ವಿಷಯಕ್ಕೆ ಹೋಗಿ

ಅನ್ನ ಕೊಡುವ ಭಾಷೆಯಾಗಲಿ ಕನ್ನಡ

ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಕನ್ನಡ ರಾಜ್ಯೋತ್ಸವ ಬರಲಿದೆ. ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಕುರಿತು ಭರ್ಜರಿಚರ್ಚೆಗಳು ರಾಜ್ಯದಾದ್ಯಂತ ನಡೆಯಲಿವೆ. ಹಾಗೆಯೇ ಕೆಲವು ದಿನಗಳಲ್ಲಿ ಚರ್ಚೆಗಳು ಮನಸ್ಸಿನ ಮೂಲೆ ಸೇರಲಿವೆ.

ಅದೇನೇ ಇರಲಿ, ಕೆಳಗಿನ ಒಂದಷ್ಟು ಸಂಗತಿಗಳನ್ನು ಗಮನಿಸಿ. ಕರ್ನಾಟಕದಲ್ಲಿ ಇಂಗ್ಲಿಷ್ಗೆಂದೇ ಪ್ರತ್ಯೇಕ ವಿಶ್ವವಿದ್ಯಾಲಯಇಲ್ಲ. ಇಂಗ್ಲಿಷ್ ಪುಸ್ತಕ ಪ್ರಾಧಿಕಾರ, ಇಂಗ್ಲಿಷ್ ಸಾಹಿತ್ಯ ಪರಿಷತ್ತು, ಇಂಗ್ಲಿಷ್ ಕಾವಲು ಪಡೆ, ಇಂಗ್ಲಿಷ್ ಮತ್ತು ಸಂಸ್ಕೃತಿ ಇಲಾಖೆ... ಇವ್ಯಾವುದೂ ಇಲ್ಲ. ಯಾವುದೇ ರೀತಿಯ ಸರಕಾರಿ ಕೃಪೆ ಮತ್ತು ಮೇಲೆ ತಿಳಿಸಿದ ಅನೇಕ ಇಲ್ಲಗಳ ಹೊರತಾಗಿಯೂ ಇವತ್ತುಇಂಗ್ಲಿಷ್ ಭಾಷೆ ಕನ್ನಡ ಭಾಷೆಗೆ ಸಡ್ಡು ಹೊಡೆದು ನಿಂತಿದೆ. ರಾಜಧಾನಿಯಲ್ಲೇ ಇಬ್ಬರು ಅಪರಿಚಿತರು ಎದುರಾದರೆಮಾತನಾಡುವುದು ಇಂಗ್ಲಿಷ್ನಲ್ಲಿ ಎಂಬಷ್ಟರ ಮಟ್ಟಿಗೆ ಭಾಷೆ ಬೆಳೆದಿದೆ.

