ ತಾನಾಗಿ ಸೃಷ್ಟಿಸಲ್ಪಟ್ಟದ್ದಲ್ಲ.ತೊಂಬತ್ತರ ದಶಕದಲ್ಲೆ ಬಲಪಂಥೀಯರು ಪ್ರಶ್ನಿಸಲು ಪ್ರಾರಂಭಿಸಿದ್ದರು.೨೦೦೩ ರಲ್ಲಿ ಈ ಬಗ್ಗೆ ನಾನು ಕೇಳುವ ಪ್ರಶ್ನೆಗೆ ಉತ್ತರಿಸಬೇಕಾದ ಅಗತ್ಯವಿದೆ ಎಂದು ಬರೆದಿದ್ದೆ.ಹಾಗೆ ಉತ್ತರಿಸಲು ಪ್ರಯತ್ನಿಸಿದ್ದರೆ ಸಂವಾದಕ್ಕೆ ವೇದಿಕೆ ಏರ್ಪಡುತ್ತಾ ಇತ್ತು.ಬಲಪಂಥೀಯರಲ್ಲೂ ವಿಚಾರವನ್ನು ವಿಚಾರವಾಗಿಯೇ ಸ್ವೀಕರಿಸಬಲ್ಲವರು ಇದ್ದಾರೆ.ಅಂಥವರು ಸಂವಾದಕ್ಕೆ ಇಳಿದಿದ್ದರೆ ಹೊಸ ತಲೆಮಾರಿನಲ್ಲಿ ಸಂವಾದದ ಮುಖಾಂತರವೇ ಎಡಪಂಥವನ್ನು ಎದುರಿಸುವ ಒಂದು ತಂಡ ಬರ್ತಾ ಇತ್ತು.ಬೆದರಿಕೆ ಹಾಕುವ ಸನ್ನಿವೇಶವನ್ನು ಅವೈಡ್ ಮಾಡಬಹುದಾಗಿತ್ತು.ಇದು ಏನೇ ಪ್ರಶ್ನಿಸಿದರೂ ಪುರೋಹಿತಶಾಹಿ ಎಂಬ ಸಿದ್ಧ ಉತ್ತರವನ್ನು ಮುಂದಿಡುತ್ತಾ ಹೋದಾಗ ಎಡಪಂಥೀಯರನ್ನು ಪ್ರಶ್ನಿಸುವುದರ ಹೊರತಾದ ರೀತಿಯಲ್ಲಿ ನಿರ್ವಹಿಸಲು ಪ್ರಚೋದನೆ ಕೊಟ್ಟಂತಾಗಿದೆ.ಅದರ ಪರಿಣಾಮ ಹೊಸ ತಲೆಮಾರಿನ ಬಲಪಂಥೀಯರಲ್ಲಿ ಸಂವಾದ ರಹಿತವಾಗಿ ಎಡಪಂಥೀಯರನ್ನು ನಿರ್ವಹಿಸುವವರೇ ತುಂಬಿದ್ದಾರೆ.ಅದರ ಪರಣಾಮದ ಝಲಕ್ ಗಳು ಬೆದರಿಕೆ ಇತ್ಯಾದಿಗಳು.ಇನ್ನೂ ಕೂಡ ಬಲಪಂಥೀಯರಲ್ಲಿ ಒಂದಷ್ಟು ಮಂದಿ ಸಂವಾದಕ್ಕೆ ಯೋಗ್ಯರಾದವರು ಇದ್ದಾರೆ.ಸಂವಾದ ಪರಂರೆಯೊಂದನ್ನು ಹುಟ್ಟುಹಾಕಲು ಪ್ರಯತ್ನಿಸಬಹುದು.
