ವಿಷಯಕ್ಕೆ ಹೋಗಿ

ಅಭಿವೃದ್ಧಿಯ ಜಪ: ಕೇಳಿಸದ ಪ್ರಕೃತಿಯ ಆಲಾಪ


ಅದು 1980-90ರ ದಶಕ. ಪ್ರಪಂಚದ ಅತಿಸೂಕ್ಷ್ಮ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟ ಸಾಲಿನ ಉತ್ತರ ಕನ್ನಡ ಜಿಲ್ಲೆಗೆ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಯೋಜನೆಗಳು ದಾಂಗುಡಿಯಿಡಲು ಸಿದ್ಧವಾಗಿ ನಿಂತಿದ್ದ ಕಾಲ.ಕೈಗಾದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಅಣುಸ್ಥಾವರದ, ಬೇಡ್ತಿ ಯೋಜನೆ ವಿರುದ್ಧ ರಾಜ್ಯದಾದ್ಯಂತ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿದ್ದವು. 1981-82ರ ಸುಮಾರಿಗೆ ಉ.ಕ. ಜಿಲ್ಲೆಯ ಶಿರಸಿಯಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಸಭೆ ಸೇರಿ ಬೃಹತ್ ಜಲವಿದ್ಯುತ್ ಯೋಜನೆಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದ್ದರು.

ಶಿರಸಿ ತಾಲೂಕಿನ ಭೈರುಂಬೆಯ ಪ್ರಗತಿಪರ ಕೃಷಿಕ ಕೆ.ಎಂ. ಹೆಗಡೆ ಮತ್ತಿತರರು 1995-96ರ ಸಮಯದಲ್ಲಿ ಉ.ಕ. ಜಿಲ್ಲೆಗೆ ಪರ್ಯಾಯ ಅಭಿವೃದ್ಧಿ ಮಾದರಿಗಳ ರೂಪುರೇಷೆಗಳ ಬಗ್ಗೆ ಚಿಂತನೆ ನಡೆಸಿದ್ದರು. 1993-94ರಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬೇಡ್ತಿ ಯೋಜನೆಯನ್ನು ವಿರೋಧಿಸಿ ತಾವೇ ಖುದ್ದಾಗಿ ಸೋಂದಾದಿಂದ ಯಲ್ಲಾಪುರ ತಾಲೂಕಿನ ಮಾಗೋಡಿನ ತನಕ ಪಾದಯಾತ್ರೆ ನಡೆಸಿದ್ದರು; ಬೇಡ್ತಿ ನದಿಗೆ ಅಣೆಕಟ್ಟು ನಿರ್ಮಿಸಲು ಬಿಡಲಾರೆವು ಎಂದು ಮಾಗೋಡಿನಲ್ಲಿ ಸುಮಾರು 40 ಸಾವಿರ ಮಂದಿ ಪ್ರತಿಜ್ಞೆ ಕೈಗೊಂಡಿದ್ದರು. ಹೀಗೆ ಇಡೀ ಉ.ಕ. ಜಿಲ್ಲೆಯೇ ಪರಿಸರ ಪರ ಹೋರಾಟವೊಂದರಲ್ಲಿ ಕುದಿಯುತ್ತಿತ್ತು.

ಇಂಥ ಮಹತ್ವದ ಕಾಲಘಟ್ಟದಲ್ಲಿ, ಅಂದರೆ 1989ರಲ್ಲಿ ಕಡಲ ತಡಿಯ ಭಾರ್ಗವ ಶಿವರಾಮ ಕಾರಂತರು ಕೆನರಾ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕೆ ಇಳಿಯುವ ನಿರ್ಧಾರ ಕೈಗೊಂಡರು. ಅವರು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದು ರಾಜಕೀಯ ಜೀವನ ಆರಂಭಿಸಲು ಅಲ್ಲ; ಬದಲಿಗೆ ಪ್ರಕೃತಿ ವಿರೋಧಿ ಯೋಜನೆಗಳ ವಿರುದ್ಧದ ಬಂಡಾಯಕ್ಕೆ ಶಕ್ತಿ ನೀಡಲು.




