ವಿಷಯಕ್ಕೆ ಹೋಗಿ

ದೇಶಪ್ರೇಮ ಅನ್ನುವುದು ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಮಾತ್ರ ಸೀಮಿತವಾ?

ಮೊಹಾಲಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು ಕ್ರಿಕೆಟ್ ಆಟದಲ್ಲಾ? ಅಥವಾ ಯುದ್ಧದಲ್ಲಾ? ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಪಂದ್ಯ ಗೆದ್ದ ನಂತರ ಕ್ರಿಕೆಟ್ ಪ್ರೇಮಿಗಳು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಭ್ರಮಿಸಿದ ಪರಿ ನೋಡಿದರೆ, ಭಾರತ ಗೆಲುವು ಸಾಧಿಸಿದ್ದು ಕ್ರಿಕೆಟ್ ಪಂದ್ಯವೊಂದರಲ್ಲಿ ಅಲ್ಲ; ಅದಕ್ಕಿಂತಲೂ ಮಿಗಿಲಾದ ಸ್ಪರ್ಧೆಯೊಂದರಲ್ಲಿ ಎಂಬ ಭಾವನೆ ಮೂಡುತ್ತಿತ್ತು.

‘ಯುವಜನತೆಯಲ್ಲಿ ದೇಶದ ಬಗ್ಗೆ ಗೌರವ ಇಲ್ಲ, ದೇಶಭಕ್ತಿಯೇ ಇಲ್ಲ’ ಎಂಬಂತಹ ಗೊಣಗಾಟಗಳಿಗೆ ಉತ್ತರ ಎಂಬಂತಿತ್ತು ಅಂದಿನ ಸಂಭ್ರಮಾಚರಣೆ.

ಹಾಗಾದರೆ ಯುವಕರ ದೇಶಪ್ರೇಮ ಎಂದರೆ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಮಾತ್ರ ಉಕ್ಕಿಬರುವಂಥದ್ದಾ? ಬೇರೆ ದೇಶಗಳ ವಿರುದ್ಧ ಭಾರತ ಜಯಗಳಿಸಿದಾಗ ಈ ಪರಿಯ ಖುಷಿ ಏಕಿರುವುದಿಲ್ಲ? ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳಾದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಗೆದ್ದಾಗ ಈ ಪರಿಯ ದೇಶಪ್ರೇಮ ಎಲ್ಲಿ ಅಡಗಿರುತ್ತದೆ? ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ೮೫ ರನ್ ಸಿಡಿಸಿದಾಗ ನಮ್ಮಲ್ಲಿ ಉಕ್ಕಿ ಬರುವ ಭಾವನೆಗಳು ಅದೇ ‘ಕ್ರಿಕೆಟ್ ದೇವತೆ’ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದಾಗ ಏಕೆ ಸ್ಫುರಿಸುವುದಿಲ್ಲ? ಎಂಬ ಪ್ರಶ್ನೆಗಳೂ ಹಿರಿಯರಿಂದ ಸಹಜವಾಗಿಯೇ ಬಂದವು.

ನಿಜ, ಪಾಕಿಸ್ತಾನದ ವಿರುದ್ಧ ಪಂದ್ಯ ಗೆದ್ದಾಗ ಭಾರತೀಯರಲ್ಲಿ ಸ್ಫುರಿಸುವ ಸಂಭ್ರಮ ಬೇರೆಯದೇ ಮಾದರಿಯದು, ಇತರ ದೇಶಗಳ ವಿರುದ್ಧ ಗೆಲುವು ಸಾಧಿಸಿದಾಗ ಬಾರದಂಥದ್ದು. ಇದಕ್ಕೆ ಸಾಕಷ್ಟು ಕಾರಣಗಳಿವೆ.