ಇದಕ್ಕೆ ಕಾರಣ ಹುಡುಕುವುದು ಕಷ್ಟದ ಸಂಗತಿಯೇನಲ್ಲ. ಕೆಲವೇ ವರ್ಷಗಳ ಹಿಂದಿನವರೆಗೆ ಒಂದು ರೀತಿಯಲ್ಲಿ ಫ್ಯಾಷನ್ ಮಾತ್ರಆಗಿದ್ದ ಇಂಗ್ಲಿಷ್ ಇವತ್ತು ತನ್ನ ಭಾಷಿಗನನ್ನು ಹೊಟ್ಟೆ ಹೊರೆಯುವ ಮಟ್ಟಕ್ಕೆ ಬೆಳೆದುನಿಂತಿದೆ. ಇವತ್ತು ಮುಗಿಬಿದ್ದು ಇಂಗ್ಲಿಷ್ಕಲಿಯುತ್ತಿರುವವರೆಲ್ಲರೂ ಇಂಗ್ಲಿಷ್ ಸಾಹಿತ್ಯ, ಷೆಕ್ಸ್ಪಿಯರ್ ಮೇಲಿನ ಪ್ರೀತಿಯಿಂದ ಭಾಷೆಯನ್ನು ಕಲಿಯುತ್ತಿಲ್ಲ. ಇಂಗ್ಲಿಷ್ಕಲಿತರೆ ಕೆಲಸ ಸಿಗುತ್ತದೆ, ಇಂಗ್ಲಿಷ್ ಭಾಷೆ ಅನ್ನಕೊಡಬಲ್ಲ ಸಾಮರ್ಥ್ಯ ಹೊಂದಿದೆ ಎಂಬ ಕಾರಣಕ್ಕೆ ಅನೇಕರು ಇವತ್ತು ಇಂಗ್ಲಿಷ್ಪಠಣಕ್ಕೆ ಅಣಿಯಾಗಿದ್ದಾರೆ. (ಕೆಲವು ಅಪವಾದಗಳಿರಬಹುದು). ಕಾರಣಕ್ಕಾಗಿಯೇ ಇವತ್ತು ನೆಲದ ಭಾಷೆ ಕನ್ನಡವನ್ನುಮೀರಿಸಿ ಇಂಗ್ಲಿಷ್ ಬೆಳೆಯುತ್ತಿದೆ.

ಕೇವಲ ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ಸಂವಹನ ಮಾಡಬಲ್ಲ ವ್ಯಕ್ತಿ - ಬೇರೆ ಯಾವ ಕೌಶಲಗಳು ಇಲ್ಲದಿದ್ದರೂ ಇವತ್ತು ತಿಂಗಳಿಗೆ೧೦ರಿಂದ ೧೫ ಸಾವಿರ ರೂಪಾಯಿ ಪಗಾರು ಎಣಿಸಬಲ್ಲ. ಇಂಗ್ಲಿಷ್ ಜೊತೆಗೆ ಇನ್ನು ಯಾವುದಾದರೂ ಕೌಶಲ ಆತನಿಗೆ ಸಿದ್ಧಿಸಿದರೆಅದೃಷ್ಟ ಖುಲಾಯಿಸಿದಂತೆಯೇ ಸರಿ.

ಅದೇ ಕನ್ನಡ ಮಾತ್ರ ತಿಳಿದಿರುವ ವ್ಯಕ್ತಿಯ ಪಾಡು? ಮೊದಲನೆಯದಾಗಿ ಆತನಿಗೆ (ಇಂಗ್ಲಿಷ್ ಬಾರದಿರುವ ಸಂದರ್ಭದಲ್ಲಿ) ಒಂದುಒಳ್ಳೆಯ ಕೆಲಸ ಸಿಗುತ್ತದೆ ಎಂಬ ಭರವಸೆ ಇಲ್ಲ. ಸಿಕ್ಕರೂ ಅದು ಆತನನ್ನು ಆರ್ಥಿಕವಾಗಿ ಗಟ್ಟಿಯಾಗಿಡುತ್ತದೆ ಎಂಬ ವಿಶ್ವಾಸ ಇಲ್ಲ. ಅಂದರೆ ಇಂದು ಕನ್ನಡ ಕರ್ನಾಟಕದಲ್ಲಿಯೇ ಅನ್ನ ಕೊಡುವ ಭಾಷೆಯಾಗಿ ಉಳಿದಿಲ್ಲ. ಇನ್ನು ಜನಸಾಮಾನ್ಯನಿಗೆ ಭಾಷೆಯ ಮೇಲೆಪ್ರೀತಿ ಎಲ್ಲಿಂದ ಬರಬೇಕು? ಮಾತೃಭಾಷೆಯ ಮೇಲಿನ ಪ್ರೀತಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಹುಟ್ಟುವುದಿಲ್ಲ. ತಾಯಿಭಾಷೆಅನ್ನಕೊಡಲಾರದು ಎಂದು ತಿಳಿದಾಗ ಭಾಷೆಯನ್ನು ಕಲಿಯುವ ಅಗತ್ಯವಾದರೂ ಏನಿದೆ ಎಂಬ ಪ್ರಶ್ನೆ ಯಥೋಚಿತವಾಗಿಯೇಹುಟ್ಟುತ್ತದೆ. ಇಂಥ ಸಂದರ್ಭದಲ್ಲಿಯೇ ಕನ್ನಡ ಮಾಧ್ಯಮ ಶಾಲೆಗಳ ಮೇಲಿನ ಪ್ರೀತಿಗಿಂತ ಇಂಗ್ಲಿಷ್ ಶಾಲೆಗಳ ಮೇಲಿನ ಮೋಹವಿಜೃಂಭಿಸುತ್ತದೆ.

