ವಿಷಯಕ್ಕೆ ಹೋಗಿ

ಚೇರ್ಕಾಡಿ ರಾಮಚಂದ್ರ ರಾಯರ ನೆವದಲ್ಲಿ...

"ಚೇರ್ಕಾಡಿ ರಾಮಚಂದ್ರ ರಾಯರು ತೀರಿಕೊಂಡರಂತೆ."

ಭಾರತದ ಫುಕುವೋಕಾ ಎಂಬ ಬಿರುದನ್ನು ಅರ್ಹವಾಗಿಯೇ ಹೊತ್ತಿದ್ದ ಚೇರ್ಕಾಡಿ ರಾಯರು ತೀರಿಕೊಂಡ ಸುದ್ದಿಯನ್ನು ಕೇಳಿದ ತಕ್ಷಣ "ಅವರ ಸಾವಿನ ಸುದ್ದಿಯನ್ನು ನಂಬಲಾಗಲಿಲ್ಲ, ಅವರ ಸಾವು ಬಹಳ ದುಃಖ ತಂದಿತು ಅಂತ ಹೇಳುವುದು" ತೀರಾ ಕೃತಕವಾಗುತ್ತದೆ. ಆದರೆ ಅವರ ಸಾವಿನ ಸುದ್ದಿಯನ್ನು ಕೇಳಿದ ತಕ್ಷಣ ಮನಸ್ಸು ನೆನಪಿಸಿಕೊಂಡಿದ್ದು ಸುಮಾರು ಎರಡು ತಿಂಗಳುಗಳ ಹಿಂದೆ ಪುತ್ತೂರಿನ ಅಡಿಕೆ ಪತ್ರಿಕೆ ಕಛೇರಿಯಲ್ಲಿ ಪತ್ರಕರ್ತ ಶ್ರೀ ಪಡ್ರೆಯವರೊಂದಿಗೆ ಕಳೆದ ಕ್ಷಣಗಳು.

ಸ್ನಾತಕೋತ್ತರ ಪದವಿಯ ಅನಿವಾರ್ಯ ಭಾಗವಾದ ಕಿರು ಸಂಶೋಧನಾ ಪ್ರಬಂಧಕ್ಕೆ ಅಗತ್ಯ ಮಾಹಿತಿ ಕಲೆಹಾಕಲು ಶ್ರೀ ಪಡ್ರೆಯವರ ಸಹಾಯ ಕೋರಿ ಅವರ ಅಡಿಕೆ ಪತ್ರಿಕೆಯ ಕಛೇರಿಗೆ ಹೋಗಿದ್ದೆ. ಆಗ ಅವರು ಆಡಿದ್ದ ಒಂದೊಂದೂ ಮಾತುಗಳು ಚೇರ್ಕಾಡಿ ರಾಯರ ಸಾವಿನ ಸುದ್ದಿಯ ಹಿಂದೆಯೇ ಮೆರವಣಿಗೆಯಲ್ಲಿ ತೇಲಿ ಬಂದವು.

"ನಮ್ಮ ದೇಶವನ್ನು ಕೃಷಿ ಪ್ರಧಾನ ದೇಶ ಅಂತ ನಮಗೇ ಬೇಸರವಾಗುವಷ್ಟು ಹೇಳುತ್ತೇವೆ. ರೈತನೇ ದೇಶದ ಬೆನ್ನೆಲುಬು ಅಂತ ಹಾಡಿಹೊಗಳುತ್ತೇವೆ. ನಮ್ಮ ಸರಕಾರ ಕೂಡ ಸಮಯ ಸಿಕ್ಕಾಗಲೆಲ್ಲ ಇದೇ ಮಾತನ್ನು ಹೇಳುತ್ತದೆ. ಆದರೆ ತನ್ನ ನೀತಿಗಳ ಮೂಲಕ ವ್ಯವಸ್ಥಿತವಾಗಿ ರೈತನ ಬೆನ್ನೆಲುಬನ್ನೇ ಮುರಿಯುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ರೈತರ ಜಪವನ್ನೇ ಉರುಹೊಡೆಸುತ್ತೇವೆ. ಅವರು ಪರೀಕ್ಷೆಗಳಲ್ಲಿ ಇದನ್ನೇ ಬರೆಯುತ್ತಾರೆ. ತೊಂಭತ್ತು ತೊಂಭತ್ತೈದು ಅಂಕಗಳನ್ನೂ ತೆಗೆದುಕೊಳ್ಳುತ್ತಾರೆ. ಆದರೆ ನಾವು ಯಾವತ್ತಾದರೂ ಕೃಷಿ ಒಂದು ಬದುಕು ಅಂತ ನಮ್ಮ ಮಕ್ಕಳಿಗೆ ಕಲಿಸುತ್ತೇವಾ?"

