ಯಾವಾಗಲೂ ಮಾಧ್ಯಮಗಳನ್ನು ತೆಗಳುವವರ ಒಂದು ದೊಡ್ಡ ಗುಂಪೇ ನಮ್ಮ ಸಮಾಜದಲ್ಲಿದೆ. ಅಂಥ ಗುಂಪಿಗೆ ಸೇರಿದ ವ್ಯಕ್ತಿಯೊಬ್ಬರು ಈ ಮೇಲಿನ ಮಾತನ್ನು ಹೇಳಿದ್ದರೆ ಅದನ್ನು ಅಲಕ್ಷಿಸಿಬಿಡಬಹುದಿತ್ತು. ಆದರೆ ಇತ್ತೀಚೆಗೆ ಮಾಧ್ಯಮದ ಹಿರಿಯ ವ್ಯಕ್ತಿಯೊಬ್ಬರು ಈ ರೀತಿ ಅಭಿಪ್ರಾಯಪಟ್ಟಿರುವುದರಿಂದ ಈ ಮಾತಿನ ಬಗ್ಗೆ ಗಂಭೀರವಾಗಿ ಪತ್ರಿಕೋದ್ಯಮದ ಬಗ್ಗೆ ಪ್ರೀತಿ ಇರುವ ಪ್ರತಿಯೊಬ್ಬರೂ ಆಲೋಚಿಸಬೇಕಾಗಿದೆ.
ಆ ಹಿರಿಯರ ಬಗ್ಗೆ, ಅವರ ಮಾತಿನ ಬಗ್ಗೆ ಗೌರವ ಇಟ್ಟುಕೊಂಡೇ ನನ್ನ ಮುಂದಿನ ಬರೆಹವನ್ನು ಬೆಳೆಸುತ್ತಿದ್ದೇನೆ.
ಭಾರತದ ಸಂವಿಧಾನದ ಪ್ರಕಾರ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಪ್ರಜಾಪ್ರಭುತ್ವದ ಮೂರು ಅಂಗಗಳು. ಸಂವಿಧಾನ ಇವೆಲ್ಲವಕ್ಕೂ ಮೇಲು. ಈ ಯಾವ ಅಂಗಗಳೂ ಸಂವಿಧಾನವನ್ನು ಮೀರಿ ಕೆಲಸ ಮಾಡುವಂತಿಲ್ಲ. ಹಾಗೆ ಯಾವುದೇ ಒಂದು ಅಂಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಹವಣಿಸಿದರೆ ಆ ಅಂಗಕ್ಕೆ ಲಗಾಮು ಹಾಕಲು ಬಲವಾದ, ಸ್ವತಂತ್ರವಾದ ನ್ಯಾಯಾಂಗ ನಮ್ಮಲ್ಲಿದೆ.
ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳು ಅಂತ ನಮ್ಮ ಸಂವಿಧಾನವೇ ಅಧಿಕೃತವಾಗಿ ಘೋಷಿಸಿರುವುದರಿಂದ ಈ ಮೂರು ಅಂಗಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಸಂವಿಧಾನದತ್ತವಾಗಿ ರಕ್ಷಣೆ ಇದೆ. ರಾಜಕಾರಣಿಗಳಿಗೆ ಅವರವರ ಸ್ಥಾನಕ್ಕನುಗುಣವಾಗಿ ವಿವಿಧ ಶ್ರೇಣಿಯ ಭದ್ರತೆ ಇದೆ. ನ್ಯಾಯಾಂಗದಲ್ಲಿರುವವರಿಗೂ (ನ್ಯಾಯಾಧೀಶರಿಗೆ) ಭದ್ರತೆ ಇದೆ. ಹಾಗೆಯೇ ಕಾರ್ಯಾಂಗದವರಿಗೂ ಅವರವರ ಸ್ಥಾನಕ್ಕನುಗುಣವಾದ ಭದ್ರತೆ ಇರುತ್ತದೆ. ಈ ಮೂರು ಅಂಗಗಳಲ್ಲಿರುವ ಎಲ್ಲರಿಗೂ ಸರಕಾರಿ ಭದ್ರತೆ ಇರದೆ ಇರಬಹುದು. ಆದರೆ ಸಂದರ್ಭ ಬಂದಾಗ ಸಂವಿಧಾನದ ಚೌಕಟ್ಟಿನೊಳಗೆ ಸರಕಾರಿ ಭದ್ರತೆಯನ್ನು ಕೇಳಲು ಅವರಿಗೆ ಅವಕಾಶ ಇರುವುದಂತೂ ಎಲ್ಲರಿಗೂ ತಿಳಿದ ಸತ್ಯ.
ಆದರೆ ಒಮ್ಮೆ ಪತ್ರಕರ್ತರ ಪರಿಸ್ಥಿತಿಯ ಬಗ್ಗೆ ಆಲೋಚನೆ ಮಾಡಿ.
