ವಿಷಯಕ್ಕೆ ಹೋಗಿ

ಪರಿಸರ ಸಂರಕ್ಷಣೆಯೇ ಅಭಿವೃದ್ಧಿಯಾಗಬಾರದೇ?

ಅಂಕೋಲಾ ಮತ್ತು ಹುಬ್ಬಳ್ಳಿ ನಡುವಿನ ರೈಲು ಮಾರ್ಗ ಕಾರ್ಯಗತಗೊಂಡರೆ ಆರ್ಥಿಕವಾಗಿ ಬಹಳ ಅನುಕೂಲವಾಗುತ್ತದೆ. ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾಗಾಟದ ಅಮೂಲ್ಯ ವೇಳೆ ಮತ್ತು ಇಂಧನ ಉಳಿತಾಯವಾಗುತ್ತದೆ.

ಆದರೆ ಈ ಯೋಜನೆ ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಕ್ಕೆ ಅಪಾರ ಪ್ರಮಾಣದ ಪೆಟ್ಟು ನೀಡುತ್ತದೆ. ಸಾವಿರಾರು ಎಕರೆ ನೈಸರ್ಗಿಕ ಅರಣ್ಯ ಇನ್ನಿಲ್ಲದಂತೆ ನಾಶವಾಗುತ್ತದೆ.

ಉದ್ದೇಶಿತ ಗುಂಡ್ಯ ಜಲವಿದ್ಯುತ್ ಯೋಜನೆಯ ಕಥೆಯೂ ಇದೇ ಆಗಿದೆ. ಒಂದು ವೇಳೆ ಈ ಯೋಜನೆ ಕಾರ್ಯಗತಗೊಂಡರೆ 400 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುವುದು ನಿಜವಾದರೂ ಸುಮಾರು 700 ಹೆಕ್ಟೇರ್‌ನಷ್ಟು ಅಮೂಲ್ಯ ಅರಣ್ಯ ಸಂಪತ್ತು ನಾಶವಾಗುತ್ತದೆ. ಅಲ್ಲಿರುವ ವನ್ಯಜೀವಿಗಳು, ಮಳೆಯ ಕಾಡುಗಳು ಶಾಶ್ವತವಾಗಿ ಕಣ್ಮರೆಯಾಗಲಿವೆ.


‘ಪರಿಸರ-ಅಭಿವೃದ್ಧಿ’ ಮೇಲಿನ ಚರ್ಚೆ ಇಂದು ನಿನ್ನೆಯದಲ್ಲ, ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾದದ್ದೂ ಅಲ್ಲ. ವಿಶ್ವದಾದ್ಯಂತ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ಸಂಪತ್ತು ನಾಶವಾಗಿದ್ದು ನಿಜ. ಅದೇ ರೀತಿ ಭಾರತದ ಬಹುಪಾಲು ಅಭಿವೃದ್ಧಿ ಯೋಜನೆಗಳು ಇಲ್ಲಿನ ಅರಣ್ಯ ನಾಶಕ್ಕೆ ಸಾಕಷ್ಟು ಕೊಡುಗೆ ನೀಡಿವೆ.

ಹಾಗಂತ ಅರಣ್ಯವನ್ನು ನಾಶಮಾಡಬೇಕೆಂಬುದೇ ಅಭಿವೃದ್ಧಿ ಯೋಜನೆಗಳ ಉದ್ದೇಶವಾಗಿರುವುದಿಲ್ಲ. ನಾವು ಕೈಗೊಂಡ ಎಲ್ಲ ಅಭಿವೃದ್ಧಿ ಯೋಜನೆಗಳ ಹಿಂದೆಯೂ ಆರ್ಥಿಕ ಲಾಭದ ಉದ್ದೇಶವಿರುತ್ತದೆ.

ಹಾಗೆ ಬರುವ ಆರ್ಥಿಕ ಸಂಪತ್ತು ಮತ್ತು ಇನ್ನಿತರ ಲಾಭಗಳ ಮೂಲಕ ಜನರ ಬದುಕನ್ನು ಇನ್ನಷ್ಟು ಸಹನೀಯಗೊಳಿಸುತ್ತದೆ ಎಂದು ಯೋಜನೆಯ ಪ್ರತಿಪಾದಕರು ನಂಬಿರುತ್ತಾರೆ. ಆದರೆ ಜನರ ಬದುಕನ್ನು ಹೆಚ್ಚು ಸುಖಮಯಗೊಳಿಸುವ ಈ ಪ್ರಕ್ರಿಯೆಯಲ್ಲಿ ಪರಿಸರ ಸರಿಪಡಿಸಲಾರದಷ್ಟು ನಾಶಗೊಂಡಿರುತ್ತದೆ.

