ವಿಷಯಕ್ಕೆ ಹೋಗಿ

ಕೃಷಿ ತಾತ್ಸಾರಕ್ಕೆ ಶಿಕ್ಷಣ ವ್ಯವಸ್ಥೆಯೂ ಕಾರಣವಲ್ಲವೇ?

"ಹಳ್ಳಿಯ ಬಗ್ಗೆ ನಿಮಗೇನ್ರಯ್ಯಾ ಗೊತ್ತು? ನಿಮ್ಮ ಪ್ರಕಾರ ಹಳ್ಳಿಗಳು ಎಂದರೆ ಒಂಥರಾ ವಾರಾಂತ್ಯದ ರಜಾ ತಾಣಗಳಿದ್ದಂತೆ. ನಿಮಗೆ ಇಲ್ಲಿನ ತಂಪಾದ ಹವೆ ಇಷ್ಟ, ಇಲ್ಲಿನ ಪರಿಸರ ಇಷ್ಟ ಮತ್ತು ಇಲ್ಲಿನ ಹಸಿರು ಇಷ್ಟ..."

ಮೊನ್ನೆ ವಯಕ್ತಿಕ ಕಾರ್ಯನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಅಲ್ಲಿನ ಹಳ್ಳಿಯೊಂದರಲ್ಲಿ ಸ್ವಂತ ತೋಟ, ಗದ್ದೆ ನೋಡಿಕೊಂಡಿರುವ ಸ್ನೇಹಿತನ ಜೊತೆ ಮಾತಾಡುತ್ತಿದ್ದಾಗ ಹಳ್ಳಿಯ ಜೀವನದ ಬಗ್ಗೆ ನಾನು ವ್ಯಕ್ತಪಡಿಸಿದ ಅಭಿಮಾನಕ್ಕೆ ಆತನ ಪ್ರತಿಕ್ರಿಯೆ ಈ ಮೇಲಿನಂತಿತ್ತು.

"...ಆದರೆ ನಮ್ಮ ಹಳ್ಳಿಗಳಿಗೆ ಭವಿಷ್ಯವಿದೆ ಅಂತ ನನಗಂತೂ ಅನಿಸುತ್ತಿಲ್ಲ. ಬೆಳೆಗೆ ಬೆಲೆಯಿಲ್ಲ. ನಾವು ಮಾಡುವ ಕೆಲಸಕ್ಕೆ ಗೌರವವಿಲ್ಲ. ಒಬ್ಬ ವ್ಯಕ್ತಿ ಅಲ್ಪ ಸ್ವಲ್ಪ ಓದಿಕೊಂಡು ಯಾವುದೋ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅಂದರೆ ಹೆಣ್ಣು ಹೆತ್ತವರು ಸ್ಪರ್ದೆಗೆ ಬಿದ್ದವರಂತೆ ಅವನ ಬೆನ್ನು ಬೀಳುತ್ತಾರೆ. ಅದೇ ಹಳ್ಳಿಯ ಕೃಷಿಕನೊಬ್ಬನಿಗೆ ಹೆಣ್ಣು ಕೊಡುವವರು ಇಲ್ಲ. ಆತ ತನ್ನ ಕೃಷಿ ಅಗತ್ಯತೆಗಾಗಿ ಏನೇ ಸಂಶೋಧನೆ ಮಾಡಿದರೂ ಅವನ ಬೌದ್ಧಿಕ ಕೆಲಸಕ್ಕೆ ಮರ್ಯಾದೆ ಇಲ್ಲ. ಅಲ್ಲ ಮಾರಾಯಾ, ಸಾಫ್ಟ್‌ವೇರ್ ಕಂಪನಿಗಳು ಎಷ್ಟೇ ಶ್ರೀಮಂತವಾಗಿರಬಹುದು ಆದರೆ ಅವುಗಳ ಹಿತ್ತಿಲಿನಲ್ಲಿ ತರಕಾರಿ ಬೆಳೆಯಲು ಸಾಧ್ಯವಾ ಹೇಳು. ಇನ್‌ಫೋಸಿಸ್‌ನವರು ಎಲ್ಲಾದರೂ ಅಕ್ಕಿ ಬೆಳೆದು ಅವರ ನೌಕರರ ಹೊಟ್ಟೆ ತುಂಬಿಸಲು ಸಾಧ್ಯವಾ? ರೈತ, ಕೃಷಿಕನ ಶ್ರಮ ಜೀವನಕ್ಕೆ ಈ ಸಮಾಜ ಸೂಕ್ತ ಗೌರವ ನೀಡದ ಹೊರತು ನಮ್ಮ ಹಳ್ಳಿಗಳಿಗೆ ಭವಿಷ್ಯವಿಲ್ಲ."