ಹಾಗಂತ ಪತ್ರಕರ್ತರಿಂದ ನಿಷ್ಪಕ್ಷಪಾತ ಬರೆಹ, ಪ್ರಾಮಾಣಿಕತೆ ಮತ್ತು ದೇಶದ ಸಮಗ್ರ ಅಭಿವೃದಿಗಾಗಿ ದುಡಿಯುವುದನ್ನು ಅಪೇಕ್ಷಿಸಬಾರದು ಅಂತಲ್ಲ. ಭಾರತದ ಉಳಿದೆಲ್ಲ ನಾಗರಿಕರಂತೆ ಪತ್ರಕರ್ತ ಕೂಡ ಭಾರತದ ಪ್ರಜೆಯೇ. ಹಾಗೆಯೇ ಪ್ರತಿಯೊಬ್ಬ ಭಾರತೀಯ ಪ್ರಜೆ ಯಾವ ರೀತಿಯಲ್ಲಿ ಈ ದೇಶಕ್ಕೆ, ಈ ಸಮಾಜಕ್ಕೆ ನಿಷ್ಠನಾಗಿರಬೇಕೋ ಪತ್ರಕರ್ತನೂ ಅಷ್ಟೇ ನಿಷ್ಠೆಯನ್ನು ದೇಶಕ್ಕೆ, ಸಮಾಜಕ್ಕೆ ತೋರಿಸಲೇಬೇಕು. ಆ ಬಗ್ಗೆ ಖಂಡಿತಾ ಎರಡು ಮಾತಿಲ್ಲ.
ದೇಶದ ಒಳಿತಿಗಾಗಿ ಪತ್ರಕರ್ತನೊಬ್ಬ ಬರೆಯುವಾಗ (ಅಥವಾ ದೃಶ್ಯಗಳನ್ನು ಚಿತ್ರೀಕರಿಸುವಾಗ) ಆತ ಅನಿವಾರ್ಯವಾಗಿ ಪ್ರಭುತ್ವದ ವೈಖರಿಯನ್ನು ಪಶ್ನಿಸಬೇಕಾದ ಅನೇಕ ಸಂದರ್ಭಗಳನ್ನು ಎದುರಿಸುತ್ತಾನೆ. ಪ್ರಭುತ್ವವನ್ನು ವಿರೋಧಿಸುವುದು ಎಂದರೆ ನಮ್ಮ ದೇಶದಲ್ಲಿ ಸಾಮಾನ್ಯದ ಮಾತೇ? ನಾವೆಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದರೂ ಇವತ್ತು ಪತ್ರಕರ್ತನೊಬ್ಬ ರಾಜಕಾರಣಿಯೊಬ್ಬನ ವಿರುದ್ಧ ಬರೆದರೆ ಆತ ಒಂದಲ್ಲಾ ಒಂದು ದಿನ ಹಾಗೆ ಬರೆದ ಪತ್ರಕರ್ತನ ವಿರುದ್ಧ ತನ್ನ ದ್ವೇಷವನ್ನು ಹೇಗೆ ತೀರಿಸಿಕೊಳ್ಳಬೇಕು ಅಂತ ಕಾಯುತ್ತಲೇ ಇರುತ್ತಾನೆ. ಇಂಥ ಸಂದರ್ಭದಲ್ಲಿ ಪತ್ರಕರ್ತ ಏನು ಮಾಡಬೇಕು? ತನ್ನ ಜೀವಕ್ಕೆ ಖಂಡಿತವಾಗಿಯೂ ಅಪಾಯವಿದೆ ಅಂತ ಖಚಿತವಾಗಿ ಗೊತ್ತಿದ್ದರೆ ಕೆಲ ಕಾಲದ ಮಟ್ಟಿಗೆ ಪೋಲೀಸ್ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಆದರೆ ಅದನ್ನೇನೂ ಶಾಶ್ವತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಪತ್ರಕರ್ತ ಯಾವ ಧೈರ್ಯದಲ್ಲಿ ಪ್ರಭುತ್ವವನ್ನು ಪ್ರಶ್ನಿಸಿಯಾನು? ೨೪ಘಿ೭ ಪತ್ರಕರ್ತರನ್ನು ಬೈಯುತ್ತಾ ಕುಳಿತಿರುವವರಿಂದ ಉತ್ತರದ ನಿರೀಕ್ಷೆಯಿದೆ.
ಪತ್ರಕರ್ತರೇನೂ ಜೀವ ಭಯವನ್ನು ಬಿಟ್ಟು ದುಡಿಯಲು ಬಂದಿರುವ ರೋಬೋಟ್ಗಳಲ್ಲವಲ್ಲ? ಅವರಿಗೂ ಅವರದೇ ಆದ ಸಂಸಾರವಿದೆ. ಪ್ರೀತಿಪಾತ್ರರಿದ್ದಾರೆ. ಹಾಗಿರುವಾಗ ಕೇವಲ ಪತ್ರಕರ್ತರು ಮಾತ್ರ ಜೀವ ಭಯ ಬಿಟ್ಟು ಪ್ರಭುತ್ವವನ್ನು ಮತ್ತು ಸಮಾಜದ ಅನ್ಯಾಯ, ಹುಳುಕುಗಳನ್ನು ಪ್ರಶ್ನಿಸುತ್ತಿರಬೇಕು ಎಂದು ನಿರೀಕ್ಷಿಸುವುದನ್ನು ಏನೆಂದು ಕರೆಯಬೇಕು?
