ವಿಷಯಕ್ಕೆ ಹೋಗಿ
ಈ ವಿರೋಧ ಯಾವ ಪುರುಷಾರ್ಥದ ಸಾಧನೆಗಾಗಿ?

ನಿಜಕ್ಕೂ ಆಶ್ಚರ್ಯವಾಗುತ್ತಿದೆ! ಆಶ್ಚರ್ಯಪಡಬೇಕಾದ ಕಾರಣವೂ ಇದೆ. ೧೯೬೨ರಲ್ಲಿ ಭಾರತದ ಮೇಲೆ ಚೀನಾ ಮೋಸದಿಂದ ದಾಳಿ ಮಾಡಿದಾಗ, ಭಾರತದ ಅಖಂಡತೆ ಆಪತ್ತಿನಲ್ಲಿದ್ದಾಗ ಸಿದ್ಧಾಂತಕ್ಕೆ ಜೋತುಬಿದ್ದು ಚೀನಾದ ವಿರುದ್ಧ ಮಾತನಾಡದೆ ತೆಪ್ಪಗಿದ್ದ ಕಮ್ಯುನಿಸ್ಟರು ಭಾರತ ಮತ್ತು ಅಮೆರಿಕಾ ನಡುವೆ ಏರ್ಪಟ್ಟಿರುವ ನಾಗರಿಕ ಅಣು ಒಪ್ಪಂದದ ನಂತರ "ಭಾರತದ ಸಾರ್ವಭೌಮತೆ ಅಪಾಯದಲ್ಲಿದೆ" ಎಂದು ಕೂಗೆಬ್ಬಿಸುತ್ತಿರುವುದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗದೆ ಇರದು.
೨೦೦೫ರಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಏರ್ಪಟ್ಟ ನಾಗರಿಕ ಅಣುಶಕ್ತಿ ಒಪ್ಪಂದದ ನಂತರ ಎಡಪಂಥೀಯರು ಮತ್ತು ವಿರೋಧಪಕ್ಷಗಳ ದೇಶದ ಬಗೆಗಿನ ಕಾಳಜಿ ಇದ್ದಕ್ಕಿದ್ದಂತೆ ಹೆಚ್ಚಾದ ಹಾಗಿದೆ.
ಅಮೆರಿಕ ತಾನು ಅಣ್ವಸ್ತ್ರಶಕ್ತ ರಾಷ್ಟ್ರವಾದಾಗಿನಿಂದ ಭಾರತಕ್ಕೆ ಈಗ ಕೊಡಲು ಯೋಚಿಸಿರುವ ಅಣುಶಕ್ತಿ ತಂತ್ರಜ್ಞಾನವನ್ನು ಜಗತ್ತಿನ ಬೇರಾವ ರಾಷ್ಟ್ರಕ್ಕೂ ಕೊಟ್ಟ ಉದಾಹರಣೆ ಇಲ್ಲ. ಆದರೆ ಕಳೆದ ವರ್ಷ ಅಮೆರಿಕದ ಕಾಂಗ್ರೆಸ್ ತನ್ನ ನಿಲುವನ್ನು ಸಡಿಲಿಸಿ ಭಾರತಕ್ಕೆ ಅಣುಶಕ್ತಿ ತಂತ್ರಜ್ಞಾನವನ್ನು ಪಡೆದುಕೊಳ್ಳುವ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ.