ನನ್ನ ಕೃಷಿಕ ಸ್ನೇಹಿತ ಈ ಮಾತನ್ನು ಹೇಳುತ್ತಿದ್ದರೆ ಸುಶಿಕ್ಷಿತರು ಅಂತ ಕರೆಸಿಕೊಂಡು ಆಧುನಿಕ ಜಗತ್ತಿನ ಪ್ರಗತಿಯ ಬಗ್ಗೆ, ಮಾಹಿತಿ ತಂತಜ್ಞಾನ ಕಂಪನಿಗಳ ಕೆಲಸಗಳ ಬಗ್ಗೆ ಅಭಿಮಾನದ ಮಾತುಗಳನ್ನಾಡುವವರು ನಮ್ಮವರೇ ಆದ ರೈತ ಮತ್ತು ಕೃಷಿ ಸಮುದಾಯದವರ ಭಾವನೆಗಳಿಗೆ, ಅವರ ಶ್ರಮಜೀವನಕ್ಕೆ ನೀಡುವ ಗೌರವದ ಬಗ್ಗೆ ಮನಸ್ಸು ಆಲೋಚಿಸುತ್ತಿತ್ತು.

ಇವತ್ತು ಹಳ್ಳಿಗಳಿಂದ ನಗರಗಳತ್ತ ಯುವಕರು ವಲಸೆ ಹೋಗುತ್ತಿರುವುದರ ಕುರಿತು ಸಾಕಷ್ಟು ಚರ್ಚೆ ನಡೆಯುತ್ತಿದೆ. "ನಾವೆಲ್ಲ ಯುವಕರಾಗಿದ್ದಾಗ ಹೀಗಿರಲಿಲ್ಲ. ಇಂದಿನ ಯುವಕರಿಗೆ ಪೇಟೆಯ ಹುಚ್ಚು, ಪೇಟೆಯಲ್ಲಿ ಸಿಗುವ ಹಣದ ಮೇಲೆ ವ್ಯಾಮೋಹ ಅಧಿಕ. ಅಷ್ಟಲ್ಲದೆ ಅವರಿಗೆ ಮೈಬಗ್ಗಿಸಿ ದುಡಿಯಲು ಆಗುವುದಿಲ್ಲ. ಹಾಗಾಗಿಯೇ ಇಂದಿನ ಯುವಕರು ಪೇಟೆಗಳತ್ತ ಮುಖ ಮಾಡಿದ್ದಾರೆ" ಎಂಬ ಮಾತು ಸಾಕಷ್ಟು ಬಾರಿ ಕೇಳಿಬರುತ್ತಿದೆ. ಇದು ಪೂರ್ತಿ ಸುಳ್ಳಲ್ಲ. ಆದರೆ ಇಂದಿನ ಹಳ್ಳಿಯ ಯುವಕರ ಪೇಟೆ ಪೆರೇಡ್‌ಗೆ ಕೇವಲ ದುಡ್ಡಿನ ಮೇಲಿನ ವ್ಯಾಮೋಹ ಮತ್ತು ಮೈಗಳ್ಳತನ ಮಾತ್ರ ಕಾರಣವಲ್ಲ. ಅವೆರಡನ್ನು ಮೀರಿದ ಇನ್ನೂ ಅನೇಕ ಸೂಕ್ಷ್ಮ ಸಂಗತಿಗಳು ಇವತ್ತಿನ ವಲಸೆಗೆ ಮೂಲಭೂತ ಕಾರಣಗಳಾಗುತ್ತವೆ.

