Monday, November 16, 2009

ನಿಷ್ಠೆಯೊಂದೇ ನಿರೀಕ್ಷೆ, ಪತ್ರಕರ್ತನಿಗೆಲ್ಲಿದೆ ರಕ್ಷೆ?

“ಇತ್ತೀಚೆಗೆ ನಡೆದ ಸಮೀಕ್ಷೆಯೊಂದರ ಪ್ರಕಾರ ಜನಸಾಮಾನ್ಯರ ದ್ವೇಷಕ್ಕೆ ಅತ್ಯಂತ ಹೆಚ್ಚು ಒಳಗಾಗಿರುವ ಮೂರು ವ್ಯಕ್ತಿಗಳೆಂದರೆ ರಾಜಕಾರಣಿಗಳು, ಪೋಲೀಸರು ಮತ್ತು ಪತ್ರಕರ್ತರು. ಪತ್ರಕರ್ತರು ಈಗ ಮೂರನೆಯ ಸ್ಥಾನದಲ್ಲಿರಬಹುದು. ಆದರೆ ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪತ್ರಕರ್ತರು ಮೊದಲನೆಯ ಸ್ಥಾನವನ್ನು ಆಕ್ರಮಿಸುವ ದಿನ ಬಹಳ ದೂರವಿಲ್ಲ ಎಂದು ನನಗನಿಸುತ್ತದೆ.”

ಯಾವಾಗಲೂ ಮಾಧ್ಯಮಗಳನ್ನು ತೆಗಳುವವರ ಒಂದು ದೊಡ್ಡ ಗುಂಪೇ ನಮ್ಮ ಸಮಾಜದಲ್ಲಿದೆ. ಅಂಥ ಗುಂಪಿಗೆ ಸೇರಿದ ವ್ಯಕ್ತಿಯೊಬ್ಬರು ಈ ಮೇಲಿನ ಮಾತನ್ನು ಹೇಳಿದ್ದರೆ ಅದನ್ನು ಅಲಕ್ಷಿಸಿಬಿಡಬಹುದಿತ್ತು. ಆದರೆ ಇತ್ತೀಚೆಗೆ ಮಾಧ್ಯಮದ ಹಿರಿಯ ವ್ಯಕ್ತಿಯೊಬ್ಬರು ಈ ರೀತಿ ಅಭಿಪ್ರಾಯಪಟ್ಟಿರುವುದರಿಂದ ಈ ಮಾತಿನ ಬಗ್ಗೆ ಗಂಭೀರವಾಗಿ ಪತ್ರಿಕೋದ್ಯಮದ ಬಗ್ಗೆ ಪ್ರೀತಿ ಇರುವ ಪ್ರತಿಯೊಬ್ಬರೂ ಆಲೋಚಿಸಬೇಕಾಗಿದೆ.

ಆ ಹಿರಿಯರ ಬಗ್ಗೆ, ಅವರ ಮಾತಿನ ಬಗ್ಗೆ ಗೌರವ ಇಟ್ಟುಕೊಂಡೇ ನನ್ನ ಮುಂದಿನ ಬರೆಹವನ್ನು ಬೆಳೆಸುತ್ತಿದ್ದೇನೆ.

ಭಾರತದ ಸಂವಿಧಾನದ ಪ್ರಕಾರ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗ ಪ್ರಜಾಪ್ರಭುತ್ವದ ಮೂರು ಅಂಗಗಳು. ಸಂವಿಧಾನ ಇವೆಲ್ಲವಕ್ಕೂ ಮೇಲು. ಈ ಯಾವ ಅಂಗಗಳೂ ಸಂವಿಧಾನವನ್ನು ಮೀರಿ ಕೆಲಸ ಮಾಡುವಂತಿಲ್ಲ. ಹಾಗೆ ಯಾವುದೇ ಒಂದು ಅಂಗ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೆಲಸ ಮಾಡಲು ಹವಣಿಸಿದರೆ ಆ ಅಂಗಕ್ಕೆ ಲಗಾಮು ಹಾಕಲು ಬಲವಾದ, ಸ್ವತಂತ್ರವಾದ ನ್ಯಾಯಾಂಗ ನಮ್ಮಲ್ಲಿದೆ.
ನೆನಪಿಡಿ ಎಲ್ಲಿಯೂ ಕೂಡ ‘ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ’ ಎಂದು ಸಂವಿಧಾನಲ್ಲಿ ಬರೆದಿಲ್ಲ. ಆದರೆ ಪತ್ರಿಕಾರಂಗವನ್ನು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಎಂದು ನಾವೆಲ್ಲ ಪ್ರೀತಿಯಿಂದ, ಗೌರವದಿಂದ ಒಪ್ಪಿಕೊಂಡಿದ್ದೇವೆ. ಹಾಗೂ ಪತ್ರಿಕಾರಂಗ ಪ್ರಜಾಪ್ರಭುತ್ವದ ಉಳಿದ ಮೂರು ಅಂಗಗಳಂತೆಯೇ ರಾಷ್ಟ್ರನಿರ್ಮಾಣದ ಕಾರ್ಯದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳಬೇಕು ಎಂದು ಅಪೇಕ್ಷೆಪಡುತ್ತೇವೆ, ಅಷ್ಟೆ!

ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಪ್ರಜಾಪ್ರಭುತ್ವದ ಆಧಾರ ಸ್ಥಂಭಗಳು ಅಂತ ನಮ್ಮ ಸಂವಿಧಾನವೇ ಅಧಿಕೃತವಾಗಿ ಘೋಷಿಸಿರುವುದರಿಂದ ಈ ಮೂರು ಅಂಗಗಳಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳಿಗೆ ಸಂವಿಧಾನದತ್ತವಾಗಿ ರಕ್ಷಣೆ ಇದೆ. ರಾಜಕಾರಣಿಗಳಿಗೆ ಅವರವರ ಸ್ಥಾನಕ್ಕನುಗುಣವಾಗಿ ವಿವಿಧ ಶ್ರೇಣಿಯ ಭದ್ರತೆ ಇದೆ. ನ್ಯಾಯಾಂಗದಲ್ಲಿರುವವರಿಗೂ (ನ್ಯಾಯಾಧೀಶರಿಗೆ) ಭದ್ರತೆ ಇದೆ. ಹಾಗೆಯೇ ಕಾರ್ಯಾಂಗದವರಿಗೂ ಅವರವರ ಸ್ಥಾನಕ್ಕನುಗುಣವಾದ ಭದ್ರತೆ ಇರುತ್ತದೆ. ಈ ಮೂರು ಅಂಗಗಳಲ್ಲಿರುವ ಎಲ್ಲರಿಗೂ ಸರಕಾರಿ ಭದ್ರತೆ ಇರದೆ ಇರಬಹುದು. ಆದರೆ ಸಂದರ್ಭ ಬಂದಾಗ ಸಂವಿಧಾನದ ಚೌಕಟ್ಟಿನೊಳಗೆ ಸರಕಾರಿ ಭದ್ರತೆಯನ್ನು ಕೇಳಲು ಅವರಿಗೆ ಅವಕಾಶ ಇರುವುದಂತೂ ಎಲ್ಲರಿಗೂ ತಿಳಿದ ಸತ್ಯ.
ಸಂವಿಧಾನವೇ ನ್ಯಾಯಾಂಗ, ಶಾಸಕಾಂಗ ಮತ್ತು ಕಾರ್ಯಾಂಗಕ್ಕೆ ಅಧಿಕೃತ ಮಾನ್ಯತೆ ನೀಡಿರುವುದರಿಂದ ಈ ಮೂರು ಅಂಗಗಳಲ್ಲಿ ಕೆಲಸ ಮಾಡುವವರು ಸರಕಾರಿ ಹಣದಿಂದಲೇ ಸಂಬಳ ಪಡೆಯುತ್ತಾರೆ. ಸರಕಾರಿ ಹಣ ಅಂದರೆ ಜನರ ತೆರಿಗೆ ಹಣ. ಹಾಗಾಗಿಯೇ ಅವರು ಜನರಿಗೆ ಉತ್ತರದಾಯಿಯಾಗಿರಬೇಕು ಮತ್ತು ಅವರ ಆಸ್ತಿಪಾಸ್ತಿಗಳನ್ನು ಸಾರ್ವಜನಿಕವಾಗಿ ಘೋಷಣೆ ಮಾಡಬೇಕು ಎಂದು ನಿರೀಕ್ಷಿಸುವುದು ಸಂವಿಧಾನಬದ್ಧವೇ ಆಗಿರುತ್ತದೆ.

ಆದರೆ ಒಮ್ಮೆ ಪತ್ರಕರ್ತರ ಪರಿಸ್ಥಿತಿಯ ಬಗ್ಗೆ ಆಲೋಚನೆ ಮಾಡಿ.
ಹೇಗಿದ್ದರೂ ಪತ್ರಿಕಾರಂಗ ಸಂವಿಧಾನದ ಪ್ರಕಾರ ಭಾರತೀಯ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ ಅಲ್ಲ. ಆನರು ಪ್ರೀತಿ, ಗೌರವದಿಂದ ಪತ್ರಿಕಾರಂಗಕ್ಕೆ ಆ ಮಾನ್ಯತೆಯನ್ನು ಕೊಟ್ಟಿದ್ದಾರೆ ಅಷ್ಟೆ. ಆದರೆ ಜನರ ಪ್ರೀತಿ, ಗೌರವಗಳು ಸಾಂವಿಧಾನಿಕ ರಕ್ಷಣೆಯನ್ನು ನೀಡುವುದಿಲ್ಲವಲ್ಲ? ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗಗಳಲ್ಲಿ ಕೆಲಸ ಮಾಡುವವರಿಗಿರುವಂತೆ ಪತ್ರಿಕಾರಂಗದಲ್ಲಿರುವವರಿಗೆ ವಿಶೇಷ ರಕ್ಷಣೆಯನ್ನೇನೂ ನೀಡುವುದಿಲ್ಲವಲ್ಲ? ಅದಲ್ಲದೆ ಪತ್ರಿಕೆಗಳ ನ್ಯೂಸ್‌ಪ್ರಿಂಟ್‌ಗೆ ಸರಕಾರದ ಸಬ್ಸಿಡಿ ಮತ್ತು ಸರಕಾರದ ಕೆಲವು ಜಾಹೀರಾತುಗಳು ಆಗಾಗ ಪತ್ರಿಕೆಗಳಿಗೆ ಸಿಗುವುದನ್ನು ಬಿಟ್ಟರೆ ಬೇರೆ ಯಾವ ರೀತಿಯಿಂದಲೂ ಸರಕಾರದ (ಜನರ) ಹಣವನ್ನು ಪತ್ರಿಕೆಗಳು ಉಪಯೋಗಿಸಿಕೊಳ್ಳುವುದಿಲ್ಲ. ಅವು ಬದುಕಿರುವುದೇ ಓದುಗರು ನೀಡುವ ಹಣ ಮತ್ತು ಜಾಹೀರಾತುದಾರರು ನೀಡುವ ಹಣದಮೇಲೆ. ಪರಿಸ್ಥಿತಿ ಹೀಗಿರುವಾಗ ಪತ್ರಕರ್ತರೆಲ್ಲಾ ತಮ್ಮ ಆಸ್ತಿಯನ್ನು ಘೋಷಣೆ ಮಾಡಬೇಕು ಎಂದು ಆಗ್ರಹಿಸುವುದಕ್ಕೆ ಸಾಂವಿಧಾನಿಕ ಆಧಾರ ಯಾವುದು?