"ಬ್ರೆಝಿಲ್ ಕೂಡ ನಮ್ಮಂತೆಯೇ ಒಂದು ಕೃಷಿ ಪ್ರಧಾನ ದೇಶ. ಅಲ್ಲಿಯೂ ಕೂಡ ರೈತನೇ ಆರ್ಥಿಕತೆಯ ಬೆನ್ನೆಲುಬು. ಆದರೆ ಅಲ್ಲಿಗೂ ನಮಗೂ ಸಾಕಷ್ಟು ವ್ಯತ್ಯಾಸವಿದೆ. ಅಲ್ಲಿ ಒಂದನೆಯ ತರಗತಿಯಿಂದಲೇ ಮಕ್ಕಳಿಗೆ ಕೃಷಿಯ ಬಗ್ಗೆ ಪ್ರಾಯೋಗಿಕ ತರಗತಿಗಳು ಇರುತ್ತವೆ. ಒಂದರಿಂದ ಹಿಡಿದು ಹತ್ತನೆಯ ತರಗತಿಯವರೆಗೂ ಕೃಷಿಯ ಪಾಠಗಳು ಅಲ್ಲಿನ ಮಕ್ಕಳಿಗೆ ಕಡ್ಡಾಯ. ಅವರೆಲ್ಲರೂ ತಮ್ಮ ಪಠ್ಯ ಚಟುವಟಿಕೆಗಳ ಭಾಗವಾಗಿ ಹೊಲ, ಗದ್ದೆ, ತೋಟಗಳಿಗೆ ಹೋಗಿ ಕೈಗೆ ಮಣ್ಣನ್ನು ಮೆತ್ತಿಕೊಳ್ಳಬೇಕು. ಮಣ್ಣಿನ ಗುಣ ಅವರಿಗೆ ತಿಳಿಯಬೇಕು. ಮಣ್ಣಿನೊಂದಿಗೆ ಭಾವನಾತ್ಮಕ ಬೆಸುಗೆ ಎಳೆಯ ಪ್ರಾಯದಿಂದಲೇ ಅವರಲ್ಲಿ ಬೆಳೆಯಬೇಕು. ಅಂತಹ ಶಿಕ್ಷಣ ವ್ಯವಸ್ಥೆ ಅಲ್ಲಿದೆ. ಅದೇ ಕಾರಣಕ್ಕಾಗಿ ಬ್ರೆಝಿಲ್ ದೇಶದ ಸುಶಿಕ್ಷಿತರಾರೂ ಕೃಷಿಯ ಬಗ್ಗೆ ತಾತ್ಸಾರದ ಮಾತುಗಳನ್ನು ಆಡುವುದಿಲ್ಲ."