ಜಗತ್ತಿನ ಎಲ್ಲ ದೇಶಗಳಲ್ಲಿ ಆರ್ಥಿಕ ತಜ್ಞರು ಅಭಿವೃದ್ಧಿಯನ್ನು ಅಳೆಯುವುದು ದೇಶದ ಒಟ್ಟೂ ಆಂತರಿಕ ಉತ್ಪನ್ನದ (ಜಿಡಿಪಿ) ಆಧಾರದಲ್ಲಿ. ಹಾಗಾಗಿಯೇ ದೇಶವನ್ನಾಳುವವರು ‘ಅಭಿವೃದ್ಧಿ’ ಎಂದಾಕ್ಷಣ ಜಿಡಿಪಿ ದರವನ್ನು ಹೆಚ್ಚಿಸುವ ಸರಳ ತೀರ್ಮಾನಕ್ಕೆ ಬರುತ್ತಾರೆ.

ಹೆಚ್ಚಿನ ಜಿಡಿಪಿ ದರಕ್ಕಾಗಿ ಹೆಚ್ಚು ವಿದ್ಯುತ್ ಶಕ್ತಿ, ಹೆಚ್ಚು ಕೈಗಾರಿಕೆಗಳು, ಹೆಚ್ಚು ದುಡಿಯುವ ವರ್ಗ, ಹೆಚ್ಚು ಸಂಪನ್ಮೂಲಗಳ ಬಳಕೆ... ಎಲ್ಲಾ ಜಿಡಿಪಿಯ ಹೆಚ್ಚಳಕ್ಕಾಗಿ. ಅರ್ಥಾತ್ ಅಭಿವೃದ್ಧಿಗಾಗಿ. ಎಲ್ಲಿಯೂ ಅರಣ್ಯ ಪ್ರದೇಶದ ಹೆಚ್ಚಳದಿಂದ ದೇಶ ಅಭಿವೃದ್ಧಿಯೆಡೆಗೆ ಸಾಗಿತು ಎಂದು ವ್ಯಾಖ್ಯಾನಿಸುವುದಿಲ್ಲ.

ಅಭಿವೃದ್ಧಿ ಎಂದರೆ ಇದು, ಇದಲ್ಲ ಎಂದು ವ್ಯಾಖ್ಯಾನಿಸುವಲ್ಲಿನ ಸಮಸ್ಯೆ ಎಂದರೆ, ಇವತ್ತಿನವರೆಗೂ ನಮ್ಮಲ್ಲಿ ಪರಿಸರವನ್ನು ಸಂಪತ್ತು ಎಂದು ಗ್ರಹಿಸುವ ಪರಿಪಾಠ ಬೆಳೆದಿಲ್ಲ.

ಸುಮ್ಮನೆ ಬಾಯಿಮಾತಿಗೆ ‘ಪರಿಸರ ಸಂಪತ್ತು’ ಎನ್ನಲಾಗುತ್ತಿದೆಯೇ ಹೊರತು, ಅಭಿವೃದ್ಧಿಯ ವಿಚಾರಗಳ ಬಗ್ಗೆ ಮಾತನಾಡುವಾಗ ಪರಿಸರ ನಮಗೆ ಸಂಪತ್ತಾಗಿ ಕಾಣಿಸುತ್ತಿಲ್ಲ. ಅರಣ್ಯೀಕರಣ ನಮ್ಮ ಸಂಪತ್ತನ್ನು ಹೆಚ್ಚು ಮಾಡುವ ಪ್ರಕ್ರಿಯೆ ಎಂದು ನಾವು ಇಂದಿಗೂ ತಿಳಿದುಕೊಂಡಿಲ್ಲ. ಹಾಗಾಗಿಯೇ ‘ಅಭಿವೃದ್ಧಿಯ ಹಾದಿಯಲ್ಲಿ ಸ್ವಲ್ಪ ಮಟ್ಟಿಗೆ ಪರಿಸರ ನಾಶವಾಗುತ್ತದೆ’ ಎಂಬ ಜಾಳುಜಾಳಾದ ಮಾತುಗಳನ್ನಾಡುತ್ತೇವೆ.