ಎಪ್ಪತರ ದಶಕದ ನಂತರ ಜನಿಸಿದವರೇ ಹೆಚ್ಚಾಗಿರುವ ಭಾರತೀಯರಲ್ಲಿ, ಪಾಕಿಸ್ತಾನವನ್ನು ಹೆಚ್ಚಿನವರು ಅರ್ಥ ಮಾಡಿಕೊಂಡಿರುವುದು ಪತ್ರಿಕೆ, ಪುಸ್ತಕಗಳ ಮೂಲಕ. ಕಾಶ್ಮೀರದಲ್ಲಿ ಭಯೋತ್ಪಾದಕರ ದಾಳಿ, ಭಯೋತ್ಪಾದಕರ ದಾಳಿಗೆ ಅಮಾಯಕರ ಬಲಿ, ಉಗ್ರರಿಗೆ ಪಾಕ್ ನಂಟು ಎಂಬ ವರದಿಗಳನ್ನು ಪತ್ರಿಕೆಗಳಲ್ಲಿ ಪ್ರತಿನಿತ್ಯ ಓದುವ ನಮ್ಮಲ್ಲಿ ಪಾಕಿಸ್ತಾನವೆಂಬ ಪುಂಡು ರಾಷ್ಟ್ರದ ಬಗ್ಗೆ ಆಕ್ರೋಶ ಮೂಡುವುದು ಸಹಜ. ಭಾರತದ ವಿಭಜನೆಯ ನಂತರ ತನ್ನ ಪಾಡಿಗೆ ತಾನಿರಲು ಪಾಕಿಸ್ತಾನಕ್ಕೆ ಯಾವ ಅಡಚಣೆಯೂ ಇರಲಿಲ್ಲ. ಒಂದು ಬದಿಯಲ್ಲಿ ಯಾವ ರೀತಿಯಲ್ಲೂ ತನಗೆ ತೊಂದರೆ ನೀಡುವ ಯೋಚನೆಯನ್ನೂ ಮಾಡದ ಭಾರತ, ಇನ್ನೊಂದು ಬದಿಯಲ್ಲಿ ತನ್ನೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡ ಆಫ್ಘಾನಿಸ್ತಾನ. ಇದು ಪಾಕಿಸ್ತಾನಕ್ಕೆ ನೆಮ್ಮದಿಯಿಂದಿರಲು ಸಾಕಿತ್ತು.

ಆದರೆ, ವಿನಾಕಾರಣ ಭಾರತದ ಮೇಲೆ ದಂಡೆದ್ದು ಬರುವ ಪಾಕಿಸ್ತಾನದ ರಾಜಕೀಯ ನಾಯಕರ ಮನಃಸ್ಥಿತಿಯೇ ಭಾರತೀಯರಲ್ಲಿ ಆ ದೇಶದ ಮೇಲೆ ಆಕ್ರೋಶ ಹರಳುಗಟ್ಟಲು ಕಾರಣ. ೧೯೪೮, ೧೯೬೫, ೧೯೭೧ ಮತ್ತು ೧೯೯೯ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ಧಗಳು, ಪ್ರತಿದಿನವೆಂಬಂತೆ ನಡೆಯುತ್ತಿರುವ ಪಾಕಿಸ್ತಾನ ಪ್ರಾಯೋಜಿತ ಛಾಯಾ ಸಮರ ಆ ದೇಶ ಭಾರತದ ಸಾಂಪ್ರದಾಯಿಕ ಎದುರಾಳಿ ಎಂಬ ಮನೋಭಾವವನ್ನು ಜನರ ಮನಸ್ಸಿನಲ್ಲಿ ಗಟ್ಟಿಗೊಳಿಸಿವೆ.

ಪಾಕಿಸ್ತಾನದ ಜನಸಾಮಾನ್ಯರಲ್ಲಿ ಲಕ್ಷಾಂತರ ಮಂದಿಗೆ ಭಾರತದೊಂದಿಗೆ ಶಾಂತಿಯಿಂದಿರುವ ಆಸೆಯಿರಬಹುದು. ಆದರೆ, ಅದಕ್ಕೆ ದೊಡ್ಡ ಪ್ರಮಾಣದ ಕ್ರಿಯಾತ್ಮಕ ಅಭಿವ್ಯಕ್ತಿ ಇನ್ನೂ ದೊರೆತಿಲ್ಲ. ಅಲ್ಲಿನ ರಾಜಕೀಯ ನಾಯಕರು ಪೋಷಿಸಿರುವ ದ್ವೇಷದ ಮನಃಸ್ಥಿತಿ ಹಾಗೆಯೇ ಇದೆ.