ಹಾಗಂತ ಪತ್ರಕರ್ತರಿಂದ ನಿಷ್ಪಕ್ಷಪಾತ ಬರೆಹ, ಪ್ರಾಮಾಣಿಕತೆ ಮತ್ತು ದೇಶದ ಸಮಗ್ರ ಅಭಿವೃದಿಗಾಗಿ ದುಡಿಯುವುದನ್ನು ಅಪೇಕ್ಷಿಸಬಾರದು ಅಂತಲ್ಲ. ಭಾರತದ ಉಳಿದೆಲ್ಲ ನಾಗರಿಕರಂತೆ ಪತ್ರಕರ್ತ ಕೂಡ ಭಾರತದ ಪ್ರಜೆಯೇ. ಹಾಗೆಯೇ ಪ್ರತಿಯೊಬ್ಬ ಭಾರತೀಯ ಪ್ರಜೆ ಯಾವ ರೀತಿಯಲ್ಲಿ ಈ ದೇಶಕ್ಕೆ, ಈ ಸಮಾಜಕ್ಕೆ ನಿಷ್ಠನಾಗಿರಬೇಕೋ ಪತ್ರಕರ್ತನೂ ಅಷ್ಟೇ ನಿಷ್ಠೆಯನ್ನು ದೇಶಕ್ಕೆ, ಸಮಾಜಕ್ಕೆ ತೋರಿಸಲೇಬೇಕು. ಆ ಬಗ್ಗೆ ಖಂಡಿತಾ ಎರಡು ಮಾತಿಲ್ಲ.
ಆದರೆ ದೇಶಕ್ಕಾಗಿ ಪತ್ರಕರ್ತ ಕೆಲಸ ಮಾಡಬೇಕು ಎಂದು ಆಗ್ರಹಿಸುವಾಗ ಇನ್ನೊಂದು ಸೂಕ್ಷ್ಮವನ್ನೂ ನಾವು ಗಮನಿಸಬೇಕು.

ದೇಶದ ಒಳಿತಿಗಾಗಿ ಪತ್ರಕರ್ತನೊಬ್ಬ ಬರೆಯುವಾಗ (ಅಥವಾ ದೃಶ್ಯಗಳನ್ನು ಚಿತ್ರೀಕರಿಸುವಾಗ) ಆತ ಅನಿವಾರ್ಯವಾಗಿ ಪ್ರಭುತ್ವದ ವೈಖರಿಯನ್ನು ಪಶ್ನಿಸಬೇಕಾದ ಅನೇಕ ಸಂದರ್ಭಗಳನ್ನು ಎದುರಿಸುತ್ತಾನೆ. ಪ್ರಭುತ್ವವನ್ನು ವಿರೋಧಿಸುವುದು ಎಂದರೆ ನಮ್ಮ ದೇಶದಲ್ಲಿ ಸಾಮಾನ್ಯದ ಮಾತೇ? ನಾವೆಷ್ಟೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತಾಡಿದರೂ ಇವತ್ತು ಪತ್ರಕರ್ತನೊಬ್ಬ ರಾಜಕಾರಣಿಯೊಬ್ಬನ ವಿರುದ್ಧ ಬರೆದರೆ ಆತ ಒಂದಲ್ಲಾ ಒಂದು ದಿನ ಹಾಗೆ ಬರೆದ ಪತ್ರಕರ್ತನ ವಿರುದ್ಧ ತನ್ನ ದ್ವೇಷವನ್ನು ಹೇಗೆ ತೀರಿಸಿಕೊಳ್ಳಬೇಕು ಅಂತ ಕಾಯುತ್ತಲೇ ಇರುತ್ತಾನೆ. ಇಂಥ ಸಂದರ್ಭದಲ್ಲಿ ಪತ್ರಕರ್ತ ಏನು ಮಾಡಬೇಕು? ತನ್ನ ಜೀವಕ್ಕೆ ಖಂಡಿತವಾಗಿಯೂ ಅಪಾಯವಿದೆ ಅಂತ ಖಚಿತವಾಗಿ ಗೊತ್ತಿದ್ದರೆ ಕೆಲ ಕಾಲದ ಮಟ್ಟಿಗೆ ಪೋಲೀಸ್ ರಕ್ಷಣೆಯನ್ನು ಪಡೆದುಕೊಳ್ಳಬಹುದು. ಆದರೆ ಅದನ್ನೇನೂ ಶಾಶ್ವತವಾಗಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಿರುವಾಗ ಪತ್ರಕರ್ತ ಯಾವ ಧೈರ್ಯದಲ್ಲಿ ಪ್ರಭುತ್ವವನ್ನು ಪ್ರಶ್ನಿಸಿಯಾನು? ೨೪ಘಿ೭ ಪತ್ರಕರ್ತರನ್ನು ಬೈಯುತ್ತಾ ಕುಳಿತಿರುವವರಿಂದ ಉತ್ತರದ ನಿರೀಕ್ಷೆಯಿದೆ.
ಹಿಂದೆ ಕನ್ನಡದ ಹೆಸರಾಂತ ದಿನಪತ್ರಿಕೆಯೊಂದರ ಜನಪ್ರಿಯ ಅಂಕಣಕಾರರೊಬ್ಬರು ನಕ್ಸಲರ ವಿರುದ್ಧ ನೇರಮಾತುಗಳ ಲೇಖನ ಬರೆದಾಗ ಉಡುಪಿ ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ನಕ್ಸಲರು ಕರಪತ್ರ ಹಂಚಿ ಆ ಅಂಕಣಕಾರರ ಜೀವ ತೆಗೆಯುವುದಾಗಿ ಬೆದರಿಕೆ ಹಾಕಿದ್ದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇಲ್ಲಿ ಅಂಕಣಕಾರರ ಧೈರ್ಯವನ್ನು ಮೆಚ್ಚಬಹುದಾದರೂ ಅವರಿಗೆ ನಕ್ಸಲರಿಂದ ಯಾವ ಅಪಾಯ ಎದುರಾಗದಂತೆ ರಕ್ಷಣೆ ನೀಡುವವರು ಯಾರು ಎಂಬ ಪ್ರಶ್ನೆ ಬರುತ್ತದೆ. ಅವರು ರಾಜಕಾರಣಿಯೋ ಅಥವಾ ಐಎಎಸ್ ಅಧಿಕಾರಿಯೋ ಆಗಿದ್ದರೆ ಅವರಿಗೆ ಸರಕಾರದಿಂದ ಸದಾಕಾಲ ಭದ್ರತೆ ಸಿಗುತ್ತಿತ್ತು. ಆದರೆ ಪತ್ರಕರ್ತ/ಅಂಕಣಕಾರನಿಗೆ? ಸಿಗುವುದು ಪ್ರಶಂಸೆ ಮಾತ್ರ. ಜೊತೆಗೊಂದಿಷ್ಟು ಮಂದಿಯಿಂದ ಬಯ್ಗುಳಗಳು.

