ವಿಷಯಕ್ಕೆ ಹೋಗಿ

ಬಂದೂಕಿನಿಂದ ದೇಶದ ಸಮಸ್ಯೆಗೆ ಉತ್ತರ ಹುಡುಕಲು ಸಾಧ್ಯವಿಲ್ಲ

ಹೊರನಾಡಿನ ಸಮೀಪ ನಡೆದ ಪೋಲೀಸ್ ಎನ್‌ಕೌಂಟರಿನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದು, ಶಾಂತ ಮಲೆನಾಡಿನ ಹಸಿರು ನೆಲ ಬಿಸಿ ರಕ್ತದಿಂದ ಕೆಂಪಾಗಿದ್ದು ಇಡೀ ರಾಜ್ಯಕ್ಕೇ ಗೊತ್ತಾಗಿದೆ. ಇದೇ ಎನ್‌ಕೌಂಟರಿನಲ್ಲಿ ರಾಜ್ಯ ನಕ್ಸಲ್ ನಿಗ್ರಹ ದಳದ ಗುರುಪ್ರಸಾದ್ ಕೂಡ ಮೃತರಾಗಿದ್ದಾರೆ. ಅವರ ಕುಟುಂಬದ ನೋವಿಗೆ ಸಾಂತ್ವನ ಹೇಳಲು ಪದಗಳಿಲ್ಲ.


ಮೃತ ನಕ್ಸಲರ ಪೈಕಿ ಒಬ್ಬನಾದ ಮನೋಹರ ಹಿಂದೊಮ್ಮೆ ವೃತ್ತಿಯಿಂದ ಪತ್ರಕರ್ತನಾಗಿದ್ದ. ಸಾಕಷ್ಟು ಓದಿಕೊಂಡಿದ್ದ. ಇದಲ್ಲದೆ ನವಕರ್ನಾಟಕ ಪ್ರಕಾಶನದ ’ಹೊಸತು’ ಪತ್ರಿಕೆಗೆ ಆರ್ಥಿಕ ಸಂಕಷ್ಟ ಮತ್ತು ಜಾಗತೀಕರಣಗಳಂತಹ ಗಹನ ವಿಚಾರಗಳ ಬಗ್ಗೆ ಲೇಖನವನ್ನೂ ಬರೆದಿದ್ದ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಶಿವಮೊಗ್ಗದಲ್ಲಿ ಈತ ಬಿಎಸ್ಸಿ ಓದುತ್ತಿದ್ದ ದಿನಗಳಿಂದಲೇ ಅನೇಕ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಎಂದೂ ಪತ್ರಿಕೆಗಳಲ್ಲಿ ವರದಿಯಾಗಿದೆ.

ಇನ್ನೊಬ್ಬ ಮೃತ ನಕ್ಸಲ ಮೂಡಿಗೆರೆ ತಾಲೂಕು ಉದಸೆ ಗ್ರಾಮದ ದೇವಯ್ಯ ಕೂಡ ಬಿಎ ಪದವಿ ಪಡೆದಿದ್ದ. ಉದಸೆ ಊರಿನಲ್ಲಿ ಆತನೇ ಹೆಚ್ಚು ವಿದ್ಯಾವಂತ ಎಂದು ಹೇಳಲಾಗಿದೆ. ಇನ್ನೊಬ್ಬ ಮೃತ ನಕ್ಸಲ ನಾಗಸಾಲ್ಮಕ್ಕಿಯ ರವಿ ಕೇವಲ ಹತ್ತೊಂಬತ್ತು ವರ್ಷದ ಎಳೆಯ.

ಮೊನ್ನೆ ನಡೆದ ಎನ್‌ಕೌಂಟರಿನಲ್ಲಿ ಸಮಾಜಕ್ಕೆ ದೊಡ್ಡ ಆಸ್ತಿಯಾಗಬೇಕಿದ್ದ ಇಂಥ ಯುವಕರೇ ಹತ್ಯೆಯಾಗಿದ್ದನ್ನು ನೋಡಿದರೆ ಎಂಥವನಿಗಾದರೂ ಒಮ್ಮೆ ಕಣ್ಣೀರು ಬಂದೇ ಬರುತ್ತದೆ. ಅದರಲ್ಲೂ ಕೈಯಲ್ಲಿ ಪೆನ್ ಹಿಡಿದುಕೊಂಡು, ನೊಂದವರ ಪಾಲಿಗೆ ಧ್ವನಿಯಾಗಬೇಕಿದ್ದ, ಹಿಂದೆ ಪತ್ರಕರ್ತನಾಗಿದ್ದ ಮನೋಹರನ ಬಗ್ಗೆ ಹೆಚ್ಚೆಚ್ಚು ಕೇಳಿದಂತೆಲ್ಲಾ ಮನಸ್ಸಿಗೆ ತೀವ್ರ ವೇದನೆಯಾಗುತ್ತದೆ. ಹತ್ತೊಂಬತ್ತರ ಎಳೆಯ ರವಿಯ ಬಗ್ಗೆ ಏನು ಹೇಳಬೇಕೋ ತೋಚುತ್ತಿಲ್ಲ.