ಅದೇ ಕಾರಣಕ್ಕೆ, ಭಾರತ-ಪಾಕ್ ಕ್ರಿಕೆಟ್ ಪಂದ್ಯಾಟವೆಂದರೆ ಅಭಿಮಾನಿಗಳ ಮನದಲ್ಲಿ ಉನ್ಮಾದ ಸೃಷ್ಟಿಯಾಗುವುದು. ದೇಶಪ್ರೇಮ ಹೆಚ್ಚಿನ ಸಂದರ್ಭಗಳಲ್ಲಿ ಪಾಕಿಸ್ತಾನದ ವಿರುದ್ಧ ಮಾತ್ರ ಅಭಿವ್ಯಕ್ತಿಗೊಳ್ಳುವುದು. ಶ್ರೀಲಂಕಾ, ದಕ್ಷಿಣ ಆಫ್ರಿಕ ವಿರುದ್ಧ ಭಾರತ ಗೆದ್ದಾಗ ಈ ಪರಿಯ ಉನ್ಮಾದ ಏಕಿರುವುದಿಲ್ಲ ಎಂಬುದಕ್ಕೂ ಇದೇ ಕಾರಣ - ಆ ದೇಶಗಳು ಭಾರತವನ್ನು ವಿನಾಕಾರಣ ಗೋಳು ಹೊಯ್ದುಕೊಂಡಿಲ್ಲ!

ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿ ತೋರಿದ ಕ್ರೀಡಾ ಮನೋಭಾವ ನಿಜಕ್ಕೂ ಅನುಕರಣೀಯ. ಅಂಥ ಮನೋಭಾವವನ್ನು ಭಾರತೀಯರು ಖಂಡಿತ ಸ್ವಾಗತಿಸುತ್ತಾರೆ. ಆದರೆ, ಅವರು ಪಾಕಿಸ್ತಾನಕ್ಕೆ ತೆರಳಿದ ನಂತರ ಭಾರತದ ಕುರಿತು ನೀಡಿದ ಹೇಳಿಕೆಯನ್ನು ಯಾವುದೇ ಸಭ್ಯ ಕ್ರೀಡಾಪ್ರೇಮಿ ವಿರೋಧಿಸುತ್ತಾನೆ ಎಂಬುದನ್ನೂ ಮರೆಯುವಂತಿಲ್ಲ.

ಇದೇನೇ ಇರಲಿ, ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಭಾರತ ಪಾಕಿಸ್ತಾನ ನಡುವೆ ೧೯೯೯ರ ಫೆಬ್ರವರಿಯಲ್ಲಿ ನಡೆದ ಟೆಸ್ಟ್ ಪಂದ್ಯವನ್ನೊಮ್ಮೆ ನೆನಪಿಸಿಕೊಳ್ಳಿ. ಅದೇ ಪಂದ್ಯದಲ್ಲೇ ಕನ್ನಡಿಗ ಅನಿಲ್ ಕುಂಬ್ಳೆ ಹತ್ತು ವಿಕೆಟ್ ಪಡೆದದ್ದು. ಆ ಪಂದ್ಯದಲ್ಲೂ ಪಾಕಿಸ್ತಾನಿ ಆಟಗಾರರು ತೋರಿದ ಕ್ರೀಡಾಮನೋಭಾವ ನಿಜಕ್ಕೂ ಶ್ರೇಷ್ಠ ಮಟ್ಟದ್ದು. ಕುಂಬ್ಳೆ ವಿಶ್ವದಾಖಲೆ ಸೃಷ್ಟಿಸಬಾರದು ಎಂದು ಒಬ್ಬ ಪಾಕಿಸ್ತಾನ ಆಟಗಾರ ರನ್ ಔಟ್ ಆಗಿದ್ದರೆ ಅಥವಾ ಬೇರೆ ಬೌಲರ್‌ಗೆ ವಿಕೆಟ್ ಒಪ್ಪಿಸಿದ್ದರೆ ಕುಂಬ್ಳೆ ಹೆಸರಿನಲ್ಲಿ ಅಂಥ ಮಹತ್ವದ ದಾಖಲೆ ಇರುತ್ತಿರಲಿಲ್ಲ. ಇಂಥ ಅನೇಕ ಉದಾಹರಣೆಗಳೂ ನಮ್ಮ ಕಣ್ಣ ಮುಂದೆ ಇವೆ.