ಇವತ್ತಿಯ ಯುವ ಜನಾಂಗ ಭಾಷೆಯನ್ನು ಕೇವಲ ಸಾಹಿತ್ಯ, ಸಂವಹನದ ದೃಷ್ಟಿಯಿಟ್ಟುಕೊಂಡು ಮಾತ್ರ ಕಲಿಯುತ್ತಿಲ್ಲ. ಇವೆಲ್ಲಕ್ಕಿಂತಮಿಗಿಲಾಗಿ ಭಾಷೆ ತರಬಲ್ಲ ಆರ್ಥಿಕ ಸಮೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಓದುತ್ತಾರೆ (ಇದಕ್ಕೆ ಕೆಲವು ಅಪವಾದಗಳಿರಬಹುದು).

ಒಂದೆಡೆ ತನ್ನ ಭಾಷಿಗನಿಗೆ ವಿಪುಲ ಉದ್ಯೋಗಾವಕಾಶ ನೀಡಿ ಆರ್ಥಿಕವಾಗಿ ಸಧೃಡವಾಗಿಡುವ ಇಂಗ್ಲಿಷ್, ಇನ್ನೊಂದೆಡೆ ತನ್ನಕುಡಿಯನ್ನು ಆರ್ಥಿಕವಾಗಿ ಸಲಹುತ್ತೇನೆ ಎಂಬ ಯಾವುದೇ ಭರವಸೆ ಹುಟ್ಟಿಸದ ಕನ್ನಡ. ಇಂಥ ಇಕ್ಕಟ್ಟಿನ ಸಂದರ್ಭದಲ್ಲಿ ಯಾವಭಾಷೆಯನ್ನು ಕಲಿಯಬೇಕು? ಇಂಥ ಸಂದರ್ಭದಲ್ಲಿ ದಿನದ ಕೂಳಿಗಾಗಿ ಶ್ರಮ ವಹಿಸುವ ವ್ಯಕ್ತಿ ಆರ್ಥಿಕ ಸಮೃದ್ಧತೆ ತರಬಲ್ಲಭಾಷೆಯತ್ತಲೇ ಮುಖ ಮಾಡುತ್ತಾನೆ.

ಇದೇ ಕಾರಣಕ್ಕೇ ಇಂದು ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುತ್ತಿದ್ದರೆ ಇಂಗ್ಲಿಷ್ ಮಾಧ್ಯಮ ಶಾಲೆಗಳುಎಗ್ಗಿಲ್ಲದೆ ಬೆಳೆಯುತ್ತಿವೆ. ಅಪ್ಪಟ ಮಲೆನಾಡಿನ ಶಿರಸಿಯಿಂದ ೩೫ ಕಿಲೋ ಮೀಟರ್ ದೂರವಿರುವ ಹಳ್ಳಿಯೊಂದರಿಂದ ಕೆಲವು ಮಂದಿತಮ್ಮ ಮಕ್ಕಳನ್ನು ಇವತ್ತು ಶಿರಸಿಯ ಇಂಗ್ಲಿಷ್ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ತಮ್ಮ ಮಕ್ಕಳಾದರೂ ಇಂಗ್ಲಿಷ್ ಕಲಿತು ಒಳ್ಳೆಯನೌಕರಿ ಸಂಪಾದಿಸಲಿ ಎಂಬ ಆಸೆಯಿಂದ. ಪರಿಸ್ಥಿತಿ ಹೀಗೇ ಮುಂದುವರಿದರೆ ಇಂದು ಹಳ್ಳಿಗಳಲ್ಲಾದರೂ ಗಟ್ಟಿಯಾಗಿರುವ ಕನ್ನಡನಾಳೆ ಅಲ್ಲೂ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಬಂದೀತು. ಹಳ್ಳಿಗಾಡಿನಲ್ಲಿ ಬಲವಾದ ಓದುಗ ವೃಂದ ಹೊಂದಿರುವ ಕನ್ನಡಪತ್ರಿಕೆಗಳು ನಾಳೆ ಅಲ್ಲಿಯೂ ಅಸ್ತಿತ್ವಕ್ಕಾಗಿ ಹೋರಾಡಬೇಕಾದ ಸಂದರ್ಭ ಬಂದೀತು.