ಕರ್ನಾಟಕದಲ್ಲಿ ನಡೆದ ನಕ್ಸಲ್ ಎನ್‌ಕೌಂಟರ್‌ಗಳಲ್ಲಿ ಪೋಲೀಸರ ಗುಂಡಿಗೆ ಜೀವತೆತ್ತ ನಕ್ಸಲರಲ್ಲಿ ಅನೇಕರು ವಿದ್ಯಾವಂತರೇ ಕಂಡುಬರುತ್ತಾರೆ. ಅವರಲ್ಲಿ ಕೆಲವು ಮಂದಿ ವಿಶ್ವವಿದ್ಯಾಲಯದ ಮೆಟ್ಟಲನ್ನೂ ಹತ್ತಿದವರಾಗಿದ್ದಾರೆ. ಇಷ್ಟೊಂದು ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದರೂ, ಸಿದ್ಧಾಂತಕ್ಕಿಂತಲೂ ಬದುಕು ಮುಖ್ಯ ಎಂದು ತಿಳಿದಿರುವ(?) ಇಂಥ ಯುವಕರು ನಕ್ಸಲ್ ಚಳವಳಿಗೆ ಧುಮುಕಲು ಕಾರಣವೇನು?

ನಿಜ, ಸರಕಾರ ಪ್ರತಿಪಾದಿಸುತ್ತಿರುವಂತೆ ನಕ್ಸಲ್ ಚಳವಳಿಯೆಂಬುದು ಕೇವಲ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಯಲ್ಲ. ಇದರಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳೂ ಸೇರಿಕೊಂಡಿವೆ. ಕನ್ನಡನಾಡಿನ ಮಲೆನಾಡು ಮತ್ತು ಕರಾವಳಿಯ ಒಳಪ್ರದೇಶಗಳಲ್ಲಿ ಸರಿಯಾದ ಅಭಿವೃದ್ಧಿ ಆಗಿದಿದ್ದರೆ ನಕ್ಸಲ್ ಚಳವಳಿ ಬೇರುಬಿಡಲು ಕಾರಣಗಳೇ ಇರುತ್ತಿರಲಿಲ್ಲ. ಆದರೆ ಸ್ವಾತಂತ್ರ ಸಿಕ್ಕ ಇಷ್ಟು ವರ್ಷಗಳ ನಂತರವೂ ಏನೂ ಮಾಡದ ನಮ್ಮನ್ನಾಳುವ ನಿರ್ಲಜ್ಜ ರಾಜಕಾರಣಿಗಳು ನಕ್ಸಲರ ಗುಂಡಿನ ಮೊರೆತ ಕೇಳಲಾರಂಭಿಸಿದಂತೆಯೇ ಈ ಪ್ರದೇಶಗಳಿಗೆ ಪ್ಯಾಕೇಜು ಘೋಷಿಸಿ ಕೈ ಒರೆಸಿಕೊಂಡು ಹೋಗುತ್ತಾರೆ.

ಆದರೆ ಒಂದಿಷ್ಟು ಮಂದಿ ನಕ್ಸಲ್ ಚಳವಳಿಗೆ ಇಳಿಯಲು ಕಾರಣ ಕೇವಲ ಸರಕಾರ ನಿರ್ಲಕ್ಷ್ಯ ಮಾತ್ರವೇ ಕಾರಣವಲ್ಲ. ಅವರ ತಲೆಯಲ್ಲಿ ತುಂಬಿರುವ ಮಾವೋವಾದಿ ಸಿದ್ಧಾಂತವೂ ಈ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡುತ್ತಿರುವುದು ಸುಸ್ಪಷ್ಟ.