ನಾವೆಲ್ಲರೂ ಅನ್ನವನ್ನೇ ಊಟಮಾಡುತ್ತೇವೆ ಅನ್ನುವುದರಲ್ಲಿ ಎರಡು ಮಾತಿಲ್ಲ. ನಾವು ಉಣ್ಣುವ ಪ್ರತಿ ತುತ್ತಿನ ಹಿಂದೆಯೂ ರೈತನೊಬ್ಬ ತನ್ನ ಬೆವರಿನ ಹನಿಯನ್ನು ಬಂಡವಾಳದ ರೂಪದಲ್ಲಿ ಹರಿಸಿರುತ್ತಾನೆ ಎಂಬುದೂ ನಮಗೆ ಗೊತ್ತು. ಆದರೂ ಇವತ್ತು ಕೃಷಿಕ ನಮ್ಮ ಸಮಾಜದ ಉಪೇಕ್ಷಿತ ಬಂಧುವಾಗಿದ್ದಾನೆ. ವಿದ್ಯಾವಂತರು ಸ್ವಇಚ್ಛೆಯಿಂದ ಕೃಷಿಯನ್ನು ತಮ್ಮ ಬದುಕನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಅದಲ್ಲದೆ, ಇವತ್ತು ವ್ಯಕ್ತಿಯೊಬ್ಬ ವಿದ್ಯಾವಂತನಾಗುತ್ತಿದ್ದಾನೆ ಅಂದರೆ ಆತ ಕೃಷಿಯಿಂದ ದೂರವಾಗುತ್ತಿದ್ದಾನೆ ಎಂದೇ ಅರ್ಥೈಸಬೇಕಾದ ಪರಿಸ್ಥಿತಿ ಬಂದಿದೆ. ಏಕೆ ಹೀಗೆ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಉತ್ತರ ಅರಸುತ್ತಾ ಹೊರಟರೆ ಅಂಧಕಾರವೇ ಎದುರಾಗುತ್ತದೆಯೇ ಹೊರತು ಉತ್ತರ ದೊರಕುವ ಆಸೆ ಎಲ್ಲಿಯೂ ಚಿಮ್ಮುವುದಿಲ್ಲ.

ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಉಡುಪಿ ತಾಲೂಕಿನ ಬ್ರಹ್ಮಾವರದ ಬಳಿಯ ಚೇರ್ಕಾಡಿಯ ತಮ್ಮ ಎರಡೆಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದ ರಾಮಚಂದ್ರ ರಾಯರು ತಮ್ಮ ಬದುಕು ಮುಗಿಸಿದ್ದಾರೆ. ಆದರೆ ಇವತ್ತಿನ ಕೃಷಿರಂಗ ಎದುರಿಸುತ್ತಿರುವ ಬಿಕ್ಕಟ್ಟುಗಳಿಗೆ, ಉತ್ತರಿಸಲಾಗದೆ ಬಿಟ್ಟಿರುವ ಪ್ರಶ್ನೆಗಳಿಗೆ ಪರಿಹಾರವನ್ನು ತಮ್ಮ ಜಮೀನಿನ ಮಣ್ಣಿನಲ್ಲಿ ಬರೆದಿಟ್ಟು ಹೊರಟುಹೋಗಿದ್ದಾರೆ.

ಅಭಿವೃದ್ಧಿಯ ಹೆಸರಿನಲ್ಲಿ ಅವಾಂತರಗಳನ್ನೇ ಮಾಡುತ್ತಿರುವ ನಮಗೆ ರಾಮಚಂದ್ರ ರಾವ್ ಒಬ್ಬ ವ್ಯಕ್ತಿಯಂತೆ ಅಲ್ಲ, ಒಂದು ಪ್ರಜ್ಞೆಯಂತೆ ಕಾಣತೊಡಗುತ್ತಾರೆ.

ಇವತ್ತು ಚೇರ್ಕಾಡಿ ರಾಮಚಂದ್ರ ರಾಯರ ಕೃಷಿ ಪ್ರಯೋಗಗಳನ್ನು ಕೇಳದವರು ಇಲ್ಲ. ಆದರೆ ಅಷ್ಟೇ ಮಂದಿ ಟೀಕಾಕಾರರೂ ಅವರ ಬದುಕಿನ ನೀತಿಯ ಕುರಿತು ಮಾತನಾಡುತ್ತಾರೆ, ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಚೇರ‍್ಕಾಡಿಯವರ ಕೃಷಿ ಬದುಕನ್ನು ಟೀಕಿಸುವವರ ವಾದಗಳನ್ನು ಸಂಪೂರ್ಣವಾಗಿ ಆಲಿಸಿದ ನಂತರವೂ ಚೇರ್ಕಾಡಿಯವರ ಬಗ್ಗೆ ಗೌರವ ಉಳಿದುಕೊಳ್ಳುತ್ತದೆ. ಅಷ್ಟೇ ಅಲ್ಲ ಸ್ವಲ್ಪ ಸೂಕ್ಷ್ಮವಾಗಿ ನೋಡಿದರೆ ಅವರ ಮೇಲಿನ ಗೌರವ ಇನ್ನೂ ಹೆಚ್ಚಾಗುತ್ತದೆ.