ಕನ್ನಡದ ಬಗ್ಗೆ ಗಂಭೀರವಾಗಿ ಚಿಂತಿಸುವ ಪ್ರತಿಯೊಬ್ಬರೂ ಇವತ್ತು ಕನ್ನಡ ಕಲಿತವನಿಗೊಂದು ಕೆಲಸ ಕೊಡಿಸುವ ಬಗ್ಗೆ ಚಿಂತಿಸಬೇಕು. ಇದರ ಜೊತೆಗೇ ಇತಿಹಾಸ, ಆರ್ಥಿಕತೆ, ಅಭಿವೃದ್ಧಿಯ ವ್ಯಾಖ್ಯಾನಗಳ ಬಗ್ಗೆ ಕನ್ನಡದಲ್ಲಿ ಇಂಗ್ಲಿಷ್ಗೆ - ಅಥವಾ ಜಗತ್ತಿನ ಯಾವುದೇಭಾಷೆಗೆ - ಸರಿಸಾಟಿಯಾಗಬಲ್ಲ ಪುಸ್ತಕಗಳು ಬರಬೇಕು.

ಕಥೆ, ಕಾವ್ಯಗಳಷ್ಟೇ ಸಮೃದ್ಧವಾಗಿ ವಿವಿಧ ಅಕಾಡೆಮಿಕ್ ವಿಚಾರ ಕುರಿತ ಪುಸ್ತಕಗಳು ಕನ್ನಡದಲ್ಲಿ ರೂಪುಗೊಳ್ಳಬೇಕು. ಕನ್ನಡದಮೂಲಕವೇ ಜಗತ್ತನ್ನು ಓದುವ, ಅರಿತುಕೊಳ್ಳುವ ಕಾಲ ಬರಬೇಕು.

ಈಗ ಬೇಕಾಗಿರುವುದು ಸಮ್ಮೇಳನ, ಸಮಾರಂಭಗಳಿಗಿಂತ ಹೆಚ್ಚಾಗಿ ಕನ್ನಡವನ್ನು ಅನ್ನ ಕೊಡುವ ಭಾಷೆಯನ್ನಾಗಿಸುವ ದಾರಿ. ದಾರಿ ಕಂಡುಕೊಳ್ಳದ ಹೊರತು ಕನ್ನಡದ ಬಗೆಗಿನ ಹೋರಾಟಗಳು ವ್ಯರ್ಥ ಕಸರತ್ತಾಗಿಯೇ ಉಳಿದುಹೋಗುವ ಅಪಾಯವಿದೆ.

‌ ‌ ‌ ‌ ‌ ‌ - ವಿಜಯ್ ಜೋಶಿ.
(ಪ್ರಜಾವಾಣಿಯಲ್ಲಿ ಸೆಪ್ಟೆಂಬರ್ ೨, ೨೦೧೦ ರಂದು ಪ್ರಕಟವಾಗಿದ್ದ ಲೇಖನ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