ದೇಶಕ್ಕೆ ಸ್ವಾತಂತ್ರ ಸಿಕ್ಕಾಗ ಇನ್ನು ಮುಂದೆ ನಮ್ಮ ದೇಶದಲ್ಲಿ ಅಸಮಾನತೆ ನಿವಾರಣೆಯಾಗುತ್ತದೆ. ನಮ್ಮ ರಾಜಕೀಯ ನಾಯಕರು ದೇಶವನ್ನು ಖಂಡಿತ ಅಭಿವೃದ್ಧಿಯ ಪಥದಲ್ಲಿ ಕೊಂಡೊಯ್ಯುತ್ತಾರೆ ಎಂಬ ಭರವಸೆ ನಮ್ಮ ಹಿರಿಯರಿಗಿತ್ತು. ಆದರೆ ಸ್ವಾತಂತ್ರ ಸಿಕ್ಕ ಕೆಲವೇ ವರ್ಷಗಳಲ್ಲಿ ಆ ಆಸೆಗೆ ನಮ್ಮ ನಾಯಕರು ತಣ್ಣೀರು ಸುರಿದರು. ಹಾಗಂತ ಈ ದೇಶ ಅಭಿವೃದ್ಧಿಯನ್ನೇ ಸಾಧಿಸಿಲ್ಲ ಅಂತಲ್ಲ. ಆದರೆ ಅದು ನಿರೀಕ್ಷಿತ ಮಟ್ಟದಲ್ಲಿಲ್ಲ.

ಈ ವಿಚಾರದ ಬಗ್ಗೆ ದೇಶದ ಪ್ರತಿಯೊಬ್ಬ ಜವಾಬ್ದಾರಿಯುತ ಪ್ರಜೆಯಲ್ಲೂ ಆಕ್ರೋಶ ಹರಳುಗಟ್ಟಿದೆ. ದೇಶದ ರಾಜಕಾರಣದ ಬಗ್ಗೆ ಸಮಾಧಾನ ಹೊಂದಿರುವ ಒಬ್ಬನೇ ಒಬ್ಬ ಪ್ರಜೆಯೂ ನಮಗೆ ಸಿಗಲಿಕ್ಕಿಲ್ಲ. ನಕ್ಸಲರಿಗಿರುವುದೂ ಇದೇ ತೆರನಾದ ಆಕ್ರೋಶ. ಹೆಚ್ಚಿನವರಲ್ಲಿ ಇಂಥ ಆಕ್ರೋಶ ಸಾಂದರ್ಭಿಕವಾಗಿದ್ದರೆ ನಕ್ಸಲರಲ್ಲಿ ಇದು ನಿರಂತರವಾಗಿದೆ. ಆದರೆ ದೇಶದ ಹುಳುಕುಗಳನ್ನು ಬಂದೂಕು ಹಿಡಿಕೊಂಡು ಸರಿಪಡಿಸಲು ಸಾಧ್ಯವಿಲ್ಲ ಎಂಬ ಅರಿವು ಅವಿರಿಗಿಲ್ಲ. ಅದಲ್ಲದೆ ನಕ್ಸಲರಿಗೆ ಬೌದ್ಧಿಕ ಶಕ್ತಿ ನೀಡಲು ಒಂದಿಷ್ಟು ಮಂದಿ ನಾಡಿನಲ್ಲಿದ್ದುಕೊಂಡು ಕೆಲಸಮಾಡುತ್ತಿರುವು ಯಾರಿಗೂ ಗೊತ್ತಿರದ ಸಂಗತಿಯಲ್ಲ.

ಅಂಬೇಡ್ಕರ್ ಭಾರತದ ಶೋಷಿತರ ಪಾಲಿಗೆ ಯಾವತ್ತಿಗೂ ಸ್ಪೂರ್ಥಿಯ ಸೆಲೆ. ಅವರು ಗತಿಸಿ ದಶಕಗಳೇ ಸಂದಿದ್ದರೂ ಅವರು ಸಮಾನತೆಯ ಸ್ಥಾಪನೆಗಾಗಿ ಪ್ರತಿಪಾದಿಸಿದ ಮೌಲ್ಯಗಳು ಕಿಂಚಿತ್ತೂ ಸವಕಲಾಗಿಲ್ಲ. ಅವರೇನಾದರೂ ದೌರ್ಜನ್ಯಕ್ಕೊಳಗಾದ ದಲಿತರ ಬಳಿ ತೆರಳಿ ನಿಮಗೆ ಮೇಲ್ವರ್ಗದವರಿಂದ ಅನ್ಯಾಯವಾಗಿದೆ. ಬಂದೂಕಿನಿಂದ ಆ ಅನ್ಯಾಯಕ್ಕೆ ಉತ್ತರ ನೀಡಿ ಅಂತ ದಲಿತರನ್ನು ಹಿಂಸೆಗೆ ಪ್ರಚೋದಿಸಿದ್ದರೆ ದೇಶದ ಪರಿಸ್ಥಿತಿ ಏನಾಗಿರುತ್ತಿತ್ತು ಎಂಬುದನ್ನು ಊಹಿಸಲೂ ಸಾಧ್ಯವಿಲ್ಲ.