ಪತ್ರಕರ್ತರೇನೂ ಜೀವ ಭಯವನ್ನು ಬಿಟ್ಟು ದುಡಿಯಲು ಬಂದಿರುವ ರೋಬೋಟ್‌ಗಳಲ್ಲವಲ್ಲ? ಅವರಿಗೂ ಅವರದೇ ಆದ ಸಂಸಾರವಿದೆ. ಪ್ರೀತಿಪಾತ್ರರಿದ್ದಾರೆ. ಹಾಗಿರುವಾಗ ಕೇವಲ ಪತ್ರಕರ್ತರು ಮಾತ್ರ ಜೀವ ಭಯ ಬಿಟ್ಟು ಪ್ರಭುತ್ವವನ್ನು ಮತ್ತು ಸಮಾಜದ ಅನ್ಯಾಯ, ಹುಳುಕುಗಳನ್ನು ಪ್ರಶ್ನಿಸುತ್ತಿರಬೇಕು ಎಂದು ನಿರೀಕ್ಷಿಸುವುದನ್ನು ಏನೆಂದು ಕರೆಯಬೇಕು?
ಪತ್ರಕರ್ತನಿಂದ ವೃತ್ತಿಪರತೆಯನ್ನು ನಿರೀಕ್ಷಿಸುವುದಕ್ಕೂ, ಮನುಷ್ಯಪ್ರಯತ್ನಕ್ಕೆ ಮೀರಿದ ಕಾರ್ಯವನ್ನು ನಿರೀಕ್ಷಿಸುವುದಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಪತ್ರಕರ್ತರಿಂದ ಪ್ರಾಮಾಣಿಕತೆಯನ್ನು, ಪತ್ರಿಕಾ ಧರ್ಮದ ಪಾಲನೆಯನ್ನು ನಿರೀಕ್ಷಿಸಬೇಕು. ಆದರೆ ಸಂವಿಧಾನದಿಂದ ಯಾವ ವಿಶೇಷ ಅಧಿಕಾರ ನೀಡದೆಯೆ ಪ್ರಭುತ್ವದ ವಿರುದ್ಧ ಹೋರಾಡಬೇಕು ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಎಷ್ಟು ಸರಿ?

ಭಾರತದ ಸಂವಿಧಾನದಲ್ಲೆಲ್ಲೂ ಪತ್ರಿಕಾ ಸ್ವಾತಂತ್ರ್ಯ ಎಂದು ಪ್ರತ್ಯೇಕವಾದ ವರ್ಗೀಕರಣ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲೇ ಪತ್ರಿಕೆಗಳ ಮೂಲಕ ತಮಗೆ ಅನಿಸಿದ್ದನ್ನು ಬರೆಯುವ ಸ್ವಾತಂತ್ರ್ಯ ನಮಗೆ (ಭಾರತದ ನಾಗರಿಕರಿಗೆ) ದಕ್ಕಿದೆ. ಪತ್ರಕರ್ತನಿಗೆ ಅಂತ ಯಾವ ವಿಶೇಷ ಅಭಿವ್ಯಕ್ತಿ ಸ್ವಾತಂತ್ರ್ಯವೂ ಇಲ್ಲ. ಹಾಗಾಗಿ ಒಬ್ಬ ವ್ಯಕ್ತಿ ಪತ್ರಿಕಾ ರಂಗದಲ್ಲಿ ಇದ್ದಾನೆ ಎಂಬ ಮಾತ್ರಕ್ಕೆ ಅವನಿಂದ ಉಳಿದ ಪ್ರಜೆಗಳು ಮಾಡಲು ಇಚ್ಛಿಸದ ಕೆಲಸಗಳನ್ನು ನಿರೀಕ್ಷಿಸುವುದು ತಪ್ಪಾದೀತು.
ಇನ್ನು ಕೆಲವು ಮಂದಿ ಪತ್ರಿಕಾ ರಂಗ ಇಂದು ಉದ್ಯಮವಾಗಿದೆ, ಅದರಲ್ಲಿ ಯಾವ ಆದರ್ಶಗಳೂ ಕಾಣಿಸುತ್ತಿಲ್ಲ ಎಂದು ಆರೋಪಿಸುತ್ತಿದ್ದಾರೆ. ಅಂಥವರ ಆರೋಪದ ಬಗ್ಗೆಯೂ ಗೌರವವಿದೆ. ಆದರೆ ಪತ್ರಿಕಾರಂಗದಿಂದ ಮಾತ್ರ ಏಕೆ ಆದರ್ಶಗಳನ್ನು ನಿರೀಕ್ಷಿಸಬೇಕು. ಇಡೀ ಸಮಾಜದಿಂದ ಏಕೆ ಉನ್ನತ ಧ್ಯೇಯಗಳನ್ನು, ಆದರ್ಶಗಳನ್ನು ನಿರೀಕ್ಷಿಸಬಾರದು?