ಒಂದು ವೇಳೆ ಇದು ಹೀಗೆಯೇ ಮುಂದುವರಿಯಲು ಬಿಟ್ಟರೆ ಸಂವಾದ ಪರಂಪರೆಯನ್ನು ಕಳಚಿಕೊಂಡ ಗ್ರೂಪ್ ಹೇಗೆ ಬಲಪಂಥೀಯರಲ್ಲಿ ಹುಟ್ಟಿಕೊಂಡಿತೊ ಅದೇ ರೀತಿ ಎಡಪಂಥೀಯರಲ್ಲೂ ಬೆದರಿಕೆ ಹಾಕುವ ಗ್ರೂಪ್ ಸೃಷ್ಟಿಯಾಗಲಿದೆ.ಸಧ್ಯಕ್ಕೆ ಎಡಪಂಥೀಯರಲ್ಲಿ ಆಕ್ರಮಣಕಾರಿ ಗ್ರೂಪ್ ವ್ಯಾಪಕವಾಗಿಲ್ಲ.ಮಾತಾಡಿದ್ದಕ್ಕೆಲ್ಲ ಕಟುವಾಗಿ ಉತ್ತರಿಸುವುದನ್ನು ಬಿಟ್ಟು,ಕೆಟ್ಟದಾಗಿ ಉತ್ತರಿಸುತ್ತಾ ಹೋದರೆ ಕೆಟ್ಟದಾಗಿ ಉತ್ತರಿಸುವವರಿಗೆ ಉತ್ತರಿಸಲು ಹುಟ್ಟಿಕೊಳ್ಳುವ ತಂಡ ಆಕ್ರಮಣಕಾರಿಗಳದ್ದಲ್ಲದೆ ಬೇರೇನೂ ಆಗಿರುವುದಿಲ್ಲ.
ನಮ್ಮಲ್ಲಿ ಎರಡೂ ತಂಡಗಳ ಅತಿಗಳನ್ನು ಕೊಂಚ ಬ್ಯಾಲೆನ್ಸ್ಡ್ ಆಗಿ ತೆಗೆದುಕೊಂಡು ಹೋಗುವ ತಂಡ ಸಿದ್ಧಾಂತಿಗಳ ರೂಪದಲ್ಲಿಲ್ಲ.ರಾಜಕೀಯ ಪಕ್ಷದ ರೂಪದಲ್ಲಿದೆ.ಆ ಪಕ್ಷ ಎಲ್ಲವನ್ನೂ ಬ್ಯಾಲೆನ್ಸ್ ಮಾಡುವ ಚಿಂತನೆಯಿಂದ ಹಾಗೆ ವರ್ತಿಸಿದೆ ಎಂದು ನಾನು ಭಾವಿಸುವುದಿಲ್ಲ.ಸೋಮಾರಿತನ.ಒಂದಷ್ಟು ಗಲಾಟೆ ಮಾಡಬೇಕಾದರೂ ಕೆಲಸ ಮಾಡಬೇಕಲ್ಲ,ಯಾರು ಅದನ್ನು ಮಾಡ್ತಾರೆ,ಸುಮ್ಮನೆ ಮಲ್ಕೊಂಡ್ಬಿಡೋಣ ಎಂಬ ಧೋರಣೆಯೇ ಹೆಚ್ಚು ಕಾಣ್ತದೆ.ಆದರೆ ಈ ಧೋರಣೆಯಿಂದಲಾದರೂ ಕೊಂಚ ಬ್ಯಾಲೆನ್ಸ್ ಆಗ್ತಾ ಇತ್ತು.ಈಗ ಆ ಶಕ್ತಿಯೇ ನಾಯಕತ್ವದ ಅಭಾವದಿಂದ ತನ್ನನ್ನು ತಾನೇ ಕೊಂದುಕೊಳ್ಳುವ ಹಂತದಲ್ಲಿದೆ.