ಚೇರ್ಕಾಡಿ ರಾಯರಂತೆ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದೆ, ತಮ್ಮ ಕೃಷಿ ಭೂಮಿಗೆ ವಿದ್ಯುತ್ ಪಂಪ್‌ಸೆಟ್ ಸಂಪರ್ಕ ಪಡೆಯದೆ, ಆಧುನಿಕ ಸವಲತ್ತುಗಳಿಂದ ಬಹುತೇಕ ದೂರವಾಗಿಯೇ ಬದುಕುವುದು ಎಷ್ಟು ಮಂದಿಗೆ ಸಾಧ್ಯ? ಎಂಬ ಪ್ರಶ್ನೆ ಯಾವ ಕಾಲಕ್ಕೂ ಇದ್ದಿದ್ದೇ. ಅಂಥದ್ದೊಂದು ಪ್ರಶ್ನೆ ಇರಬೇಕಾದದ್ದೂ ಸಹಜವೇ. ನಿಜ, ಚೇರ್ಕಾಡಿ ರಾಮಚಂದ್ರ ರಾಯರಂತೆ ಬದುಕುವುದು ಎಲ್ಲರಿಂದ ಸಾಧ್ಯವಿಲ್ಲ. ಅವರಂತೆಯೇ ಬದುಕಿ ಅಂತ ಹೇಳುವ ನೈತಿಕ ಧೈರ್ಯ ಕೂಡ ನಮ್ಮಲ್ಲಿಲ್ಲ. ಆದರೆ, ಆಧುನಿಕ ಜಗತ್ತಿನ ಸುಖವನ್ನು ಅನುಭವಿಸಬಹುದಾದ ಎಲ್ಲ ಅವಕಾಶಗಳಿದ್ದೂ ಒಬ್ಬ ವ್ಯಕ್ತಿ ಅದನ್ನು ತಿರಸ್ಕರಿಸುತ್ತಾನೆ, ಉದ್ದೇಶಪೂರ್ವಕವಾಗಿ ಅವುಗಳಿಂದ ದೂರವೇ ಉಳಿಯುತ್ತಾನೆ ಎಂದರೆ ಅದು ಸೋಜಿಗವೇ ಸರಿ. "ನಾನು ನಮ್ಮ ದೇಶ ಭಾರತವನ್ನು ಬಿಟ್ಟು ಅಮೆರಿಕಾಕ್ಕೆ ಹೋಗಿ ಚಾಕರಿ ಮಾಡುವವರನ್ನು ವಿರೋಧಿಸುತ್ತೇನೆ" ಎಂಬ ಮಾತುಗಳನ್ನಾಡುವುದು ಬಹಳ ಸುಲಭ. ಆದರೆ ಅನಾಯಾಸವಾಗಿ ಅಮೆರಿಕಕ್ಕೆ ಹೋಗುವ ಅವಕಾಶವೊಂದು ನಮ್ಮ ಕೈಯಲ್ಲಿದ್ದಾಗ ನಿರ್ಮೋಹದಿಂದ, ನಿರ್ಮಾತ್ಸರ್ಯದಿಂದ ಅದನ್ನು ತಿರಸ್ಕರಿಸುವುದು ಬಹಳ ಸವಾಲಿನ ಕೆಲಸ. ನಮ್ಮ ಮಾತಿನಲ್ಲಿರುವ ಪ್ರಾಮಾಣಿಕತೆಯ ತೀವ್ರತೆ ಪರೀಕ್ಷೆಗೆ ಒಳಗಾಗುವುದು ಅಂಥ ಸಂದರ್ಭಗಳಲ್ಲಿಯೇ.

ಗಾಂಧಿಯ ಹಿಂದ್ ಸ್ವರಾಜ್ ಪುಸ್ತಕವನ್ನಿಟ್ಟುಕೊಂಡು ಆಧುನಿಕ ವಿಜ್ಞಾನದ ಅಪಾಯವನ್ನು ಮಾತನಾಡುವುದು ಸುಲಭ. ಆದರೆ ಹಿಂದ್ ಸ್ವರಾಜ್ ಪುಸ್ತಕವನ್ನು ಓದದೆಯೇ ಆಧುನಿಕ ಸುಖ ಸವಲತ್ತುಗಳನ್ನು ನಿರಾಕರಿಸುವುದು - ಅಂತಹ ಸವಲತ್ತುಗಳನ್ನು ಪಡೆದುಕೊಳ್ಳುವ ಎಲ್ಲ ಅವಕಾಶಗಳಿದ್ದೂ - ನಿಜಕ್ಕೂ ಸವಾಲಿನದ್ದು.