ಉತ್ತರ ಕನ್ನಡ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗಣನೀಯ ಸಂಖ್ಯೆಯಲ್ಲಿರುವ ಹವ್ಯಕ ಸಮುದಾಯದವರಲ್ಲಿ ಹಿಂದೆ ಒಂದು ಸಂಪ್ರದಾಯ ಇತ್ತು. ಹೆಣ್ಣು ಹೆತ್ತವರು ತಾವು ತಮ್ಮ ಮನೆಯ ಹೆಣ್ಣನ್ನು ಕೊಡಲಿಚ್ಛಿಸುವ ಗಂಡಿನ ಮನೆಯ ತೋಟ ಹೇಗಿದೆ (ಎಷ್ಟಿದೆ ಅಂತಲ್ಲ!) ಅಂತ ಹೇಗಾದರೂ ಮಾಡಿ ಕಂಡುಕೊಂಡುಕೊಳ್ಳುತ್ತಿದ್ದರು. ಆ ಗಂಡು ತನ್ನ ತೋಟವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾನೆ ಅಂದರೆ ಆತನಿಗೆ ತನ್ನ ಮಗಳನ್ನು ಧಾರಾಳವಾಗಿ ಧಾರೆ ಎರೆದು ಕೊಡಬಹುದು ಎಂದು ಅಂದಿನವರು ನಂಬುತ್ತಿದ್ದರು. ಏಕೆಂದರೆ; ಆತ ತನ್ನ ಮನೆಯ ತೋಟವನ್ನು ಚೆನ್ನಾಗಿ ನೋಡಿಕೊಂಡಿದ್ದಾನೆ ಅಂದರೆ ಆತನಿಗೆ ಜವಾಬ್ದಾರಿಯನ್ನು ನಿರ್ವಹಿಸಲು ಸರಿಯಾಗಿ ಗೊತ್ತಿದೆ. ಹಾಗಾಗಿಯೇ ಆತ ಮನೆಗೆ ಬರುವ ಹೆಣ್ಣನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತಾನೆ ಎಂಬ ಭಾವ ಅಂದಿನ ಹವ್ಯಕರದಾಗಿತ್ತು. ಕೃಷಿ ಬದುಕಿನ ಯಶಸ್ಸನ್ನು ಅರಿತು ಗಂಡಿನ ಸಾಮರ್ಥ್ಯವನ್ನು ಅಳೆಯುವ ಒಂದು ಅಪರೂಪದ ಸಂಪ್ರದಾಯ ಹವ್ಯಕ ಸಮುದಾಯದಲ್ಲಿ ಬಹಳ ಹಿಂದಿನಿಂದಲೂ ಇದ್ದಿದ್ದನ್ನು ಹಿರಿಯ ಹವ್ಯಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.

ಆದರೆ ಇವತ್ತು ಅದೇ ಸಮುದಾಯದಲ್ಲಿ ಏನಾಗಿದೆ ಗೊತ್ತಲ್ಲ? ಊರಿನಲ್ಲಿ ತೋಟ, ಗದ್ದೆ ನೋಡಿಕೊಂಡಿರುವ ಅನೇಕ ಹವ್ಯಕರು ಇಂದು ಒತ್ತಾಯದ ಅವಿವಾಹಿತ ಜೀವನಕ್ಕೆ ಒಗ್ಗಿಕೊಳ್ಳುವ ಅನಿವಾರ್ಯತೆಯಲ್ಲಿದ್ದಾರೆ. ಹಳ್ಳಿಯ ಹವ್ಯಕ ಮಾಣಿಗಳಿಗೆ ಜಪ್ಪಯ್ಯ ಅಂದರೂ ಹೆಣ್ಣು ಸಿಗುತ್ತಿಲ್ಲ. ಕೆಲ ಹವ್ಯಕ ಹುಡುಗಿಯರು ಕೂಡ "ಹಳ್ಳಿಯವನನ್ನು ಮದುವೆಯಾಗಿ ನನ್ನಮ್ಮ ಅನುಭವಿಸಿದ್ದು ಸಾಕು. ನಾನಾದರೂ ಪೇಟೆಯವನನ್ನು ಮದುವೆಯಾಗಿ ಆರಾಮವಾಗಿರೋಣ ಅಂದುಕೊಂಡಿದ್ದೇನೆ" ಅಂತ ಮುಲಾಜಿಲ್ಲದೇ ಹೇಳುತ್ತಿದ್ದಾರೆ. ಹವ್ಯಕರಲ್ಲಿ ಹೆಣ್ಣು ಹೆತ್ತ ಅನೇಕ ಮಂದಿ ಇದೇ ಧಾಟಿಯ ಮಾತನ್ನು ಹೇಳುತ್ತಿದ್ದಾರೆ. ಹಳ್ಳಿಯ ಜೀವನದಲ್ಲಿ ನೆಮ್ಮದಿಯಿಲ್ಲ, ಪೇಟೆಯ ಜೀವನದಲ್ಲಿ ನೆಮ್ಮದಿಯೇ ಎಲ್ಲ ಅಂತ ಇವರಿಗೆ ಹೇಳಿಕೊಟ್ಟವರು ಯಾರು ಸ್ವಾಮಿ?