ಇಷ್ಟಿದ್ದರೂ ಭಾರತೀಯರು ಪಾಕಿಸ್ತಾನದ ವಿರುದ್ಧ ಆಟ ಆಡುವಾಗ ಮಾತ್ರ ಇತರ ತಂಡಗಳ ನಡುವೆ ಆಡುವಂತೆ ಆಡುವುದಿಲ್ಲ. ಕಾರಣ ಇಲ್ಲಿಯವರೆಗೆ ಭಾರತ ಪಾಕಿಸ್ತಾನದಿಂದ ಅನುಭವಿಸಿರುವುದರಲ್ಲಿ ನೋವೇ ಹೆಚ್ಚು. ಆ ನೋವು ಮಾಯಲಿ, ಪಾಕಿಸ್ತಾನದ ನಾಯಕರು ಭಾರತದೆಡೆಗೆ ತಮ್ಮ ಮನೋಭಾವ ಬದಲಿಸಿಕೊಳ್ಳಲಿ. ಆಗ ಭಾರತ-ಪಾಕಿಸ್ತಾನ ನಡುವಿನ ಪಂದ್ಯಗಳು ಯಾರಲ್ಲೂ ಯುದ್ಧೋನ್ಮಾದ ಹುಟ್ಟಿಸುವುದಿಲ್ಲ. ‘ದೇಶಪ್ರೇಮ ಎಂಬುದು ಪಾಕಿಸ್ತಾನದ ವಿರುದ್ಧ ಮಾತ್ರ ಪ್ರದರ್ಶಿಸುವಂಥದ್ದಾ’ ಎಂಬ ಪ್ರಶ್ನೆಗಳೂ ಹುಟ್ಟುವುದಿಲ್ಲ.

ಅಂದಹಾಗೆ, ಚೀನಾ ಕೂಡ ಭಾರತದ ವಿರುದ್ಧ ಯುದ್ಧ ಮಾಡಿದೆ. ಮೋಸದಿಂದ ನಮ್ಮ ಕೈಲಾಸ ಪರ್ವತ ಮತ್ತು ಮಾನಸ ಸರೋವರಗಳನ್ನು ಆಕ್ರಮಿಸಿಕೊಂಡಿದೆ. ಭಾರತೀಯರಿಗೆ ಪಾಕಿಸ್ತಾನದ ಬಗ್ಗೆ ಯಾವ ಮನೋಭಾವ ಇದೆಯೋ ಅದೇ ಮನೋಭಾವವೇ ಚೀನಾ ದೇಶ ಬಗ್ಗೆಯೂ ಇದೆ. ಒಂದು ವೇಳೆ ಚೀನಾ ಕೂಡ ಕ್ರಿಕೆಟ್ ಆಡುವ ದೇಶವಾಗಿದ್ದು, ಅದರದ್ದೂ ಅಂತರರಾಷ್ಟ್ರೀಯ ಕ್ರಿಕೆಟ್ ತಂಡ ಇದ್ದಿದ್ದರೆ ಭಾರತ-ಚೀನಾ ಪಂದ್ಯಗಳೂ ಭಾರತ-ಪಾಕ್ ಪಂದ್ಯಗಳಂತೆಯೇ ’ಬಿಸಿ ಬಿಸಿ’ ವಾತಾವರಣ ಸೃಷ್ಟಿಸುತ್ತಿದ್ದವೇನೊ!?

ಕ್ರಿಕೆಟ್ ಅಲ್ಲದೆ ಹಾಕಿ, ಫುಟ್ಬಾಲ್‌ನಂತಹ ಪಂದ್ಯಗಳು ಏಕೆ ಈ ಪರಿಯ ಭಾವುಕತೆಯನ್ನು ನಮ್ಮಲ್ಲಿ ಸೃಷ್ಟಿಸುವುದಿಲ್ಲ ಎಂಬ ಪ್ರಶ್ನೆಗೆ ಉತ್ತರ ನಮ್ಮಲ್ಲೇ ಇದೆ. ಆ ಯಾವ ಆಟವನ್ನೂ ಭಾರತೀಯರು ಕ್ರಿಕೆಟ್‌ನಷ್ಟು ಗಾಢವಾಗಿ ಪ್ರೀತಿಸಲು ಆರಂಭಿಸಿಲ್ಲ, ಅಷ್ಟೆ.

- ವಿಜಯ್ ಜೋಷಿ

ಕಾಮೆಂಟ್‌ಗಳು

srinath bhat ಹೇಳಿದ್ದಾರೆ…
Its absolutely true that we perceive a indo-pak cricket match as a war between the nation. The whole nation had come to a standstill during the semifinal match In Mohali. That day reminded me of the ayodhya judgment day. I am mentioning it because, In India if not all most of the people from other sect were supporting Pakistan during the match. Even after giving all the facilities to that sect after recognizing them as a minority (though they are not), Why is this loyalty towards Pakistan by this people who were born and bought up in India? This question is out of context. But it has to be answered….

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