ಸ್ವಾತಂತ್ರ ಬಂದ ನಂತರದ ಕಾಲದಿಂದ ಹಿಡಿದು ಇಂದಿನವರೆಗೂ ನಮ್ಮ ಪಾಲಿಗೆ ’ಅಭಿವೃದ್ಧಿ’ ಎಂಬ ಪದ ಬಹಳ ಮಟ್ಟಿಗೆ ಮೋಡಿ ಮಾಡುತ್ತ ಬಂದಿದೆ. ಸ್ವಾತಂತ್ರ ಸಿಕ್ಕಾಗ ನಾವು ಅಭಿವೃದ್ಧಿಯನ್ನು ವ್ಯಾಖ್ಯಾನಿಸುತ್ತಿದ್ದ ರೀತಿಗೂ ಇವತ್ತು ನಾವು ಅಭಿವೃದ್ಧಿಯನ್ನು ವ್ಯಾಖ್ಯಾನಿಸುವ ರೀತಿಗೂ ಸಾಕಷ್ಟು ವ್ಯತ್ಯಾಸವಿರಬಹುದು. ಆದರೆ ಸ್ವಾತಂತ್ರ ಸಿಕ್ಕ ಕಾಲದಲ್ಲೇ (ಸುಮಾರು ೧೯೫೦-೫೧ನೆಯ ಇಸವಿ) ಚೇರ್ಕಾಡಿಯಲ್ಲಿ ತಮ್ಮ ಕೃಷಿ ಬದುಕನ್ನು ಆರಂಭಿಸಿದ ರಾಯರು ತಮ್ಮ ಕೊನೆಯ ಉಸಿರಿನವರೆಗೂ ತಮ್ಮ ನೀತಿಯೊಂದಿಗೆ ರಾಜಿ ಮಾಡಿಕೊಳ್ಳಲಿಲ್ಲ. ಅವರಿಗೆ ೧೯೫೧ನೆಯ ಇಸವಿಯಲ್ಲೇ - ಅಂದರೆ ಇಡೀ ಭಾರತ ಅಭಿವೃದ್ಧಿ ಎಂದರೆ ಕಾಡನ್ನು ಕಡಿಯುವುದು, ಕೈಗಾರಿಕೆಗಳನ್ನು ನೆಡುವುದು ಎಂದು ತಿಳಿದುಕೊಂಡಿದ್ದ ಕಾಲದಲ್ಲಿಯೇ - ಪರಿಸರಕ್ಕೆ ಸಂಪೂರ್ಣ ಶರಣಾಗಿ ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸಿದರು. ಒಂದು ಕ್ಷಣ ಕಾಲಕ್ಕೂ ಅವರು ಪರಿಸರದ ನಿಯಮದ ವಿರುದ್ಧ ಯೋಚಿಸಲಿಲ್ಲ. ಚೇರ್ಕಾಡಿ ಮಾದರಿಯ ಕೃಷಿ ನಮಗೆ ಅಪ್ಯಾಯಮಾನವಾಗುವುದು ಇದೇ ವಿಚಾರದಲ್ಲಿ.