ಇದು ಕೇವಲ ಹವ್ಯಕ ಸಮುದಾಯದ ಕಥೆಯಲ್ಲ. ಅನೇಕ ಸಮುದಾಯಗಳ ವ್ಯಥೆ.

ಸಾಫ್ಟ್‌ವೇರ್, ಹಾರ್ಡ್‌ವೇರ್, ವೈದ್ಯಕೀಯ ವೃತ್ತಿ ಮತ್ತು ಇಂಜಿನಿಯರಿಂಗ್‌ಗೆ ಅಪಾರವಾದ ಗೌರವ ಕೊಡುವ ಇಂದಿನ ಸಮಾಜ, ಶ್ರಮಿಕ ಜೀವನ ನಡೆಸುವ ರೈತ ಮತ್ತು ಆತನ ಕೆಲಸಕ್ಕೇಕೆ ಗೌರವ ನೀಡುತ್ತಿಲ್ಲ?

ಇವತ್ತು ನಮ್ಮ ದೇಶದ ಹಳ್ಳಿಗಳಲ್ಲಿಯೇ ಉಳಿದುಕೊಂದು ಕೃಷಿ ಅಥವಾ ರೈತಾಪಿ ಕೆಲಸವನ್ನು ಮಾಡುತ್ತಿರುವ ಯುವಕ ಮತ್ತು ಮಧ್ಯಮ ವಯಸ್ಕರ ಶೈಕ್ಷಣಿಕ ಹಿನ್ನಲೆ ಸ್ವಲ್ಪ ವಿಚಿತ್ರವಾಗಿದೆ. ಅದು ಯಾವುದೇ ಹಳ್ಳಿಯಿರಲಿ, ಅಲ್ಲಿ ಸ್ವಲ್ಪ ಮಟ್ಟಿಗೆ ಅಕ್ಷರ ಕಲಿತವ ಹಳ್ಳಿಗೆ ಹತ್ತಿರವಿರುವ ಯಾವುದಾದರೂ ಪಟ್ಟಣದಲ್ಲಿ ನೆಲೆ ನಿಲ್ಲಲು ಪ್ರಯತ್ನ ಪಡುತ್ತಾನೆ. ಆ ಅಕ್ಷರ ಕಲಿತವನಿಗೆ ಸ್ವಲ್ಪ ಮಟ್ಟಿಗಿನ ಇಂಗ್ಲಿಷ್ ಜ್ಞಾನವಿದ್ದರೆ ಬೆಂಗಳೂರು, ಮುಂಬಯಿಯ ಹಾದಿ ಹಿಡಿಯುತ್ತಾನೆ. ಆತ ಖಂಡಿತ ಹಳ್ಳಿಯಲ್ಲಿಯೇ ಉಳಿದು ರೈತನಾಗಿ ಬದುಕುವ ಕನಸು ಕಾಣುವುದಿಲ್ಲ. ಇವತ್ತಿನ ಯುವಕರಲ್ಲಿ ರೈತಾಪಿಯನ್ನು ಆಯ್ದುಕೊಂಡವರಲ್ಲಿ ಹೆಚ್ಚಿನವರು ಶೈಕ್ಷಣಿಕವಾಗಿ ಹೆಚ್ಚಿನ ಸಾಧನೆಯನ್ನು ಮಾಡಿದವರಲ್ಲ.

ಇಂಥ ಒಂದು ವಿಚಿತ್ರ ಸನ್ನಿವೇಶಕ್ಕೆ ಕಾರಣ ಹುಡುಕುತ್ತಾ ಹೋದರೆ ನಮ್ಮ ಹುಡುಕಾಟ ಬಂದು ತಲುಪುವುದು ಇಂದಿನ ಶಿಕ್ಷಣ ವ್ಯವಸ್ಥೆಯ ಕಾಲಬುಡಕ್ಕೆ.