ಅಮೆರಿಕದೊಂದಿಗೆ ಮಾಡಿಕೊಳ್ಳಲಾದ ನಾಗರಿಕ ಅಣುಶಕ್ತಿ ಒಪ್ಪಂದವು ಜಾರಿಗೆ ಬಂದರೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇನ್ನೂ ಹೆಚ್ಚಾಗುತ್ತದೆ. ಅಲ್ಲದೆ ಈ ಒಪ್ಪಂದವನ್ನು ಪ್ರತಿವರ್ಷ ನವೀಕರಿಸಿಕೊಳ್ಳಬೇಕದ ಅಗತ್ಯವೂ ಭಾರತಕ್ಕಿಲ್ಲ. ಈ ಒಪ್ಪಂದದ ಮೂಲಕ ಅಮೆರಿಕ ಭಾರತವನ್ನು ಜವಾಬ್ದಾರಿಯುತ ಅಣ್ವಸ್ತ್ರಶಕ್ತ ರಾಷ್ಟ್ರ ಎಂದು ಒಪ್ಪಿಕೊಂಡಂತಾಗಿದೆ. ೧೯೯೮ರಲ್ಲಿ ಪೋಖ್ರಾನ್‌ನಲ್ಲಿ ಅಣುಬಾಂಬ್ ಪರೀಕ್ಷೆಮಾಡಿದ ನಂತರ ಭಾರತ ತನ್ನನ್ನು ಅಣ್ವಸ್ತ್ರಶಕ್ತ ರಾಷ್ಟ್ರ ಎಂದು ಒಪ್ಪಿಕೊಳ್ಳುವಂತೆ ವಿಶ್ವದ ಬಲಾಢ್ಯ ದೇಶಗಳ ಮುಂದೆ ಮಾಡಿಕೊಂಡಿದ್ದ ಮನವಿಗೆ ಈಗ ಪುರಸ್ಕಾರ ದೊರೆತಂತಾಗಿದೆ.
ಈ ಒಪ್ಪಂದದ ಪ್ರಕಾರ ಭಾರತಕ್ಕೆ ತನ್ನ ಮಿಲಿಟರಿ ಸಂಬಂಧಿತ ಅಣುಶಕ್ತಿ ಕೇಂದ್ರ ಮತ್ತು ನಾಗರಿಕ ಉಪಯೋಗಕ್ಕಾಗಿನ ಅಣುಶಕ್ತಿ ಕೇಂದ್ರಗಳನ್ನು ಪ್ರತ್ಯೇಕಮಾಡುವ ಬಲ ಬಂದಿದೆ. ಅಲ್ಲದೆ ಭಾರತದ ಅಣ್ವಸ್ತ್ರ ಚಟುವಟಿಕೆಗಳನ್ನು ಅಂತಾರಾಷ್ಟ್ರೀಯ ವೀಕ್ಷಕರ ಪರೀಕ್ಷೆಗೆ ಒಳಪಡಿಸಬೇಕಾದ ಅಗತ್ಯವೂ ಇಲ್ಲ. ಭಾರತದ ಮಿಲಿಟರಿ ಅಣ್ವಸ್ತ್ರ ಚಟುವಟಿಕೆಗಳು, ಸುಧಾರಿತ ಅಣ್ವಸ್ತ್ರಗಳ ಸಂಶೋಧನೆ ಮತ್ತು ಅಭಿವೃದ್ಧಿಪಡಿಸುವಿಕೆ ಹಾಗೂ ತ್ರಿ-ಸ್ತರದ ಅಣುಶಕ್ತಿ ಕಾರ್ಯಕ್ರಮಕ್ಕೆ ಈ ಒಪ್ಪಂದದಿಂದ ಯಾವ ಅಪಾಯವೂ ಇಲ್ಲ.
ತನ್ನ ಅಣ್ವಸ್ತ್ರ ಕಾರ್ಯಕ್ರಮಗಳಿಗೆ ಬೇಕಾಗುವ ಇಂಧನಗಳ ನಿರಂತರ ಪೂರೈಕೆ, ತನಗೆ ಬೇಕಾದಷ್ಟು ಅಣು ಇಂಧನಗಳನ್ನು ಸಂಗ್ರಹಿಸಿಟ್ಟುಕೊಳ್ಳುವ ಅವಕಾಶವೂ ಭಾರತಕ್ಕೆ ದಕ್ಕಿದೆ. ಅಣು ಇಂಧನ ಸಂಗ್ರಹಾಗಾರಗಳನ್ನು ಸ್ಥಾಪಿಸಲು ಅಮೆರಿಕದ ನೆರವೂ ಸಿಗಲಿದೆ. ಮನಮೋಹನ್ ಸಿಂಗ್ ಅವರು ಅಗಸ್ಟ್ ೧೭, ೨೦೦೬ರಂದು ಸಂಸತ್ತಿನಲ್ಲಿ ಮಾಡಿದ ಭಾಷಣದ ಪ್ರಕಾರ ಭಾರತದ ವ್ಯೂಹಾತ್ಮಕ ಅಣ್ವಸ್ತ್ರ ಚಟುವಟಿಕೆ, ತ್ರಿ-ಸ್ತರದ ಅಣ್ವಸ್ತ್ರ ಕಾರ್ಯಕ್ರಮ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿನ ದೇಶದ ಸ್ವಾಯುತ್ತತೆಗೆ ಈ ಒಪ್ಪಂದದಿಂದ ಯಾವುದೇ ಅಪಾಯವೂ ಇಲ್ಲ.