ಸ್ವಾತಂತ್ರ ಬಂದ ನಂತರ, ಅಂದರೆ ೧೯೬೦ರ ದಶಕದಲ್ಲಿ ಭಾರತ ಕಂಡ ಹಸಿರು ಕ್ರಾಂತಿ ನಮ್ಮ ಆಹಾರ ಉತ್ಪಾದನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿದ್ದೇನೋ ನಿಜ. ಆದರೆ ಆ ಕಾಲಘಟ್ಟದಲ್ಲಿ ರೈತರ ಕೈಗೆ ಬಂದ ಹೈಬ್ರಿಡ್ ಬೀಜಗಳು, ಭೂಮಿಯ ಸತ್ವವನ್ನೇ ಹೀರಿಬಿಟ್ಟವು. ದೇಸೀ ತಳಿಗಳಿಗಿಂತ ಅತಿಹೆಚ್ಚಿನ ಪ್ರಮಾಣದಲ್ಲಿ ನೀರು ಬೇಡುತ್ತಿದ್ದ ಹೈಬ್ರಿಡ್ ತಳಿಗಳು ನಮ್ಮ ದೇಶದ ಅಂತರ್ಜಲವನ್ನು ಅಪಾಯಕಾರಿ ಮಟ್ಟಕ್ಕೆ ಇಳಿಸಿದವು. ಆ ಕಾಲದಲ್ಲಿ ನಾವು ಬೆಳೆಗಳಿಗೆ ಎಗ್ಗಿಲ್ಲದೆ ಉಣಿಸಿದ ರಾಸಾಯನಿಕಗಳು ಭೂಮಿಯ ಒಡಲಿಗೆ ವಿಷವುಣಿಸಿ, ಬೆಳೆಯನ್ನು ಉಣ್ಣುವ ಜನಸಾಮಾನ್ಯನ ಹೊಟ್ಟೆಗೂ ವಿಷಪ್ರಾಶನ ಮಾಡಿಸಿದವು. ಪರಿಣಾಮವಾಗಿ ಪಡ್ರೆ, ಸ್ವರ್ಗದಂತಹ ಆಧುನಿಕ ಜಗತ್ತಿನ ಯಾವ ಜಂಜಡವೂ ಇಲ್ಲದಿದ್ದ ಊರುಗಳಿಗೆ ಎಂಡೋಸಲ್ಫಾನ್ ಕೀಟನಾಶಕದಿಂದಾಗಿ ಅರ್ಥೈಸಲಾಗದ ರೋಗಗಳು ಬರುವಂತಾದವು. ಒಂದಿಡೀ ಜನಾಂಗವೇ ರೋಗಗ್ರಸ್ತವಾಯಿತು. ಇತ್ತ ಭೂಮಿ ಕೂಡ ತನ್ನ ಸಾರ ಕಳೆದುಕೊಳ್ಳುತ್ತ ಬಂದಿತು. ಹೈಬ್ರಿಡ್ ಬೀಜಗಳನ್ನೇ ಬಿತ್ತಿದರೂ ಬೆಳೆಯ ಪ್ರಮಾಣ ಕಡಿಮೆಯಾಗುತ್ತ ಹೋಯಿತು. ಆ ಹೊತ್ತಿಗೆ ನಾವು ಅನುಸರಿಸಿದ ಕೃಷಿ ಅಭಿವೃದ್ಧಿ ನೀತಿ ಸುಸ್ಥಿರವಲ್ಲ ಎಂಬ ಅರಿವು ಹೆಚ್ಚಿನವರಿಗೆ ಬರಲಾರಂಭಿಸಿತು. ಸುಸ್ಥಿರ ಅಭಿವೃದ್ಧಿಯ ಮಾದರಿಗಳತ್ತ ನಮ್ಮ ದೇಶದ ನೀತಿ ನಿರ್ಮಾಪಕರ ಗಮನ ಹರಿಯಿತು.