ನಾಲ್ಕು ಹೆಜ್ಜೆ ಮುಂದೆ ಹೋಗಿ ಆರು ಹೆಜ್ಜೆ ಹಿಂದೆ ಬರುವುದು ಮುನ್ನಡೆಯಾಗುತ್ತದೆಯೇ? ಹಾಗೆಯೇ, ಜಲವಿದ್ಯುತ್, ಅಣುವಿದ್ಯುತ್ ಎಂದು ಅಳಿದುಳಿದ ಅರಣ್ಯ ಸಂಪತ್ತನ್ನು ನಾಶಮಾಡುವುದು ಅಭಿವೃದ್ಧಿ ಹೇಗಾಗುತ್ತದೆ?

ನಿಜ, ನೂರು ಕೋಟಿಗೂ ಮಿಕ್ಕಿದ ಜನಸಂಖ್ಯೆ ಇರುವ ಈ ದೇಶದ ಇಂಧನ ಬೇಡಿಕೆ ಅಗಾಧವಾದದ್ದು. ಅದನ್ನು ಪೂರೈಸಲೇಬೇಕು. ಈಗಿರುವ ತಂತ್ರಜ್ಞಾನದಲ್ಲಿ ಸೌರವಿದ್ಯುತ್ ಉಪಯೋಗಿಸಿ ಇಡೀ ದೇಶದ ಇಂಧನ ಬೇಡಿಕೆಯನ್ನು ಪೂರೈಸುವುದು ಆಗದ ಕೆಲಸ.

ಸದ್ಯದ ಪರಿಸ್ಥಿತಿಯಲ್ಲಿ ದೇಶದ ಇಂಧನ ಬಳಕೆಯನ್ನು ತಗ್ಗಿಸಿ, ಸಂಪನ್ಮೂಲಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡದ ಹೊರತು ಅನ್ಯಮಾರ್ಗವಿಲ್ಲ ಎಂಬ ಮಾತನ್ನು ಅನೇಕ ವಿಜ್ಞಾನಿಗಳು ಹೇಳುತ್ತಿದ್ದಾರೆ.

ದೇಶವಾಸಿಗಳ ಆರೋಗ್ಯಯುತ ಬದುಕಿಗೆ ದೇಶದ ಒಟ್ಟೂ ವಿಸ್ತೀರ್ಣದ ಶೇಕಡಾ 33ರಷ್ಟು ಅರಣ್ಯ ಪ್ರದೇಶ ಇರಲೇಬೇಕು. ಆದರೆ ನಮ್ಮ ದೇಶದಲ್ಲಿ ಇದು ಶೇಕಡಾ 20ರ ಆಸುಪಾಸಿನಲ್ಲಿದೆ. ಈಗಿರುವ ಪರಿಸರವನ್ನೂ ನಾಶಮಾಡಿ ಹೆಚ್ಚು ವಿದ್ಯುತ್, ಹೆಚ್ಚಿನ ಸೌಕರ್ಯ ಎಂದು ಮಾತನಾಡುತ್ತ ಕುಳಿತರೆ ದೇಶವಾಸಿಗಳ ನೆಮ್ಮದಿಯ ಬದುಕೇ ಹಾಳಾಗುತ್ತದೆ.

ಆಗ ಯಾವ ಸೀಮೆಯ ಅಭಿವೃದ್ಧಿಯ ಮಾತನಾಡುವುದು? ಜಿಡಿಪಿ ಎರಡಂಕಿಯಿಂದ ಮೂರಂಕಿಗೆ ಜಿಗಿದರೂ ಅಂಥದೊಂದು ಪರಿಸ್ಥಿತಿಯನ್ನು ಅಭಿವೃದ್ಧಿ ಎಂದು ಕರೆಯಲಾಗದು.

ಅಭಿವೃದ್ಧಿಯ ತಪ್ಪು ಕಲ್ಪನೆಯನ್ನು ಮುಂದಿಟ್ಟುಕೊಂಡು ನಾಗಾಲೋಟದಲ್ಲಿ ಓಡಿದ ನಾವು ಈಗ ಭೂ ತಾಪಮಾನ ಏರಿಕೆಯಂತಹ ವಿಚಾರದ ಬಗ್ಗೆ ಆಲೋಚಿಸಲಾರಂಭಿಸಿದ್ದೇವೆ. ಇದೇ ವೇಗದಲ್ಲಿ ಭೂಮಿಯ ತಾಪಮಾನ ಏರಿಕೆಯಾಗಿ ಮುಂದೊಂದು ದಿನ ಭುವಿಯ ಮೇಲಿನ ಬದುಕೇ ಅಸಹನೀಯವಾದರೆ, ಆಗ ಜಿಡಿಪಿ ಎಷ್ಟೇ ಹೆಚ್ಚಿರಲಿ, ಅಂಥದೊಂದು ಸಂದರ್ಭವನ್ನು ಅಭಿವೃದ್ಧಿಯೆಂದು ಕರೆಯಲು ಸಾಧ್ಯವೇ?