ಆ ಸಂದರ್ಭದಲ್ಲಿ ಉ.ಕ. ಜಿಲ್ಲೆಯ ರಾಜಕೀಯ ಪರಿಸ್ಥಿತಿ ಗಮನಿಸಿದ್ದ ರಾಜಕೀಯ ವಿಶ್ಲೇಷಕರು ‘ಚುನಾವಣೆಯಲ್ಲಿ ಕಾರಂತರ ಜಯ ನಿಶ್ಚಿತ’ ಎಂದು ಷರಾ ಬರೆದಿದ್ದರು. ಇಷ್ಟಿದ್ದರೂ ಚುನಾವಣೆ ಫಲಿತಾಂಶ ಬಂದಾಗ ಕಾರಂತರಿಗೆ ಸೋಲಾಗಿತ್ತು.ಅದೇ ಕೊನೆ, ಅನಂತರ ರಾಜ್ಯ ರಾಜಕೀಯದಲ್ಲಿ ಯಾರೊಬ್ಬರೂ ಪರಿಸರ ಸಂರಕ್ಷಣೆಯನ್ನು ಗುರಿಯಾಗಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ ದಾಖಲೆ ಇಲ್ಲ.


ನಮ್ಮ ಜನಪ್ರಿಯ ರಾಜಕೀಯ ಪಕ್ಷಗಳ ಸಿದ್ಧಾಂತದ ಬಗ್ಗೆ ಒಮ್ಮೆ ಕಣ್ಣು ಹಾಯಿಸೋಣ. ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್‌ನ ಅಜೆಂಡಾ ಬಡತನ ನಿರ್ಮೂಲನೆ, ಜಾತ್ಯತೀತ ತತ್ವದ ಬಲಪಡಿಸುವಿಕೆ ಮತ್ತು ಅಭಿವೃದ್ಧಿ.ದೇಶದ ಪ್ರಮುಖ ವಿರೋಧ ಪಕ್ಷವಾದ ಬಿಜೆಪಿಯ ರಾಜಕೀಯ ಸಿದ್ಧಾಂತ ಗಾಂಧೀ ಪ್ರಣೀತ ಸಮಾಜವಾದ (1984ರ ಲಖನೌ ಸಮಾವೇಶದಲ್ಲಿ ಪಕ್ಷ ಕೈಗೊಂಡ ನಿರ್ಣಯದಂತೆ). ಇನ್ನು ಎಡಪಕ್ಷಗಳು, ಜನತಾದಳ, ಡಿಎಂಕೆ, ಪಿಎಂಕೆ ಮುಂತಾದ ಅಸಂಖ್ಯ ಪಕ್ಷಗಳ ರಾಜಕೀಯ ಸಿದ್ಧಾಂತ ಕೂಡ ಬಡತನ ನಿರ್ಮೂಲನೆ, ಅಭಿವೃದ್ಧಿಯೇ ಆಗಿದೆ. ರಾಜಕೀಯ ಪಕ್ಷಗಳು ತಾವು ಹೇಳಿಕೊಳ್ಳುವ ಸಿದ್ಧಾಂತವನ್ನು ಎಷ್ಟರಮಟ್ಟಿಗೆ ಪಾಲಿಸುತ್ತವೆ ಎಂಬ ವಿಚಾರದ ಚರ್ಚೆಗೆ ಈಗ ಹೋಗುವುದೇ ಬೇಡ!

ಆದರೆ ಪ್ರಶ್ನೆಯಿಷ್ಟೆ: ನಮ್ಮ ಪ್ರಮುಖ ರಾಜಕೀಯ ಪಕ್ಷಗಳಿಗೆ ಕನಿಷ್ಟ ಹೇಳಿಕೊಳ್ಳಲಿಕ್ಕಾದರೂ ಪರಿಸರ ಪರ ನಿಲುವು ಇಲ್ಲವಾ? ಯಾವ ಪಕ್ಷಕ್ಕೆ ಅಂಥ ಗಟ್ಟಿ ನಿಲುವಿದೆ? ಕಾಂಗ್ರೆಸ್ ಆಡಳಿತವಿದ್ದಾಗ ಪರಿಸರ ವಿರೋಧಿ ಯೋಜನೆಯೊಂದು ಜಾರಿಗೆ ಬಂದರೆ ಬಿಜೆಪಿ ಅದನ್ನು ವಿರೋಧಿಸುವ ನಾಟಕವಾಡುತ್ತದೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಇದೇ ನಾಟಕ ಆಡುವ ಸರದಿ ಕಾಂಗ್ರೆಸ್‌ನದ್ದಾಗುತ್ತದೆ, ಅಷ್ಟೆ. ಇದೇ ಕಾರಣಕ್ಕೇ ಇವತ್ತು ನಮ್ಮ ರಾಜಕೀಯ ಪಕ್ಷಗಳಿಗೆ ಎಸ್.ಇ.ಝೆಡ್, ತದಡಿ ಯೋಜನೆ, ಗುಂಡ್ಯ ಯೋಜನೆ, ಅಂಕೋಲಾ-ಹುಬ್ಬಳ್ಳಿ ರೈಲು ಮಾರ್ಗ, ಕುಲಾಂತರಿ ತಳಿಗಳ ಬಗ್ಗೆ ಒಂದು ಖಚಿತ ನಿಲುವು ತೆಗೆದುಕೊಳ್ಳಲಾಗುತ್ತಿಲ್ಲ.