ತನ್ನ ಶತ್ರುಗಳನ್ನು ಸದೆಬಡಿಯಲು ಬೇಕಾದಷ್ಟು ಅಣ್ವಸ್ತ್ರಗಳು ಭಾರತದ ಬಳಿ ಈಗಾಗಲೇ ಇವೆ. ಆದರೂ ಒಂದು ವೇಳೆ ಭವಿಷ್ಯದಲ್ಲಿ ಭಾರತಕ್ಕೆ ಅಣ್ವಸ್ತ್ರಗಳ ಪರೀಕ್ಷೆ ಮತ್ತು ಉತ್ಪಾದನೆಯ ಅಗತ್ಯ ಕಂಡುಬಂದರೆ ಅದು ತಪ್ಪಲ್ಲ. ಹಾಗಾಗಿಯೇ ತನ್ನ ಅಣ್ವಸ್ತ್ರ ಪರೀಕ್ಷೆಗಳ ಮೇಲಿನ ನಿರ್ಬಂಧಗಳನ್ನು, ಅಡೆತಡೆಗಳನ್ನು ಭಾರತ ೧೯೯೮ರಿಂದಲೂ ಮೆಟ್ಟಿನಿಂತಿದೆ. ಈ ಒಪ್ಪಂದದಲ್ಲಿ ಕೂಡ ಭಾರತದ ಅಣ್ವಸ್ತ್ರ ಪರೀಕ್ಷಾ ಸ್ವಾತಂತ್ರಕ್ಕೆ ಯಾವುದೇ ನಿರ್ಬಂಧವಿಲ್ಲ. ಭವಿಷ್ಯದಲ್ಲಿ ಅಣ್ವಸ್ತ್ರಗಳನ್ನು ಪರೀಕ್ಷೆಮಾಡುವ ಮತ್ತು ಅಭಿವೃದ್ಧಿಪಡಿಸುವ ಸಂಪೂರ್ಣ ಅಧಿಕಾರ ಭಾರತದ ಕೈಯಲ್ಲೇ ಇರುತ್ತದೆ, ಅಮೆರಿಕ ಬಳಿಯಲ್ಲ. ಭಾರತ ಪೋಖ್ರಾನ್‌ನಲ್ಲಿ ನಡೆಸಿದ್ದ ಅಣ್ವಸ್ತ್ರ ಪರೀಕ್ಷೆಯನ್ನು ತೀವ್ರವಾಗಿ ವಿರೋಧಿಸಿದ್ದ ಕಮ್ಯುನಿಸ್ಟರಿಗೆ ಈಗ ಭಾರತದ ಅಣ್ವಸ್ತ್ರ ಪರೀಕ್ಷಾ ಸ್ವಾತಂತ್ರದ ಬಗ್ಗೆ ಚಿಂತೆ ಪ್ರಾರಂಭವಾಗಿದ್ದಾದರೂ ಹೇಗೆ?