ಪತ್ರಿಕೆಯೊಂದು ಜನರಿಗೆ ಸತ್ಯಸುದ್ದಿಯನ್ನು ಮಾತ್ರ ಕೊಡಬೇಕು, ಸುಳ್ಳನ್ನು ಯಾವ ಕಾರಣಕ್ಕೂ ಕೊಡಬಾರದು ಎಂದು ನಿರೀಕ್ಷಿಸುವುದು ಸರಿ. ಆದರೆ ಆದರ್ಶದ ವ್ಯಸನದಲ್ಲಿ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ದೊಡ್ಡ ಪ್ರಮಾಣದ ಜಾಹೀರಾತುಗಳನ್ನೇ ಪ್ರಕಟಿಸಬಾರದು ಎಂದೆಲ್ಲ ಮಾತಾಡುವುದು ಅರ್ಥಹೀನ. ಪತ್ರಿಕಾರಂಗ ಇವತ್ತು ಒಂದು ಪಕ್ಕಾ ಉದ್ಯಮವಾಗಿದೆ. ಅಲ್ಲಿ ಒಬ್ಬ ಮನುಷ್ಯ ಹತ್ತು ರೂಪಾಯಿ ಬಂಡವಾಳ ಹೂಡಿ ಅದರಲ್ಲಿ ಒಂದಷ್ಟು ಲಾಭ ಪಡೆಯಲು ಪ್ರಯತ್ನಿಸುತ್ತಾನೆ. ಅದರಲ್ಲಿ ತಪ್ಪೇನಿದೆ? ನ್ಯಾಯವಾಗಿ ಲಾಭ ಮಾಡಿಕೊಳ್ಳಲು ನಮ್ಮ ಸಂವಿಧಾನವೇನು ಬೇಡವೆಂದಿಲ್ಲವಲ್ಲ?
ಹಾಗಂತ ಇಂದಿನ ಕೆಲ ಮಾಧ್ಯಮಗಳು ಮಾಡುತ್ತಿರುವ ಅತಿರಂಜಿತ ವರದಿಗಳನ್ನು, ಕೆಲ ಟ್ಯಾಬ್ಲಾಯ್ಡ್‌ಗಳ ಹೂರಣವನ್ನೆಲ್ಲಾ ವ್ಯಾಪಾರಿ ಮನಸ್ಥಿತಿಯಲ್ಲಿ ಒಪ್ಪಿಕೊಳ್ಳಬೇಕು ಎಂದಲ್ಲ. ಆದರೆ ಆದರ್ಶದ ಗುಂಗನ್ನು ಅತಿಯಾಗಿ ತಲೆಗೆ ಹಚ್ಚಿಕೊಂಡು ಪತ್ರಿಕೆಗಳನ್ನು ಸಂತರು ನಡೆಸುವ ಆಶ್ರಮದ ಲಾಭೋದ್ದೇಶವಿಲ್ಲದ ಪ್ರಕಟಣೆಗಳು ಎಂದು ಅರ್ಥೈಸುವುದು ಬೇಡ.

ಸ್ವಾತಂತ್ರ್ಯೂತ್ತರ ಕಾಲದಲ್ಲಿದ್ದಂತಹ ಆದರ್ಶ, ಧ್ಯೇಯಗಳಿಗಾಗಿಯೇ ಹೋರಾಡಿದ ಪತ್ರಿಕೆಗಳನ್ನು ಇವತ್ತು ನಿರೀಕ್ಷಿಸುವುದೇ ತಪ್ಪು ಅಂತ ಹೇಳುತ್ತಿಲ್ಲ. ಆದರೆ ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಹೋರಾಟದ ಕಿಚ್ಚು ಇವತ್ತು ಇಡೀ ಭಾರತೀಯ ಸಮಾಜದಲ್ಲಿಯೇ ಸತ್ತುಹೋಗಿದೆ. ಇಡೀ ಸಮಾಜದಲ್ಲಿಯೇ ಸತ್ತುಹೋಗಿರುವ ಕಿಚ್ಚನ್ನು ಕೇವಲ ಪತ್ರಕರ್ತರಲ್ಲಿ ಮಾತ್ರ ನಿರೀಕ್ಷಿಸುವ, ಉಳಿದವರಿಂದ ಆ ಕೆಚ್ಚನ್ನು ನಿರೀಕ್ಷಿಸದೆ ಇರುವ ಇಬ್ಬಂದಿತನ ಬೇಡ.
(ನವೆಂಬರ್ ೧೬, ೨೦೦೯ ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

Tuesday, November 10, 2009

ಪತ್ರಕರ್ತರ ಸಾಕ್ಷಿಪ್ರಜ್ಞೆ: ಪಿ. ಸಾಯಿನಾಥ್

ಪತ್ರಕರ್ತ ಪಿ ಸಾಯಿನಾಥ್ ಒಮ್ಮೆ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಫೆಲೋಶಿಪ್‌ಗಾಗಿ ಅರ್ಜಿ ಹಾಕಿದ್ದರು. ಅದರ ಸಂದರ್ಶನಕ್ಕಾಗಿ ಕರೆಯೂ ಬಂತು. ಟೈಮ್ಸ್ ಪತ್ರಿಕೆಯ ಸಂಪಾದಕರುಗಳ ಮುಂದೆ ಕುಳಿತು ತನಗೆ ಫೆಲೋಶಿಪ್ ಸಿಕ್ಕರೆ ಏನೇನು ಮಾಡುತ್ತೇನೆ ಎಂಬುದನ್ನು ಸವಿವರವಾಗಿ ಹೇಳುತ್ತಿದ್ದರು.