ನಾನು ಕುಂದಾಪುರದ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದಾಗ ಅಲ್ಲಿನ ಶಿಕ್ಷಕರೊಬ್ಬರು "ನೀವು ಚೆನ್ನಾಗಿ ಕಲಿಯದಿದ್ದರೆ, ನಿಮ್ಮಿಂದ ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ಅಮೆರಿಕಕ್ಕೆ ಹೋಗಲು ಸಾಧ್ಯವಿಲ್ಲ. ಹಳ್ಳಿಯಲ್ಲೇ ಇರಬೇಕಾದೀತು" ಎಂದು ತರಗತಿಯಲ್ಲಿ ಪದೇ ಪದೇ ಹೇಳುತ್ತಿದ್ದದ್ದು ಇನ್ನೂ ಚೆನ್ನಾಗಿ ನೆನಪಿದೆ. ಬಹುಷಃ, ಅವರ "ಹಳ್ಳಿಯಲ್ಲಿಯೇ ಇರಬೇಕಾದೀತು" ಎಂಬ ಮಾತು ಶಾಲೆಯಲ್ಲಿ ಓದಿಯೂ ಹಳ್ಳಿಯನ್ನು ಬಿಡಲು ಸಾಧ್ಯವಾಗದೇ ಇರುವುದು ಮಹಾ ಅಪರಾಧ ಎಂಬ ಭಾವವನ್ನು ನಮ್ಮ ಮನಸ್ಸಿನಲ್ಲಿ ಗಟ್ಟಿಯಾಗಿ ಬಿತ್ತುತ್ತಿತ್ತು. ನಮಗೆ ಶಾಲೆಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಿ, ಒಳೆಯ ವಿದ್ಯಾಭ್ಯಾಸ ಪಡೆದು ಅಮೆರಿಕಕ್ಕೋ ಅಥವಾ ಬೆಂಗಳೂರಿಗೋ ಹೋಗಿ ನೆಲೆಸಿ ಅಲ್ಲಿ ಸಾಕಷ್ಟು ಕಾಸು ಮಾಡಿಕೊಂದವರ ಕಥೆಗಳನ್ನು ಆದರ್ಶವಾಗಿ ಹೇಳುತ್ತಿದ್ದರೇ ಹೊರತು, ನಮ್ಮ ಹಳ್ಳಿಯಲ್ಲೇ ಸಾವಯವ ಕೃಷಿಯ ಕುರಿತು ಸಾಕಷ್ಟು ಸಂಶೋಧನೆ ಮಾಡಿ ಗ್ರಾಮಜೀವನದಲ್ಲೇ ಬದುಕಿನ ಸಾರ್ಥಕ್ಯ ಕಂಡ ರೈತನೊಬ್ಬನ ಜೀವನಗಾಥೆಯನ್ನು ಆದರ್ಶವನ್ನಾಗಿ ಯಾವತ್ತೂ ಹೇಳಿಕೊಡಲಿಲ್ಲ. ಇಂಥದೆಲ್ಲ ಕಥೆಗಳ, ನಿದರ್ಶನಗಳ ಪರಿಣಾಮವಾಗಿಯೇ ನಮ್ಮ ಓರಗೆಯ ಅಸಂಖ್ಯ ಮಂದಿ ಯುವಕರ ಪಾಲಿಗೆ ರೈತ ಜೀವನ, ಕೃಷಿ ಜೀವನ ಎಂಬುದು ಓದಿನಲ್ಲಿ ಯಶಸ್ಸು ಸಾಧಿಸಲಾಗದವರ ಪಾಲಿನ ಕೊನೆಯ ಆಯ್ಕೆ ಎಂಬ ಭಾವನೆ ಮೂಡಿಸಿತು.