ಇವತ್ತು ಭಾರತದ ಮಿಲಿಟರಿ, ಆರ್ಥಿಕ ಮತ್ತು ಮಾನವಶಕ್ತಿಯನ್ನು ಜಗತ್ತಿನ ಬಲಾಢ್ಯ ದೇಶಗಳಾದ ಅಮೆರಿಕ, ರಷ್ಯಾ, ಚೀನಾ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಗೌರವಿಸುತ್ತಿವೆ. ಅಂತಾರಾಷ್ಟ್ರೀಯ ಸ್ತರದಲ್ಲಿ ಅಮೆರಿಕ್ಕೇ ಮಾತಿನ ಎದಿರೇಟು ನೀಡುವ ದಿಟ್ಟತನವೂ ಭಾರತಕ್ಕಿದೆ. ಸ್ವಾತಂತ್ರಾನಂತರ ಹಿಂದೆಂದೂ ತೋರದಿದ್ದ ರಾಜಕೀಯ ಪ್ರಬುದ್ಧತೆಯನ್ನು ವಾಜಪೇಯಿ ಆಡಳಿತಾವಧಿಯಿಂದ ಭಾರತ ತೋರುತ್ತಿದೆ. ಮನಮೋಹನ್ ಸಿಂಗ್ ಕೂಡ ಭಾರತಕ್ಕೆ ಸುನಾಮಿ ಅಪ್ಪಳಿಸಿದ್ದ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ನೆರವನ್ನು ಸ್ಪಷ್ಟವಾಗಿ ನಿರಾಕರಿಸಿ ಭಾರತವೆಂಬುದು ಭಿಕ್ಷುಕರ ನಾಡಲ್ಲ ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಮುಕ್ತ ಆರ್ಥಿಕ ನೀತಿಯನ್ನು ತಬ್ಬಿಕೊಂಡ ನಂತರ ಚೀನಾದ ಅರ್ಥವ್ಯವಸ್ಥೆ ಬೆಳೆಯುತ್ತಿರುವ ವೇಗ ಅಮೆರಿಕಕ್ಕೆ ದಿಗಿಲು ಹುಟ್ಟಿಸಿದೆ. ಆರ್ಥಿಕವಾಗಿ ಬಂಡವಾಳಶಾಹಿತ್ವವನ್ನು ಒಪ್ಪಿಕೊಂಡಿದ್ದರೂ ಚೀನಾ ಇವತ್ತಿಗೂ ರಾಜಕೀಯವಾಗಿ ಕಮ್ಯುನಿಸ್ಟ್ ದೇಶ. ಚೀನಾದ ಕ್ಷಿಪ್ರ ಬೆಳವಣಿಗೆ ಮುಂದೊಂದು ದಿನ ತನಗೆ ಬೆದರಿಕೆಯೊಡ್ಡಬಹುದು ಎಂಬ ಭಯ ಪ್ರಜಾಪ್ರಭುತ್ವವಾದಿ ಅಮೆರಿಕಕ್ಕಿದೆ.
ಏಷ್ಯಾ ಖಂಡದಲ್ಲಿ ಚೀನಾದ ಬೆಳವಣಿಗೆಗೆ ಪೈಪೋಟಿ ನೀಡುವ ಸಾಮರ್ಥ್ಯ ಇರುವುದು ಭಾರತಕ್ಕೆ ಮಾತ್ರ. ಪಾಕಿಸ್ತಾನ, ಬಾಂಗ್ಲಾದೇಶಗಳು ಮುಸ್ಲಿಂ ಮೂಲಭೂತವಾದಿಗಳ ಕೈಯಲ್ಲಿ ಸಿಲುಕಿ ನಲುಗಿಹೋಗಿವೆ. ಆ ದೇಶಗಳು ಉದ್ಧಾರವಾಗುವ ಲಕ್ಷಣಗಳು ಸಧ್ಯಕ್ಕಂತೂ ಕಾಣಿಸುತ್ತಿಲ್ಲ. ೧೯೯೨ರ ನಂತರ ಭಾರತ ತೋರುತ್ತಿರುವ ಆರ್ಥಿಕ ಪ್ರಗತಿ ಚೀನಾಕ್ಕೆ ಪೈಪೋಟಿ ನೀಡಲು ಸಾಕು. ಇದು ಅಮೆರಿಕಕ್ಕೆ ಮನವರಿಕೆಯಾಗಿದೆ. ಅಲ್ಲದೆ ಚೀನಾದ ಬೆಳವಣಿಗೆಯಿಂದ ಮುಂದೊಂದು ದಿನ ಭಾರತಕ್ಕೂ ಅಪಾಯ ತಪ್ಪಿದ್ದಲ್ಲ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ಭಾರತ ಮತ್ತು ಅಮೆರಿಕ ಅಣು ಒಪ್ಪಂದಕ್ಕೆ ಸಹಿ ಹಾಕಿವೆ. ಇಷ್ಟಲ್ಲದೆ, ಭಾರತದ ಕೈಗಾ ಮತ್ತು ತಾರಾಪುರ ಅಣು ವಿದ್ಯುತ್ ಸ್ಥಾವರಗಳು ಇಂಧನ ಕೊರತೆಯಿಂದ ನಲುಗುತ್ತಿವೆ. ಜಗತ್ತಿಗೆ ಅಣು ಇಂಧನಗಳನ್ನು ಪೂರೈಸುವ ಎನ್.