"ಇಂದಿನ ಪತ್ರಿಕೆಗಳು ದೇಶದ ಸಾಮಾಜಿಕ ವ್ಯವಸ್ಥೆಯ ಮೇಲ್ಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಮಾತ್ರ ಬರೆಯುತ್ತಿವೆ, ನಾನು ಈ ದೇಶದ ಸಾಮಾಜಿಕ ವ್ಯವಸ್ಥೆಯ ಕೆಳಭಾಗದಲ್ಲಿರುವ ಶೇಕಡಾ ೫ ರಷ್ಟು ಮಂದಿಯ ಬಗ್ಗೆ ಬರೆಯುತ್ತೇನೆ" ಎಂದು ಅದಾಗಲೇ ತೀರ್ಮಾನಿಸಿದ್ದ ಪಿ ಸಾಯಿನಾಥ್ ಟೈಮ್ಸ್ ಧಣಿಗಳ ಮುಂದೆಯೂ ತಮಗಿರುವ ಗ್ರಾಮೀಣ ವರದಿಗಾರಿಕೆಯಲ್ಲಿನ ಆಸಕ್ತಿಯ ಕುರಿತು ಹೇಳಿದರು. ಆಗ ಟೈಮ್ಸ್‌ನ ಸಂಪಾದಕ ಮಹಾಶಯನೊಬ್ಬ "ನಮ್ಮ ಪತ್ರಿಕೆಯ ಓದುಗರಿಗೆ ನೀವು ಬರೆಯುವ ಗ್ರಾಮೀಣ ವರದಿಯ ಬಗ್ಗೆ ಏನೂ ಆಸಕ್ತಿ ಇಲ್ಲ, ಏನು ಮಾಡ್ತೀರಾ" ಎಂದು ಕೇಳಿದ.

"ಓದುಗರಿಗೆ ಏನು ಬೇಕು, ಏನು ಬೇಡ ಎಂದು ಹೇಳಲು ನೀವು ನಿಮ್ಮ ಓದುಗರನ್ನು ಕೊನೆಯ ಬಾರಿ ಭೇಟಿಯಾಗಿದ್ದು ಯಾವಾಗ?" ಎಂದು ಕೂಡಲೇ ಮರುಪ್ರಶ್ನಿಸಿದರು ಸಾಯಿನಾಥ್. ಸಾಯಿನಾಥ್ ಪ್ರಶ್ನೆ ಅದೆಷ್ಟು ತೀಕ್ಷ್ಣವಾಗಿತ್ತೆಂದರೆ ಅವರಿಗೆ ಸಂದರ್ಶನಕಾರರಿಂದ ತಿರುಗಿ ಪ್ರಶ್ನೆಯೇ ಬರಲಿಲ್ಲ. ಅದಲ್ಲದೆ ಅವರಿಗೆ ಟೈಮ್ಸ್‌ನ ಫೆಲೋಶಿಪ್ ಕೂಡ ದೊರೆಯಿತು.

ಪೇಜ್ ತ್ರಿ ಪತ್ರಿಕೋದ್ಯಮಕ್ಕೇ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂಬ ಆರೋಪಕ್ಕೆ ಈಡಾಗಿರುವ ಟೈಮ್ಸ್‌ನ ಧಣಿಗಳ ಮುಂದೆ ಕುಳಿತು ಅವರ ಬಾಯಿ ಮುಚ್ಚಿಸುವುದು ಬಹುಷಃ ಸಾಯಿನಾಥ್‌ಗೆ ಮಾತ್ರ ಸಾಧ್ಯವೇನೋ. ಸಿಂಹದ ಗುಹೆಗೆ ಹೋಗಿ ಅಲ್ಲಿಯೇ ಅದನ್ನು ಸೋಲಿಸುವುದೆಂದರೆ ಸಾಮಾನ್ಯದ ಮಾತೇ?

ಅಂಥ ಪತ್ರಕರ್ತ, ದಿ ಹಿಂದೂ ಪತ್ರಿಕೆಯ ಗ್ರಾಮೀಣ ವರದಿಗಾರ ಪಿ ಸಾಯಿನಾಥ್ ಯಾವತ್ತಿಗೂ ನನ್ನ ಪಾಲಿನ ಆದರ್ಶ.

ಟೈಮ್ಸ್‌ನ ಫೆಲೋಶಿಪ್ ಸಿಕ್ಕಿದ್ದೇ ತಡ ಸಾಯಿನಾಥ್ ದೇಶದ ಬಡ ಜಿಲ್ಲೆಗಳ ಹಾದಿ ಹಿಡಿದರು. ದೇಶದ ಐದು ರಾಜ್ಯಗಳ ಹತ್ತು ಬಡ ಜಿಲ್ಲೆಗಳನ್ನು ತಿರುಗಿದರು. ಈ ತಿರುಗಾಟದಲ್ಲಿ ಅವರು ಸುಮಾರು ಒಂದು ಲಕ್ಷ ಕಿಲೋಮೀಟರ್ ದೂರವನ್ನು ಕ್ರಮಿಸಿದ್ದರು. ಅದ್ದರಲ್ಲೂ ಐದು ಸಾವಿರ ಕಿಲೋಮೀಟರ್ ದೂರವನ್ನು ನಡೆದೇ ಕ್ರಮಿಸಿದ್ದರು! ಟೈಮ್ಸ್ ಆಫ್ ಇಂಡಿಯಾದಂತಹ ಪತ್ರಿಕೆಯೇ ಸಾಯಿನಾಥ್ ಅವರ ಒಟ್ಟೂ 84 ಗ್ರಾಮೀಣ ವರದಿಗಳನ್ನು 18 ತಿಂಗಳ ಅವಧಿಯಲ್ಲಿ ಪ್ರಕಟಿಸಿತು. ಮುಂದೆ ಆ ಲೇಖನಗಳೆಲ್ಲ ಒಟ್ಟಾಗಿ Everyone Loves A Good Drought ಎಂಬ ಹೆಸರಿನಲ್ಲಿ ಪುಸ್ತಕವಾಗಿ ಬಂತು. ಆ ಪುಸ್ತಕ ಇಂದಿಗೂ ಗ್ರಾಮೀಣ ವರದಿಗಾರಿಕೆಯ ಬಗ್ಗೆ ಆಸಕ್ತಿಯಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಪತ್ರಕರ್ತರ ಪಾಲಿಗೆ ಭಗವದ್ಗೀತೆಯಿದ್ದಂತೆ.