ಭಾರತದಲ್ಲಿ ಸ್ವಾತಂತ್ರ್ಯಾನಂತರ ನಡೆದ ಅಭಿವೃದ್ಧಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು ದೇಶದ ಪ್ರಪ್ರಥಮ ಪ್ರಧಾನಿ ನೆಹರೂ ಅವರು. ಆಗ ಇಡೀ ವಿಶ್ವ ಅಭಿವೃದ್ಧಿ ಎಂದರೆ ಕೈಗಾರಿಕೀಕರಣ, ಉದ್ಯೋಗಸೃಷ್ಟಿ ಮತ್ತು ಆರ್ಥಿಕ ಸಂಪತ್ತಿನ ಹೆಚ್ಚಳ ಎಂಬ ನಂಬಿಕೆಯಲ್ಲಿದ್ದ ಕಾಲ. ನೆಹರೂ ಕೂಡ ಇಡೀ ಜಗತ್ತು ಏನು ಮಾಡುತ್ತಿತ್ತೋ ಅದನ್ನೇ ಮಾಡಿದರು. ಅಭಿವೃದ್ಧಿ ಮತ್ತು ಪರಿಸರ ಎಂಬ ವಿಶ್ವವ್ಯಾಪಿ ಚರ್ಚೆ ಆರಂಭವಾಗಿದ್ದೇ 60 ಮತ್ತು 70ರ ದಶಕದ ನಂತರ. ಆ ವೇಳೆಗಾಗಲೇ ದೇಶದಲ್ಲಿ ನೆಹರೂ ಯುಗ ಮುಗಿದುಹೋಗಿತ್ತು. ಹಾಗಾಗಿ ನೆಹರೂ ಅವರು ದೇಶದಲ್ಲಿ ಪರಿಸರ ನಾಶಕ್ಕೆ ಕಾರಣವಾಗಬಲ್ಲ ಅಭಿವೃದ್ಧಿ ನೀತಿಯನ್ನು ಅನುಸರಿಸಿದರು ಎಂದು ವಾದಿಸುವ ಅಗತ್ಯವಿಲ್ಲ.

ನಾವು ಪ್ರಸ್ತುತ ಅಭಿವೃದ್ಧಿಯನ್ನು ಅರ್ಥೈಸುತ್ತಿರುವ ವಿಧಾನವೇ ಬದಲಾಗಬೇಕಿದೆ. ಅಭಿವೃದ್ಧಿ ಎಂದರೆ ಮನುಷ್ಯನ ಬದುಕನ್ನು ಹೆಚ್ಚು ಸಹನೀಯಗೊಳಿಸುವುದು. ಪರಿಸರ ಸಂರಕ್ಷಿತವಾದಂತೆಲ್ಲಾ ವಸುಂಧರೆಯ ಮೇಲಿನ ಬದುಕು ಹೆಚ್ಚು ಹೆಚ್ಚು ಸಹ್ಯವಾಗುತ್ತದೆ. ಅರಣ್ಯಸಂಪತ್ತಿನ ಹೆಚ್ಚಳ ಎಂದರೆ ಅದು ನಮ್ಮದೇ ಸಂಪತ್ತಿನ ಹೆಚ್ಚಳ. ಆದಾಯ ಹೆಚ್ಚಳದಿಂದ ನಮ್ಮ ಬದುಕು ಬದಲಾಗುವುದು ನಿಜ. ಹಾಗೆಯೇ ಪರಿಸರ ಸಂರಕ್ಷಣೆಯಿಂದ ಇಡೀ ಭೂಮಿಯ ಬದುಕು ಸುಂದರವಾಗುತ್ತದೆ. ಹೀಗೊಂದು ಅಭಿವೃದ್ಧಿಯ ಪರಿಕಲ್ಪನೆಯನ್ನು ನಮ್ಮದಾಗಿಸಿಕೊಂಡರೆ ನೆಮ್ಮದಿಯ ನಾಳೆ ನಮ್ಮದಾಗಲು ಸಾಧ್ಯ.

ವಿಜಯ್ ಜೋಷಿ.

ಅಕ್ಟೋಬರ್ ೧೪, ೨೦೧೦ರ ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ.

ಕಾಮೆಂಟ್‌ಗಳು

Unknown ಹೇಳಿದ್ದಾರೆ…
ಲೇಖನ ಚೆನ್ನಾಗಿದೆ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