ಎಸ್.ಜಿ ದೇಶಗಳಲ್ಲಿ ಒಂದಾದ ಆಸ್ಟ್ರೇಲಿಯಾ, ಅಮೆರಿಕದೊಂದಿಗೆ ಭಾರತ ಒಪ್ಪಂದ ಮಾಡಿಕೊಂಡ ಬಳಿಕ ಅಣು ಇಂಧನ ಪೂರೈಸಲು ಮುಂದೆ ಬಂದಿದೆ. ಅಲ್ಲದೆ ಭಾರತ ಒಂದು ವೇಳೆ ಅಣು ಇಂಧನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು, ಅದನ್ನು ತನ್ನ ಪ್ರಮುಖ ಶಕ್ತಿಮೂಲವಾಗಿಸಿಕೊಂಡರೆ ಅರಬ್ ದೇಶಗಳಿಂದ ಪೆಟ್ರೋಲಿಯಮ್ ಉತ್ಪನ್ನಗಳನ್ನು ಭಾರೀ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುವ ಪ್ರಮೇಯವೂ ತಪ್ಪುತ್ತದೆ. ದೇಶದ ವಿದೇಶಿ ವಿನಿಮಯದಲ್ಲಿ ಸ್ವಲ್ಪ ಮಟ್ಟಿಗಾದರೂ ಉಳಿತಾಯವಾಗುತ್ತದೆ. ವಸ್ತುಸ್ಥಿತಿ ಹೀಗಿರುವಾಗ ಅಮೆರಿಕದೊಂದಿಗಿನ ನಾಗರಿಕ ಅಣುಶಕ್ತಿ ಸಹಕಾರ ಒಪ್ಪಂದವನ್ನು ಬಿಜೆಪಿಯೂ ಸೇರಿದಂತೆ ಇತರ ವಿರೋಧ ಪಕ್ಷಗಳು ವಿರೋಧಿಸುತ್ತಿರುವುದಾದರೂ ಏತಕ್ಕೆ?
ಇನ್ನೊಂದು ವಿಚಾರ...
ನೆಹರೂ ಆಡಳಿತಾವಧಿಯಲ್ಲಿ ಚೀನಾ ಭಾರತದ ಮೇಲೆ ಮೋಸದಿಂದ ಆಕ್ರಮಣ ಮಾಡಿ, ನಮ್ಮ ಶ್ರದ್ಧಾ ಕೇಂದ್ರಗಳೂ ಸೇರಿದಂತೆ ಒಟ್ಟೂ ೪೦ ಸಾವಿರ ಚದರ ಕಿ.ಮಿ ಪ್ರದೇಶವನ್ನು ಆಕ್ರಮಿಸಿಕೊಂಡಾಗ ನಮ್ಮ ಸಹಾಯಕ್ಕೆ ಜಗತ್ತಿನ ಯಾವ ಕಮ್ಯುನಿಸ್ಟ್ ದೇಶಗಳೂ ಬರಲಿಲ್ಲ. ಆಗ ಬಲಾಢ್ಯವಾಗಿದ್ದ ರಷ್ಯಾ ಕೂಡ ಭಾರತಕ್ಕೆ ಸಹಾಯವನ್ನು ನಿರಾಕರಿಸಿತು. ಆದರೆ ಅಮೆರಿಕ ನಮ್ಮ ಸಹಾಯಕ್ಕೆ ಬಂದಿತು! ಅಮೆರಿಕ ಭಾರತದ ಪರ ವಹಿಸಿದೆ ಎಂದು ಗೊತ್ತಾದ ಕೂಡಲೇ ಚೀನಾ ಏಕಪಕ್ಷೀಯವಾಗಿ ಕದನವಿರಾಮ ಘೋಷಿಸಿತು. ಅಮೆರಿಕ ಎಂದ ಕೂಡಲೇ ವಿರೋಧಿಸಲೇ ಬೇಕು ಎಂಬ ಮನಸ್ಥಿತಿಯನ್ನು ಹೊಂದಿರುವವರು ಇದನ್ನು ನೆನಪಿಸಿಕೊಳ್ಳಬೇಕು. ಅಮೆರಿಕವನ್ನು ವಿರೋಧಿಸುವವರೆಲ್ಲ, ಅಮೆರಿಕದ ಪರ ಮಾತಾಡಿದ ಕೂಡಲೇ ಅವರು ಪ್ರಗತಿ ವಿರೋಧಿಗಳೂ ಆಗುವುದಿಲ್ಲ ಎಂಬುದನ್ನೂ ಅರಿಯಬೇಕು. ಇವತ್ತು ಚೀನಾದ ಬೆಳವಣಿಗೆಯನ್ನು ತಡೆಯಲು ಅಮೆರಿಕಕ್ಕೆ ಭಾರತದ ಸಹಾಯ ಬೇಕೇ ಬೇಕು. ಭಾರತಕ್ಕೆ ಕೂಡ ಅಮೆರಿಕದ ಸ್ನೇಹದಿಂದ ಸಾಕಷ್ಟು ಲಾಭವಿದೆ.