ಕೆಲ ಕನ್ನಡ ಟಿವಿ ವಾರ್ತಾ ವಾಹಿನಿಗಳನ್ನು ನೋಡಿಕೊಂಡು ಈ ಪತ್ರಕರ್ತರೆಲ್ಲ ಹೀಗೇ ಎಂದು ಮೂದಲಿಸುವ ಎಡಬಿಡಂಗಿಗಳಿಗೆ ಮತ್ತು ಕೆಲ ಕರಿ ಬಣ್ಣದ ಕನ್ನಡ ಟ್ಯಾಬ್ಲಾಯ್ಡ್‌ಗಳನ್ನು ಓದಿಕೊಂಡು ಪತ್ರಿಕೋದ್ಯಮ ಎಂದರೆ ಇಷ್ಟೇ ಎಂದು ಉಡಾಫೆಯಲ್ಲಿ ಮಾತನಾಡುವ ಅತಿಬುದ್ಧಿವಂತರಿಗೆ ಪತ್ರಿಕೋದ್ಯಮದ ಬಗ್ಗೆ ಅಭಿಮಾನ ಇರುವವರು ಹೆಮ್ಮೆಯಿಂದ ಕೇಳಬೇಕಾದ ಪ್ರಶ್ನೆ ಎಂದರೆ: "ಸ್ವಾಮಿ, ನೀವು ಸಾಯಿನಾಥ್‌ರ ವರದಿಗಳನ್ನು ಓದಿದ್ದೀರಾ?"

ಸಾಯಿನಾಥ್‌ರ Everyone Loves A Good Drought ಪುಸ್ತಕ ಬಿಡುಗಡೆಯಾಗಿ ಎರಡು ವರ್ಷಗಳ ಕಾಲ ಟಾಪ್ ಟೆನ್ ಪುಸ್ತಗಳ ಸಾಲಿನಲ್ಲಿ ನಂಬರ್ ೧ ಆಗಿತ್ತು! ಅದಲ್ಲದೆ ನಂತರ ಖ್ಯಾತ ಪುಸ್ತಕ ಪ್ರಕಾಶನ ಸಂಸ್ಥೆ ಪೆಂಗ್ವಿನ್ ಇಂಡಿಯಾದವರ ಸಾರ್ವಕಾಲಿಕ ಶ್ರೇಷ್ಠ ಪುಸ್ತಕಗಳ ಸಾಲಿನಲ್ಲಿ ಅದು ಒಂದಾಗಿದೆ! ಅಷ್ಟೊಂದು ದೊಡ್ಡಮಟ್ಟದ ಮಾರಾಟ ಕಂಡ ಆ ಪುಸ್ತಕದ ರಾಯಲ್ಟಿಯ ಅಷ್ಟೂ ಹಣವನ್ನು ಸಾಯಿನಾಥ್ ಯುವ ಗ್ರಾಮೀಣ ವರದಿಗಾರರನ್ನು ಪ್ರೋತ್ಸಾಹಿಸಲು ವಿನಿಯೋಗಿಸಿದರು!! ಪತ್ರಿಕೋದ್ಯಮದಲ್ಲಿನ ಸಾಧನೆಗಾಗಿ ೨೦೦೭ನೆಯ ಇಸವಿಯ ಮ್ಯಾಗ್ಸೆಸೇ ಪ್ರಶಸ್ತಿ ಸಾಯಿನಾಥ್‌ರನ್ನು ಅರಸಿಕೊಂಡು ಬಂತು.

ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದ ರೈತರ ಆತ್ಮಹತ್ಯೆಗಳ ಬಗ್ಗೆ ಅವರು ಬರೆದ ಲೇಖನ ಮಾಲೆ ಪ್ರಧಾನಿ ಮನಮೋಹನ್ ಸಿಂಗ್ ವಿದರ್ಭಕ್ಕೆ ಧಾವಿಸಿ ಬರುವಂತೆ ಮಾಡಿತು. ಅಲ್ಲದೆ, ವಿದರ್ಭ ಪ್ರಾಂತ್ಯದ ರೈತರ ಕಲ್ಯಾಣಕ್ಕೆಂದೇ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸುವಂತೆ ಮಾಡಿತು. ಪತ್ರಕರ್ತನ ಬರಹಗಳಿಂದ ಸಾಮಾಜಿಕ ಬದಲಾವಣೆ ಅಸಾಧ್ಯ ಎಂದು ಆರೋಪಿಸುವವರಿಗೆ ಮತ್ತು ವ್ಯವಸ್ಥೆಯ ವಿರುದ್ಧ ಎದ್ದು ನಿಲ್ಲುವ ತಾಕತ್ತನ್ನು ಪತ್ರಿಕೋದ್ಯಮ ಕಳೆದುಕೊಂಡಿದೆ ಎಂದು ಮಾತಾಡುವವರಿಗೆ ಉತ್ತರದಂತೆ ವಿದರ್ಭ ಘಟನೆ ನಮ್ಮ ಕಣ್ಣ ಮುಂದೆ ನಿಲ್ಲುತ್ತದೆ.