ಇನ್ನೊಂದು ಬದಿಯಲ್ಲಿ ಗಾಂಧಿಯ ಅಭಿವೃದ್ಧಿ ಮಾದರಿಯನ್ನು ಸ್ಪಷ್ಟವಾಗಿ ಧಿಕ್ಕರಿಸಿದ ನೆಹರೂ ಮಾದರಿಯ ಅಭಿವೃದ್ಧಿಯನ್ನು (ನೆಹರೂ ಮಾದರಿಯ ಅಭಿವೃದ್ಧಿ ಅಂದರೆ ಕೈಗಾರಿಕೀಕರಣದ ಮಾದರಿ ಎಂದೇ ಅರ್ಥೈಸಬೇಕಾಗುತ್ತದೆ) ಸ್ವಾತಂತ್ರ ಸಿಕ್ಕ ಸಂದರ್ಭದಿಂದಲೇ ಅನುಸರಿಸುತ್ತ ಬಂದ ನಮಗೆ ನಮ್ಮ ಪರಿಸರ ಒಂದು ಕಡೆಯಿಂದ ನಾಶವಾಗುತ್ತ ಬಂದದ್ದು ಅರಿವಿಗೆ ಬರಲಿಲ್ಲ. ಅದಲ್ಲದೆ ಪರಿಸರ ರಕ್ಷಣೆಯೊಂದಿಗೆ ಅಭಿವೃದ್ಧಿ ಕಾರ್ಯ ನಡೆಯಲಿ ಎಂದು ಗಟ್ಟಿಯಾಗಿ ಹೇಳಿದವರಿಗೆ ಪ್ರತಿಗಾಮಿಗಳು ಎಂಬ ಹಣೆಪಟ್ಟಿ ಅಂಟಿಸಿ ಅವರನ್ನು ಅಪ್ರತಿಭರನ್ನಾಗಿ ಮಾಡುವ ಕೆಲಸ ಕೂಡ ನಿರಾತಂಕವಾಗಿ ಸಾಗಿತು. ಇಂಥ ಒಂದು ದೋಷಪೂರಿತ ಅಭಿವೃದ್ಧಿ ಮಾದರಿಯನ್ನು ಅನುಸರಿಸಿದ ಪರಿಣಾಮ ನಮ್ಮ ದೇಶದ ಬಹುದೊಡ್ಡ ಪ್ರಮಾಣದ ಕಾಡು ಇನ್ನಿಲ್ಲದಂತೆ ನಾಶವಾಯಿತು. ಅದಲ್ಲದೆ ಇತ್ತೀಚಿನ ಒಂದು ವರದಿಯಂತೆ ದೇಶದ ಸುಮಾರು ೪೩ ನಗರಗಳು ಮನುಷ್ಯನ ಆರೋಗ್ಯಕರ ಬದುಕಿಗೆ ಅಯೋಗ್ಯವಾದ ಪ್ರದೇಶಗಳು ಎಂದು ಹೇಳುವಷ್ಟರ ಮಟ್ಟಿಗೆ ಪ್ರದೂಷಣೆಗೊಂಡವು. ಈಗ ಎಲ್ಲರಿಗೂ ಅರ್ಥವಾಗುತ್ತಿದೆ; ಪರಿಸರ ಕೇಂದ್ರಿತ ಅಭಿವೃದ್ಧಿ ನಮ್ಮ ಭೂಮಿಯ ಉಳಿವಿಗೆ ಅನಿವಾರ್ಯ ಎಂದು.

ಒಂದು ಹಂತದಲ್ಲಿ ಅಭಿವೃದ್ಧಿಯ ಬಗ್ಗೆ ಮಾತ್ರ ತಲೆಕೆಡಿಸಿಕೊಂಡ ನಾವು (ಅಭಿವೃದ್ಧಿ ಅಂದರೆ ಏನು ಎಂಬುದನ್ನೂ ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲ. ಆ ಮಾತು ಬೇರೆ) ಎರಡನೆಯ ಹಂತದಲ್ಲಿ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಹೆಚ್ಚು ಚಿಂತಿತರಾದೆವು. ಈಗ ’ಸುಸ್ಥಿರ ಪರಿಸರ ಪೂರಕ ಅಭಿವೃದ್ಧಿ’ ಮಾದರಿಯ ಶೋಧದಲ್ಲಿ ತೂಡಗುವ ಹಂತಕ್ಕೆ ಬಂದು ತಲುಪಿದ್ದೇವೆ. ಒಳ್ಳೆಯದೇ. ಆದರೆ ಸ್ವತಂತ್ರ ಭಾರತಕ್ಕೆ ಈ ಹಂತಕ್ಕೆ ತಲುಪಲು ಅರವತ್ತು ವರ್ಷಗಳೇ ಬೇಕಾಯಿತು. ಅರವತ್ತು ವರ್ಷಗಳು ಸಂದರೂ ಪರಿಸರ ಕೇಂದ್ರಿತ ಅಭಿವೃದ್ಧಿಯ ಮಹತ್ವ ನಮ್ಮ ತಲೆಗಿನ್ನೂ ಸರಿಯಾಗಿ ಹೋಗಿಲ್ಲ. ಆದರೆ ಸುಸ್ಥಿರ ಅಭಿವೃದ್ಧಿ ನಮ್ಮ ನೀತಿನಿರೂಪಕರ ಪಾಲಿಗೆ ಅರ್ಥವಾಗಿರುವ ಲಕ್ಷಣಗಳು ಕಾಣಿಸುತ್ತಿವೆ.