ಈ ವಿಚಾರಗಳು ತತ್ವ, ಸಿದ್ಧಾಂತಗಳ ಹೆಸರಿನಲ್ಲಿ ರಾಷ್ಟ್ರಹಿತವನ್ನು ಮರೆತವರಿಗೆ ಮತ್ತು ಹಿಂದುತ್ವ, ಭಾರತೀಯತೆ, ರಾಷ್ಟ್ರೀಯತೆಯಂಥ ದೊಡ್ಡ ದೊಡ್ಡ ಸಂಗತಿಗಳ ಬಗ್ಗೆ ಮಾತ್ರ ತಲೆಕೆಡಿಕೊಳ್ಳುವವರಿಗೆ ಬಹುಶಃ ಅರ್ಥವಾಗಲಾರದು. ಆದರೆ ಜನಸಾಮಾನ್ಯರಿಗೆ ಅರ್ಥವಾದರೆ ಸಾಕು. ಆದರೆ ಒಂದಂತೂ ಸತ್ಯ. ವಿರೋಧ ಪಕ್ಷಗಳಿಗೆ ಇರುವಷ್ಟೇ ದೇಶಪ್ರೇಮ ಪ್ರಧಾನಿ ಮನಮೋಹನ್ ಸಿಂಗ್‌ಗೂ ಇದೆ. ಹಾಗಾಗಿಯೇ ಅವರು ಭಾರತದ ಹಿತಾಸಕ್ತಿಯೊಂದಿಗೆ ಯಾವುದೇ ರಾಜಿಮಾಡಿಕೊಳ್ಳದೆ ಅಮೆರಿಕದೊಂದಿಗೆ ಒಪ್ಪಂದಕ್ಕೆ ಮುಂದಾಗಿದ್ದಾರೆ. ಇದರಿಂದ ಖಂಡಿತ ದೇಶಕ್ಕೆ ಲಾಭವಿದೆ.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
cennag analise maadiya....nice one
Siri
Chaitanya Hegde ಹೇಳಿದ್ದಾರೆ…
Well. But come out with new ideas. Don't fix yourself to a single agenda. When I come to read your next blog,I expect an element of surprise. 'On this issue, Joshi writes this way only'..This should not be the expectation of your reader.
-Chaitanya Hegde
India Mahesh ಹೇಳಿದ್ದಾರೆ…
Must say one thing... there is more to communist. You have hardly got a few points of communist treachery and betrayal. I think you should reasearch and write more in kannada as I am yet to find a writer in kannada who has stripped the communist. Keep it up and god bless!

U. Mahesh Prabhu

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her