ಪರಿಸ್ಥಿತಿ ಹೀಗಿರುವಾಗ ಮುಂದಿನ ದಿನಗಳಲ್ಲಿ ಬಲಪಂಥೀಯರು ಮತ್ತು ಎಡಪಂಥೀಯರ ರೋಲ್ ಜಾಸ್ತಿ ಇರುತ್ತದೆ.ಈ ರೋಲ್ ಅನ್ನು ನಿರ್ವಹಿಸಲು ತಮ್ಮನ್ನು ತಾವು ಸನ್ನದ್ಧಗೊಳಿಸಿಕೊಳ್ಳಬೇಕಾಗುತ್ತದೆಆದರೆ ಸನ್ನದ್ಧಗೊಂಡಂತಿಲ್ಲ.ಇತ್ತಂಡಗಳೂ ತಮ್ಮ ತಮ್ಮ ರಾಜಕೀಯ ಪ್ರಭುಗಳ ಪ್ರಭಾವಲಯದಿಂದ ಹೊರಬರುವ ಸ್ಥಿತಿ ಇಲ್ಲ.ಕೇವಲ ಎರಡೇ ವರ್ಷಗಳಲ್ಲಿ ೪೧೭ ರೂಪಾಯಿಯ ಗ್ಯಾಸ್ ೭೭೭ ಕ್ಕೆ ಏರಿದ್ದು ಸರಿಯಾಗಿಲ್ಲ ಎಂದು ಬಲಪಂಥೀಯರಿಗೆ ಗೊತ್ತಾಗುವುದಿಲ್ಲ ಎಂದು ನಾನು ಭಾವಿಸುವುದಿಲ್ಲ.ಗೊತ್ತಾಗ್ತದೆ.ಗೊತ್ತಾದರೂ ಒಪ್ಪಿಕೊಳ್ಳುವುದಿಲ್ಲ.ಏಕೆಂದರೆ ಒಪ್ಪಿಕೊಂಡ ತಕ್ಷಣ ಒಪ್ಪಿಕೊಂಡ ಸಹೃದಯತೆಯನ್ನು ಅಭಿನಂದಿಸುವುದನ್ನು ಬಿಟ್ಟು ಎದುರಾಳಿಗಳು ಲೇವಡಿ ಮಾಡಲು ಸುರು ಮಾಡುತ್ತಾರೆ.ಹೀರೋಗಳನ್ನು ರೂಪಿಸಲು ಕೊಡಬೇಕಾದ ಸಮಯವನ್ನು ವಿಲನ್ ಗಳನ್ನು ಹೆಚ್ಚಿಸಲು ಬಳಸಿಕೊಳ್ಳುತ್ತಿದ್ದೇವೆಂದು ಯಾರಿಗೂ ಅನಿಸುವುದಿಲ್ಲವೆ? ಎಡಪಂಥೀಯರಿರಲಿ ಬಲಪಂಥೀಯರಿರಲಿ ನಮಗಿರುವುದು ಒಂದೇ ದೇಶ.ಇಲ್ಲಿ ಹುಟ್ಟಿ,ಇಲ್ಲಿ ಬದುಕಿ,ಇಲ್ಲೇ ಸಾಯಲಿರುವವರು.ನಮ್ಮ ಮನೆಯಲ್ಲಿ ಭಿನ್ನಾಭಿಪ್ರಾಯಗಳಿರಬಹುದು.ಆದರೆ ನಮ್ಮ ಮನೆಯನ್ನು ನರಕ ಮಾಡಿಕೊಳ್ಳಬಾರದು ಎಂಬ ಪ್ರಜ್ಞೆ ಮನೆಯ ಸದಸ್ಯರಿಗೆಲ್ಲರಿಗೂ ಇರಬೇಡವೆ? ಎಡ,ಬಲ,ನಡು ಏನೆಲ್ಲ ಇರಬಹುದು,ಆದರೆ ಬದುಕು ಈ ಎಲ್ಲ ಸಿದ್ಧಾಂತಗಳನ್ನು ಮೀರಿರುತ್ತದೆ ಮತ್ತು ಶ್ರೇಷ್ಠವಾಗಿರುತ್ತದೆ.ನಮ್ಮ ಬದುಕು ನಮಗೇ ಅಸಹನೀಯವಾಗಬಾರದಲ್ಲವೆ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ...

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her ...

Get up Indians, hang him!

Do you think that whatever the Indian government and its ministers do are according to the secular principle? If your answer is ‘YES’, then you need not read this article! You might be well aware of the case of S.S.Sandhu, Superintendent of Police, Taran Taaran, who himself protected the people of Panjab from the brutal hands of terrorists in the 80s decade. He and his fellowmen had conducted many military operations against Sikh terrorists throughout Panjab and had strived hard to restore normalcy in the Panjab state. Later the National Human Right Commission of India filed many cases against him for he had, allegedly, violated the ‘human rights’ of terrorists! At that time no secularists, no human rights activists were present to advocate on behalf of Sandhu. Later Sandhu surrendered to death as he was unable to prove that he had not violated the ‘human rights’ of terrorists! It is strange but true that many a times Indian ‘secularists’ and ‘human right’ activists advocate on behalf ...