ನಾವು ಪ್ರಾಕೃತಿಕ ಸಂಪನ್ಮೂಲಗಳನ್ನು ಈಗ ಬಳಸುತ್ತಿರುವ ವೇಗದಲ್ಲೇ ಮುಂದೆಯೂ ಬಳಸಿದರೆ ಈ ಭೂಮಿ ಇನ್ನು ನೂರು ವರ್ಷಕ್ಕಿಂತ ಹೆಚ್ಚು ಕಾಲ ಬಾಳಲಾರದು ಎಂಬ ಮಾತು ಪರಿಸರ ವಿಜ್ಞಾನಿಗಳ ವಲಯದಲ್ಲಿ ಈಗಾಗಲೇ ಕೇಳಿಬರುತ್ತಿದೆ.ಪರಿಸರ ಹಾಳು ಮಾಡುವ ಕೆಲಸದಲ್ಲಿ ಭಾರತ ಕೂಡ ವಿಶ್ವದ ಮುಂದುವರೆದ ದೇಶಗಳಿಗೆ ಸ್ಪರ್ಧೆ ನೀಡುತ್ತಿದೆ.ಇನ್ನು ‘ಅಭಿವೃದ್ಧಿ’ಯ ಹೆಸರಿನಲ್ಲಿ ಅರಣ್ಯ ಮತ್ತು ಕೃಷಿ ಭೂಮಿಯನ್ನೂ ಕೈಗಾರಿಕೆಗಳಿಗೆ ದಾನ ಮಾಡುವ ಕೆಲಸ ನಮ್ಮ ದೇಶದಲ್ಲಿ ನಡೆಯುತ್ತಿದೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಭಾರತ ಭೀಕರ ಆಹಾರ ಕ್ಷಾಮಕ್ಕೆ ಒಳಗಾಗುವುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ.

ಹಿಂದೆ ಎಲ್ಲೋ ಓದಿದ ನೆನಪು. ಬಹುಷಃ ಯು.ಆರ್. ಅನಂತಮೂರ್ತಿ ಅವರು ಬರೆದ ವಾಲ್ಮೀಕಿಯ ನೆವದಲ್ಲಿ ಪುಸ್ತಕದಲ್ಲಿರಬೇಕು: "ನಮ್ಮಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ... ಹೀಗೆ ಎಲ್ಲ ಜಾತಿ ಧರ್ಮಗಳ ಪರವಾಗಿ ಮಾತನಾಡಲು ಒಂದೊಂದು ರಾಜಕೀಯ ಪಕ್ಷಗ್ಳಿವೆ. ಆದರೆ ನಮ್ಮ ದೇಶದ ಅವಿಭಾಜ್ಯ ಅಂಗವಾದ ಪರಿಸರ, ಪ್ರಾಣಿ, ಪಕ್ಷಿಗಳ ಪರವಾಗಿ ಮಾತನಾಡಲು ಒಂದೇ ಒಂದೆ ರಾಜಕೀಯ ಪಕ್ಷನಮ್ಮಲ್ಲಿಲ್ಲ" ಎಂದು ಅವರು ಬರೆದಿದ್ದರು.