ಭಾರತದ ಸಂವಿಧಾನದಲ್ಲೆಲ್ಲೂ ಪತ್ರಿಕಾ ಸ್ವಾತಂತ್ರ್ಯ ಎಂದು ಪ್ರತ್ಯೇಕವಾದ ವರ್ಗೀಕರಣ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಪತ್ರಿಕೆಗಳ ಮೂಲಕ ತಮಗೆ ಅನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ನಮಗೆ (ಭಾರತದ ನಾಗರಿಕರಿಗೆ) ದಕ್ಕಿದೆ. ಪತ್ರಕರ್ತನಿಗೆ ಅಂತ ಯಾವ ವಿಶೇಷ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ. ಹಾಗಾಗಿ ಒಬ್ಬ ವ್ಯಕ್ತಿ ಪತ್ರಿಕಾ ರಂಗದಲ್ಲಿ ಇದ್ದಾನೆ ಎಂಬ ಮಾತ್ರಕ್ಕೆ ಅವನಿಂದ ಉಳಿದ ಪ್ರಜೆಗಳು ಮಾಡಲು ಇಚ್ಛಿಸದ ಕೆಲಸಗಳನ್ನು ನಿರೀಕ್ಷಿಸುವುದು ತಪ್ಪಾದೀತು.
ಪತ್ರಿಕೆಯೊಂದು ಜನರಿಗೆ ಸತ್ಯಸುದ್ದಿಯನ್ನು ಮಾತ್ರ ಕೊಡಬೇಕು, ಸುಳ್ಳನ್ನು ಯಾವ ಕಾರಣಕ್ಕೂ ಕೊಡಬಾರದು ಎಂದು ನಿರೀಕ್ಷಿಸುವುದು ಸರಿ. ಆದರೆ ಆದರ್ಶದ ವ್ಯಸನದಲ್ಲಿ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ದೊಡ್ಡ ಪ್ರಮಾಣದ ಜಾಹೀರಾತುಗಳನ್ನೇ ಪ್ರಕಟಿಸಬಾರದು ಎಂದೆಲ್ಲ ಮಾತಾಡುವುದು ಅರ್ಥಹೀನ. ಪತ್ರಿಕಾರಂಗ ಇವತ್ತು ಒಂದು ಪಕ್ಕಾ ಉದ್ಯಮವಾಗಿದೆ. ಅಲ್ಲಿ ಒಬ್ಬ ಮನುಷ್ಯ ಹತ್ತು ರೂಪಾಯಿ ಬಂಡವಾಳ ಹೂಡಿ ಅದರಲ್ಲಿ ಒಂದಷ್ಟು ಲಾಭ ಪಡೆಯಲು ಪ್ರಯತ್ನಿಸುತ್ತಾನೆ. ಅದರಲ್ಲಿ ತಪ್ಪೇನಿದೆ? ನ್ಯಾಯವಾಗಿ ಲಾಭ ಮಾಡಿಕೊಳ್ಳಲು ನಮ್ಮ ಸಂವಿಧಾನವೇನು ಬೇಡವೆಂದಿಲ್ಲವಲ್ಲ?
ಸ್ವಾತಂತ್ರ್ಯೂತ್ತರ ಕಾಲದಲ್ಲಿದ್ದಂತಹ ಆದರ್ಶ, ಧ್ಯೇಯಗಳಿಗಾಗಿಯೇ ಹೋರಾಡಿದ ಪತ್ರಿಕೆಗಳನ್ನು ಇವತ್ತು ನಿರೀಕ್ಷಿಸುವುದೇ ತಪ್ಪು ಅಂತ ಹೇಳುತ್ತಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಹೋರಾಟದ ಕಿಚ್ಚು ಇವತ್ತು ಇಡೀ ಭಾರತೀಯ ಸಮಾಜದಲ್ಲಿಯೇ ಸತ್ತುಹೋಗಿದೆ. ಇಡೀ ಸಮಾಜದಲ್ಲಿಯೇ ಸತ್ತುಹೋಗಿರುವ ಕಿಚ್ಚನ್ನು ಕೇವಲ ಪತ್ರಕರ್ತರಲ್ಲಿ ಮಾತ್ರ ನಿರೀಕ್ಷಿಸುವ, ಉಳಿದವರಿಂದ ಆ ಕೆಚ್ಚನ್ನು ನಿರೀಕ್ಷಿಸದೆ ಇರುವ ಇಬ್ಬಂದಿತನ ಬೇಡ.