ಆದರೆ ಅಂಬೇಡ್ಕರ್ ಹಾಗೆ ಮಾಡಲಿಲ್ಲ. ಬದಲಿಗೆ ದಲಿತರಿಗೆ ಶಿಕ್ಷಣ ನೀಡಿದರು. ಅವರಲ್ಲಿ ಆತ್ನವಿಶ್ವಾಸ ತುಬಿದರು. ಸಚ್ಚಾರಿತ್ರ್ಯಕ್ಕೆ, ಶೀಲಕ್ಕೆ ಅವರು ಪ್ರಾಧಾನ್ಯತೆ ನೀಡಿದರೇ ಹೊರತು ಯಾವ ಕ್ಷಣದಲ್ಲೂ ಹಿಂಸೆಗೆ ಪ್ರಚೋದನೆ ನೀಡಲಿಲ್ಲ. ಇದೆಲ್ಲದರ ಪರಿಣಾಮವಾಗಿಯೇ ಹಿಂದೊಮ್ಮೆ ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದಲಿತ ಸಮಾಜದ ಅನೇಕ ಮಂದಿ ಇವತ್ತು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನವನ್ನು ಅಲಂಕರಿಸಿದ್ದಾರೆ.

ಕೇವಲ ಅಂಬೇಡ್ಕರ್ ಮಾತ್ರವಲ್ಲ. ಭಾರತವನ್ನು ಉತ್ಕಟವಾಗಿ ಪ್ರೀತಿಸುತ್ತಿದ್ದ ಮಹಾತ್ಮಾ ಗಾಂಧಿ, ರಾಮಮನೋಹರ ಲೋಹಿಯಾ, ಸ್ವಾಮಿ ವಿವೇಕಾನಂದ... ಇವರೆಲ್ಲರಿಗೂ ಈ ದೇಶದ ಸಾಮಾಜಿಕ ಅವ್ಯವಸ್ಥೆಗಳ ಬಗ್ಗೆ ತೀವ್ರ ಆಕ್ರೋಶವಿತ್ತು. ಆದರೆ ಅವರು ಯಾವ ಹಂತದಲ್ಲೂ ಬಂದೂಕು ಹಿಡಿದುಕೂಂಡು ಜನರನ್ನು ಹೆದರಿಸಿ ಸಮಾಜದಲ್ಲಿ ಪರಿವರ್ತನೆಯನ್ನು ತರಲು ಹೊರಡಲಿಲ್ಲ. ಬದಲಿಗೆ ವೈಚಾರಿಕ ಕ್ರಾಂತಿಯ ಮೂಲಕ ಅಹಿಂಸಾತ್ಮಕವಾಗಿ ಸಮಾಜ ಸುಧಾರಣೆಗೆ ಟೊಂಕಕಟ್ಟಿ ನಿಂತರು.
ಇವರ ಕಾರ್ಯಗಳಿಂದ ದೇಶವೇನೂ ಎಲ್ಲಾ ಸಮಸ್ಯೆಗಳಿಂದಲೂ ಮುಕ್ತವಾಗಿಲ್ಲದೆ ಇರಬಹುದು. ಆದರೆ ಸಮಸ್ಯೆಗಳಿಗೆ ಪರಿಣಾಮಕಾರಿ ಉತ್ತರವನ್ನು ಈ ಮಹನೀಯರು ಖಂಡಿತಾ ನೀಡಿದ್ದಾರೆ.

ಮಲೆನಾಡಿನ ಸಮಸ್ಯೆಗಳನ್ನು ಬಂದೂಕಿನ ಮೂಲಕ ಪರಿಹರಿಸಲು ಹೊರಟಿರುವ ನಕ್ಸಲರಿಗೆ ಇದೆಲ್ಲ ಗೊತ್ತಿಲ್ಲದೆ ಇಲ್ಲ. ಆದರೂ ಕೆಲವು ಮುಂದಿ ಧೂರ್ತರ ಮಾತಿಗೆ ಮರುಳಾಗಿ ತಮ್ಮ ಕುಟುಂಬದವರನ್ನು ಬಿಟ್ಟು ನಾಡಿಗೆ ಓಳ್ಳೆಯದನ್ನು ಮಾಡಳು ಸಾಧ್ಯವಿಲ್ಲದ ನಕ್ಸಲ್ ಚಳವಳಿಗೆ ಸೇರಿಕೊಳ್ಳುತ್ತಿದ್ದಾರೆ. ಅದಲ್ಲದೆ, ನಕ್ಸಲ್ ಚಳವಳಿಗೆ ಸೇರಲು ’ಕ್ರಾಂತಿಕವಿ’ತೆಗಳ ಮೂಲಕ ಪ್ರೇರಣೆ ನೀಡುವವರ ಮಕ್ಕಳು ಎಂದಿಗೂ ನಕ್ಸಲರಾಗುವುದಿಲ್ಲ ಎಂಬುದನ್ನು ಅರಿಯುತ್ತಿಲ್ಲ. ಇದೂ ಕೂಡ ಸದ್ಯದ ಸಾಮಾಜಿಕ ದುರಂತಗಳಲ್ಲಿ ಒಂದು.