ನಾವು ಹೈಸ್ಕೂಲು, ಪಿಯುಸಿ ಓದುತ್ತಿದ್ದಾಗ ’ನೀವು ನಿಮ್ಮ ಜೀವನದಲ್ಲಿ ಮುಂದೆ ಏನಾಗಬೇಕು ಅಂತ ಬಯಸಿದ್ದೀರಿ?’ ಅಂತ ಶಿಕ್ಷಕರು, ಉಪನ್ಯಾಸಕರು ಕೇಳುವುದು ತೀರಾ ಸಾಮಾನ್ಯವಾಗಿತ್ತು. ಆ ಪ್ರಶ್ನೆಗಳಿಗೆ ನಾನು ಇಂಜಿನಿಯರ್ ಆಗುತ್ತೇನೆ, ಡಾಕ್ಟರ್ ಆಗುತ್ತೇನೆ ಎಂಬ ಉತ್ತರಗಳೂ ತೀರಾ ಸಾಮಾನ್ಯವಾಗಿದ್ದವು. ಆಪಿತಪ್ಪಿಯೂ ಕೂಡ ಯಾವುದೇ ವಿದ್ಯಾರ್ಥಿ ನಾನು ರೈತನಾಗುತ್ತೇನೆ ಅಂತ ಹೇಳುತ್ತಿರಲಿಲ್ಲ. ಬಹುಷಃ, ನಾವು ಅಷ್ಟು ಚಿಕ್ಕವರಿದ್ದಾಗಲೇ ನಮ್ಮ ಪಾಲಿಗೆ ರೈತಾಪಿ ಎಂಬುದು ಅಕ್ಷರವಿದ್ಯೆ ಕಲಿಯಲಾಗದವರ ಪಾಲಿನ ಕೊನೆಯ ಆಯ್ಕೆಯ ವೃತ್ತಿ ಎಂಬ ಭಾವ ಗಟ್ಟಿಯಾಗಿ ಮನೆಮಾಡಿತ್ತು. ಅದರಲ್ಲೂ ಧೈರ್ಯ ಮಾಡಿ "ನಮ್ಮ ಮನೆಯಲ್ಲಿ ತೋಟ ಇದೆ, ನಾನು ಕೃಷಿ ಮಾಡುತ್ತೇನೆ" ಎಂದು ಹೇಳಿದ ನಮ್ಮ ಸಹಪಾಠಿಯೆಡೆಗೆ ನೋಡಿ ನಾವೆಲ್ಲಾ ಅಪಹಾಸ್ಯದಿಂದ ನಕ್ಕಿದ್ದು, ತರಗತಿಯ ಶಿಕ್ಷಕರು ಆತನನ್ನು ನೋಡಿ ಹಾಸ್ಯ ಮಾಡಿದ್ದು ಅನ್ನದಾತನ ಕೆಲಸಕ್ಕೆ ನಾವು ಕೊಡುತ್ತಿರುವ ಗೌರವ ಯಾವ ಮಟ್ಟದ್ದಿರಬಹುದು ಎಂಬುದಕ್ಕೆ ಒಂದು ನಿದರ್ಶನವಾಗಿತ್ತು.

ಅನುಮಾನ ಬೇಡ: ಇವತ್ತಿನ ಶಾಲಾ ಶಿಕ್ಷಣದಲ್ಲಿಯೇ "ನೀನು ರೈತನಾಗಬೇಡ; ನೀನು ಚೆನ್ನಾಗಿ ಕಲಿತು ತಿಂಗಳ ಪಗಾರ ಬರುವ ಯಾವುದಾದರೂ ಕೆಲಸಕ್ಕೆ ಸೇರಿಕೋ" ಎಂಬ ಭಾವವನ್ನು ಪ್ರತಿಯೊಬ್ಬ ಎಳೆಯ ವಿದ್ಯಾರ್ಥಿಯ ಮನಸ್ಸಿನಲ್ಲಿ ವ್ಯವಸ್ಥಿತವಾಗಿ ಬಿತ್ತಲಾಗುತ್ತಿದೆ. ಪಾಲಕರು ಕೂಡ "ನಮ್ಮಿಂದ ಏನೂ ಮಾಡಲಾಗಲಿಲ್ಲ, ನೀನಾದರೂ ಕಲಿತು ದೊಡ್ಡ ನೌಕರಿ ಹಿಡಿದು ಏನಾದರೂ ಮಾಡು" ಎಂದು ಪದೇ ಪದ್ದೇ ಮಕ್ಕಳಿಗೆ ತಿಳಿಹೇಳಿ ಅವರಲ್ಲಿ ಮನಸ್ಸಿನಲ್ಲಿ ಕೃಷಿ ಬದುಕನ್ನು ಕೊನೆಯ ಆಯ್ಕೆಯನ್ನಾಗಿ ಮಾಡುತ್ತಿದ್ದಾರೆ.