ಇಷ್ಟೆಲ್ಲ ವಿಚಾರಗಳು ದೇಶದ ಉದ್ದಗಲಕ್ಕೂ ಸಂಭವಿಸುತ್ತಿದ್ದಾಗ ಚೇರ್ಕಾಡಿ ರಾಮಚಂದ್ರ ರಾಯರು ಮಾತ್ರ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ತಮ್ಮ ಪಾಡಿಗೆ ತಾವು ಪ್ರಕೃತಿಯೊಂದಿಗೆ ಸಂಪೂರ್ಣ ಸಾಮರಸ್ಯದೊಂದಿಗೆ ಜೀವನ ನಡೆಸುತ್ತಿದ್ದರು. ಸುಸ್ಥಿರ, ಪರಿಸರ ಪೂರಕ ಎಂಬ ಪದಗಳು ಗೊಡ್ಡು ಎಂಬ ಅರ್ಥ ಕೊಡುತ್ತಿದ್ದ ಕಾಲದಲ್ಲಿಯೇ ಅವೆರಡು ಪದಗಳ ಅರ್ಥವನ್ನು ಸರಿಯಾಗಿಯೇ ಗ್ರಹಿಸಿ ತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದರು. ಯಾವತ್ತಿಗೂ ತಮ್ಮ ಜಮೀನಿನಲ್ಲಿ ರಾಸಾಯನಿಕ ಗೊಬ್ಬರ, ರಾಸಾಯನಿಕ ಕೀಟನಾಶಕಗಳನ್ನು ಬಳಸಲಿಲ್ಲ. ಕೊಳವೆಬಾವಿ ತೆಗೆದು, ಯಥೇಚ್ಛ ನೀರು ತೆಗೆದು ಅಂತರ್ಜಲದ ಒಡಲಿಗೆ ಕೈ ಹಾಕಲಿಲ್ಲ. ಒಟ್ಟಿನಲ್ಲಿ ನಾವು ಇವತ್ತು ಬಹಳ ಆಸಕ್ತಿಯಿಂದ ಹೇಳುತ್ತಿರುವ ’ಸುಸ್ಥಿರ ಪರಿಸರ ಪೂರಕ ಅಭಿವೃದ್ಧಿ’ ಎಂಬ ವಿಚಾರವನ್ನು ಇವತ್ತಿಗೆ ಸುಮಾರು ಅರವತ್ತು ವರ್ಷಗಳ ಹಿಂದೆಯೇ ಕಾರ್ಯದಲ್ಲಿ ತೋರಿಸಿಕೊಟ್ಟರು. ಕೇವಲ ಮೂರನೆಯ ತರಗತಿಯವರೆಗೆ ಮಾತ್ರ ಶಾಲಾ ಶಿಕ್ಷಣ ಪಡೆದ, ಆಧುನಿಕ ಜಗತ್ತಿನ ಪಾಲಿಗೆ ಅಷ್ಟೇನೂ ಸುಶಿಕ್ಷಿತ ಅನಿಸದ, ಆದರೆ ಜನತಾ ವಿಶ್ವವಿದ್ಯಾಲಯದಲ್ಲಿ ಗೌರವ ಡಾಕ್ಟರೇಟ್ ಪಡೆದ ಚೇರ್ಕಾಡಿ ರಾಮಚಂದ್ರ ರಾಯರು ಇವತ್ತು ಮಹತ್ವವಾಗುವುದು ಇದೇ ಕಾರಣಕ್ಕೆ.

ಚೇರ್ಕಾಡಿ ರಾಯರು ಹೊರಟುಹೋಗಿದ್ದಾರೆ; ಸುಸ್ಥಿರ ಪರಿಸರ ಪೂರಕ ಅಭಿವೃದ್ಧಿ ಮಾದರಿಯೊಂದನ್ನು ತಮ್ಮ ಜಮೀನಿನಲ್ಲಿ ಬರೆದಿಟ್ಟು. ಅದನ್ನು ಓದುವ ಮನಸ್ಸು ನಮ್ಮದಾಗಲಿ.

ವಿಜಯ್ ಜೋಶಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