ದೇಶದ ಸಮಸ್ಯೆಗಳಿಗೆ ಉತ್ತರ ಬಂದೂಕಿನ ನಳಿಕೆಯಲ್ಲಿ ಇದೆ ಎನ್ನುವವರು ಬಿಳಿಗಿರಿರಂಗನ ಬೆಟ್ಟದಲ್ಲಿ ಸೋಲಿಗರ ಮಧ್ಯದಲ್ಲಿದ್ದುಕೊಂಡು ಹಗಲಿರುಳೆನ್ನದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸ್ವಾಮಿ ವಿವೇಕಾನಂದ ಗಿರಿಜನ ಕೇಂದ್ರದ ಡಾ. ಸುದರ್ಶನರನ್ನು ನೆನಪಿಸಿಕೊಳ್ಳಲಿ. ಬಂದೂಕನ್ನು ಬದಿಗಿಟ್ಟು ಪ್ರಜಾಪ್ರಭುತ್ವದ ಹಾದಿಯಲ್ಲಿ ದೇಶದ ಸಮಸ್ಯೆಗಳಿಗೆ ಸ್ಪಂದಿಸಲಿ. ಇದೆಲ್ಲಕ್ಕಿಂತ ಹೆಚ್ಚಾಗಿ ನಮ್ಮನ್ನಳುವ ರಾಜಕಾರಣಿಗಳೆಂಬ ಬಿಳಿಯಾನೆಗಳು ದೇಶದ ಅಭಿವೃದ್ಧಿಯೆಡೆಗೆ ಇನ್ನಾದರೂ ಪ್ರಾಮಾಣಿಕವಾಗಿ ಗಮನ ನೀಡಲಿ. ಆಗ ಎಲ್ಲ ರೀತಿಯ ಹಿಂಸೆಗಳಿಗೂ ಲಗಾಮು ಬೀಳುತ್ತದೆ.

ಕಾಮೆಂಟ್‌ಗಳು

Ravi Adapathya ಹೇಳಿದ್ದಾರೆ…
ಕೈಯಲ್ಲಿ ಪೆನ್ ಹಿಡಿದುಕೊಂಡು, ನೊಂದವರ ಪಾಲಿಗೆ ಧ್ವನಿಯಾಗಬೇಕಿದ್ದ,-----dore idu ivathigalla..hindina kalakaythu..ivathina pathrakartharu olledannu bittu ketadanne jasthi madthare..
ಅನಾಮಧೇಯಹೇಳಿದ್ದಾರೆ…
banduku ella prashnegu uttaravalla...khandita...
but shantiyinda ellavu sadhyna??
Unknown ಹೇಳಿದ್ದಾರೆ…
ಲೇಖನ ಚೆನ್ನಾಗಿದೆ. ನಾನು ಮಡಾಮಕ್ಕಿ ಗೆ ಮೊನ್ನೆ ಹೋಗಿದ್ದೇ ಅಲ್ಲಿಯ ಜನರ ಪರಿಸ್ಥಿತಿಯನ್ನು ನೋಡಿದರೆ ತುಂಬಾ ಕಷ್ಟ ಯಾವ ಸಕಾಱರದಿಂದಲೂ ಅಲ್ಲಿ ಕೆಲಸ ಅಗಿಲ್ಲ ಆದ್ದರಿಂದ ಆಲ್ಲಿ ನಕ್ಸಲರು ಬೀಡು ಬಿಡಲು ಕಾರಣವಾಗಿದೆ.
Unknown ಹೇಳಿದ್ದಾರೆ…
Can u please specify wht is development in ur opinion ..
All r appreciating Dr Ambedkar and all other but the is their any change in SC/ST.. no everything u cant change with education if only education can change then y Ambedkar in his last days converted into Buddhism.. without changing the system our cast, religion etc etc.. we cant change anything.. who told u Maoism is bad.. if its bad then many countries followed tht will nt be survived by now.. everything is good only but the way of thinking way of predicting and understanding with concern of our country makes everything different thts it.. I think ..

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her