ಕೃಷಿ ಮತ್ತು ರೈತಾಪಿ ಬುದ್ಧಿವಂತ ವಿದ್ಯಾರ್ಥಿಯ ಆಯ್ಕೆಯಲ್ಲ, ಅದೇನಿದ್ದರೂ ಶೈಕ್ಷಣಿಕ ಸಾಧನೆಯಲ್ಲಿ ಹಿಂದೆ ಉಳಿಯುವ ವಿದ್ಯಾರ್ಥಿಯ ಪಾಲಿನ ಕೊನೆಯ ಆಯ್ಕೆ ಎಂಬ ಮನೋಭಾವವನ್ನು ಇಂದಿನ ಶಿಕ್ಷಣ ವ್ಯವಸ್ಥೆ ಮತ್ತು ಪಾಲಕರು ವ್ಯವಸ್ಥಿತವಾಗು ಮಕ್ಕಳ ಮನಸ್ಸಿನಲ್ಲಿ ವ್ಯವಸ್ಥಿತವಾಗಿ ಬಿತ್ತುತ್ತಿದ್ದಾರೆ. ಇವತ್ತಿನ ಆರ್ಥಿಕ ಮತ್ತು ರಾಜಕೀಯ ಜಗತ್ತು ಕೂಡ ಇಂಥದ್ದೊಂದು ಭಾವಕ್ಕೆ ಪುಷ್ಟಿ ಕೊಡುವಂತೆ ಕೆಲಸಮಾಡುತ್ತಿದೆ. ಇವರೇ ಮುಂದೆ ದೊಡ್ಡವರಾದಾಗ ಅವರಿಂದ ರೈತಜೀವನದೆಡೆಗೆ ಗೌರವವನ್ನು ನಿರೀಕ್ಷಿಸುವುದು ಮೂರ್ಖತನದ ಕೆಲಸವಾಗುತ್ತದೆ.

ರೈತ ಮತ್ತು ಕೃಷಿಕನ ಶ್ರಮಜೀವನದೆಡೆಗೆ ಗೌರವ ಹುಟ್ಟಿಸದ, ರೈತರ ಯಶೋಗಾಥೆಗಳನ್ನು ಆದರ್ಶ ಎಂದು ಪರಿಗಣಿಸದ ಇಂದಿನ ಶಿಕ್ಷಣ ವ್ಯವಸ್ಥೆ ಬದಲಾಗುವವರೆಗೆ ಹಳ್ಳಿಗಳಿಂದ ಪಟ್ಟಣಗಳತ್ತ ಯುವಕರ ವಲಸೆ ತಡೆಯಲು ಸಾಧ್ಯವಿಲ್ಲ.

ವಿಜಯ್ ಜೋಶಿ, (ಫೆಬ್ರವರಿ ೩, ೨೦೧೦ರ ವಿಜಯ ಕರ್ನಾಟಕ ದೈನಿಕದಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳು

ವಿ.ರಾ.ಹೆ. ಹೇಳಿದ್ದಾರೆ…
excellent article. its totally true.
Unknown ಹೇಳಿದ್ದಾರೆ…
ಲೇಖನ ಚೆನ್ನಾಗಿದೆ ಮುಂದೇನು?
ಜಲಪಾತ ಹೇಳಿದ್ದಾರೆ…
nice article..
Vinay Hegdeಹೇಳಿದ್ದಾರೆ…
Good one:) Keep it Up
sudeesh ಹೇಳಿದ್ದಾರೆ…
ಕುಲ ಕಸುಬುಗಳನ್ನೂ ತಾತ್ಸಾರ ಮಾಡಿದುದರಿಂದ ಹಾಗು ಬ್ರಿಟಿಷರು ಕೆಲವು ಕುಲ ಕಸುಬುಗಳನ್ನೂ ಸ್ವಂತದ ಲಾಭಕ್ಕೆ ನಿಷೇಧ ಮಾಡಿದುದರಿಂದ ನಾವು ಇಂತಹ ಸ್ಥಿತಿಗೆ ಬಂದಿದ್ದೇವೆ.
ಆಯುರ್ವೇದ ಹಾಗೂ ಕೃಷಿ ಬಾರತೀಯರ ಸಾಮಾನ್ಯಜ್ಞಾನವಾಗಬೇಕು ಅದು ಕಾಲೇಜಿನಲ್ಲಿ ಕಲಿಯುವ ವಿಷಯ ವಾಗಬಾರದು. ಯುವಜನಾಂಗ ಇಂತಹ ಕಾರ್ಯಗಳಲ್ಲಿ ಆಸಕ್ತಿವಹಿಸಿ ಮುಂದಿನ ಪೀಳಿಗೆಗೆ ಮಾದರಿ ಆಗಬೇಕು ಅದರಲ್ಲಿಅರ್ಥವಿದೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