ರಾಜಕೀಯ ಎಂಬುದು ಕೊಳಕು, ಅಲ್ಲಿರುವವರೇ ಭ್ರಷ್ಟರು ಎಂಬ ಮಾತುಗಳನ್ನು ಕ್ಷಣಕಾಲ ಬದಿಗಿಟ್ಟು ಯೋಚಿಸಿದರೆ ಇಂದು ಪರಿಸರಪರ ಚಳವಳಿಗಳಿಗೆ ರಾಜಕೀಯ ಬಲ ಅತ್ಯಗತ್ಯ ಎಂಬುದು ಯಾರಿಗಾದರೂ ಮನವರಿಕೆಯಾದೀತು.ಪರಿಸರದ ಪರವಾಗಿ ಯಾರೆಷ್ಟೇ ಪ್ರಾಮಾಣಿಕ ಹೋರಾಟ ನಡೆಸಿದರೂ ಆಳುವವರಿಗೆ ಅವರ ಕಳಕಳಿ ಅರ್ಥವಾಗದಿದ್ದರೆ ಆ ಹೋರಾಟ ವ್ಯರ್ಥವಾಗಿಬಿಡುವ ಅಪಾಯ ಇದೆ. ರಾಜಕೀಯ ಬಲವಿಲ್ಲದ ಹೋರಾಟ ಬಲಹೀನನ ಆರ್ತನಾದವಾಗುವ ಸಂಭವವೂ ಇದೆ.ಇದಕ್ಕೆ ನಮ್ಮ ಇತಿಹಾಸವೇ ಸಾಕ್ಷಿ.

ನಮ್ಮ ಭೂಮಿ, ಕಾಡನ್ನು ರಕ್ಷಿಸಲು ಆಡಳಿತ ಕೇಂದ್ರದಲ್ಲಿ ಅಚಲ ನಿರ್ಧಾರ ತೆಗೆದುಕೊಳ್ಳಬಲ್ಲ ಗಟ್ಟಿಯಾದ ನಾಯಕತ್ವ ಬೇಕು. ನಮ್ಮ ನೆಮ್ಮದಿಯ ಬದುಕಿಗೆ ಪ್ರಬಲ ‘ಹಸಿರು ಪಕ್ಷ’ ಬೇಕು. ನಾಡಿನ ಅಭಿವೃದ್ಧಿ ಮಾಡುತ್ತೇವೆ ಎಂದು ದಿನಂಪ್ರತಿ ಘೋಷಿಸುವ ರಾಜಕಾರಣಿಗಳು ತಮ್ಮ ಪ್ರಣಾಳಿಕೆಗಳಲ್ಲಿ ‘ಹಸಿರು ತತ್ವ’ವನ್ನು ತರುವ ಬಗ್ಗೆ ಗಂಭೀರವಾಗಿ ಯೋಚಿಸಬೇಕು.

ವಿಜಯ್ ಜೋಶಿ

ಕಾಮೆಂಟ್‌ಗಳು

Jagadeesh Balehadda ಹೇಳಿದ್ದಾರೆ…
ನಿಜ . ಇತ್ತೀಚಿನ ದಿನಗಳಲ್ಲಿ ರಾಜಕಾರಣಿಗಳ ವರ್ತನೆ ಎಲ್ಲರಿಗೂ ಬೇಸರ ತರುತ್ತಿದೆ. ಬಹುತೇಕ ರಾಜಕಾರಣಿಗಳು ತಮ್ಮ ಸ್ವಾರ್ಥಸಾಧನೆ ಕಡೆ ಚಿಂತಿಸುವಲ್ಲೇ ೫ ವರ್ಷ ಕಳೆದು ಹೋಗಿರುತ್ತದೆ. 'ಎಲ್ಲರೂ ಒಂದೇ ದೋಣಿಯ ಕಳ್ಳರು' ಎಂಬ ನಾಣ್ಣುಡಿ ನೆನಪಾಗುತ್ತಿದೆ.
Unknown ಹೇಳಿದ್ದಾರೆ…
ವಿಜು ನೀನು ವಿದ್ಯಾರ್ಥಿ ಅಲ್ಲ ಈಗ ನೀನು ಕೆಲಸ ಮಾಡುತ್ತಿದ್ದೇ ನಿನ್ನ ಬ್ಲಾಗಿನಲ್ಲಿ ನಿನ್ನ ಪ್ರೋಫೈಲ್ ಬದಲಾಯಿಸು ಯಾರಾದರು ನೋಡಿದರೆ ಈ ಬ್ಲಾಗಿಗೆ ಜೀವ ಇಲ್ಲ ಎನ್ನುತ್ತಾರೆ. ಒಕೆನಾ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