ಇರಲಿ, ಸಾಯಿನಾಥ್‌ರ ಸಾಧನೆಗಳು ಸಾಕಷ್ಟು ದೊಡ್ಡದಿದೆ.ಸಾಯಿನಾಥ್‌ರಂತಹ ಪತ್ರಕರ್ತರು ಯಾವ ಪತ್ರಿಕೆಯಲ್ಲಿದ್ದರೂ ಅವರ ಇರುವಿಕೆಯೇ ಪತ್ರಿಕೋದ್ಯಮಕ್ಕೊಂದು ಹೆಮ್ಮೆ. ಅವರು ಕೇವಲ ತಾವು ಮಾತ್ರ ಬೆಳೆಯುವುದಿಲ್ಲ. ಇಡೀ ಜನ ಸಮೂಹವನ್ನು ಬೆಳೆಸುತ್ತಾರೆ. ಸಾಮಾಜಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿಯೂ ತಾವು ನಂಬಿದ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸುತ್ತಾ ನಮಗೆಲ್ಲ ಹೊಸ ನಾಡಿನ, ರಸದ ಬೀಡಿನ ಭರವಸೆ ನೀಡುವ ರೂಪಕವಾಗಿ ಕಾಣಿಸುತ್ತಾರೆ.

Friday, October 23, 2009

"ಪ್ರತಿಭಟನೆ, ಬಂದ್‌ನ ಆಚೆಗೂ ವಿದ್ಯಾರ್ಥಿ ಪರಿಷತ್ ಕೆಲಸ ಮಾಡುತ್ತಿದೆ"


ಅಕ್ಟೋಬರ್ ೯ ರಿಂದ ೧೧ರವರೆಗೆ ಬಳ್ಳಾರಿಯ ರಾಘವ ಕಲಾಮಂದಿರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ’ರಂಗತೋರಣ’ ವಿದ್ಯಾರ್ಥಿ ನಾಟಕೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು. ನಾಟಕೋತ್ಸವದಲ್ಲಿ ಸ್ಪರ್ಧಿಸಿದ್ದ ಸುಮಾರು ೨೭ ನಾಟಕಗಳ ಪೈಕಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಮ್‌ಬಿಅ ಕಾಲೇಜಿನ ವಿದ್ಯಾರ್ಥಿಗಳು ಆಡಿದ ’ನಾನು ಮತ್ತು ನಾಳೆ’ ನಾಟಕ ಪ್ರಥಮ ಬಹುಮಾನ ಪಡೆದುಕೊಂಡಿತು.

೨೦೦೩ನೆಯ ಇಸವಿಯಲ್ಲಿ ಪ್ರಾರಂಭಗೊಂಡ ಈ ನಾಟಕೋತ್ಸವಕ್ಕೆ ಈ ಬಾರಿ ಐದರ ಹರೆಯ. ಇಡೀ ನಾಟಕೋತ್ಸವದ ರೂವಾರಿ, ನಾಟಕೋತ್ಸವದುದ್ದಕ್ಕೂ ಪಾದರಸದಂತೆ ಓಡಾಡುತ್ತಾ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರನ್ನು ಪ್ರತಿ ನಿಮಿಷವೂ ಹುರಿದುಂಬಿಸುತ್ತಿದ್ದ ಪ್ರೊ. ಭೀಮಸೇನ್ ಅವರ ಜೊತೆ ಆಡಿದ ಎರಡು ಮಾತುಗಳು ಇಲ್ಲಿವೆ.

*****

ಎಬಿವಿಪಿಯವರು ಎಂದರೆ ಕೇವಲ ಬಂದ್ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ನಕಾರಾತ್ಮಕ ಹಣೆಪಟ್ಟಿಗಳಿದ್ದರೂ ವಿದ್ಯಾರ್ಥಿ ಪರಿಷತ್ತಿನವರು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತೆಗೆಯುವತ್ತ ಮಾಡುತ್ತಿರುವ ಕೆಲಸದ ಕೆಲವು ಝಲಕ್ ಕೂಡ ಇಲ್ಲಿದೆ.

*****

"ಇದು ನಮ್ಮ ಐದನೆಯ ವರ್ಷದ ರಂಗತೋರಣ. ಈ ನಾಟಕೋತ್ಸವವನ್ನು ಆರಂಭಸಲು ಸಾಕಷ್ಟು ಕಾರಣಗಳಿವೆ. ಸಾಮಾನ್ಯವಾಗಿ ಎಬಿವಿಪಿಯ ಹುಡುಗರು ಎಂದರೆ ಬಂದ್ ಮಾಡುವವರು, ಗಲಾಟೆ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ಹಣೆಪಟ್ಟಿಗಳಿವೆ. ಆದರೆ ಬಂದ್, ಪ್ರತಿಭಟನೆ ಮತ್ತು ಗಲಾಟೆಯ ಆಚೆಗೂ ಎಬಿವಿಪಿಯ ಹುಡುಗರು ಕೆಲಸ ಮಾಡುತ್ತಾರೆ. ಅವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿದೆ."

"ರಜಾ ದಿನಗಳಲ್ಲಿ ಎಬಿವಿಪಿಯ ಹುಡುಗರಿಗೆ ಸಮಯ ನಿರ್ವಹಣೆ, ನಾಯಕತ್ವದ ಕೌಶಗಳು, ಪರಿಣಾಮಕಾರಿ ಸಂವಹನ ಕಲೆ, ವಿಜ್ಞಾನ ಹೀಗೆ ಅನೇಕ ವಿಷಯಗಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಮಗೆ ಇಂಥ ಎಲ್ಲ ಕಲೆ-ಕೌಶಲಗಳನ್ನು ಒಂದೇ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಕಲಿಸುವ ಆಸೆಯಿತ್ತು."

"ಇಂಥ ಸಂದರ್ಭದಲ್ಲಿಯೇ ಕನ್ನಡ ಹಿರಿಯ ನಾಟಕಕಾರ ಡಾ ಚಂದ್ರಶೇಖರ ಕಂಬಾರರಿಗೆ ನಾಡೋಜ ಪ್ರಶಸ್ತಿ ಬಂತು. ಆಗ ನಾವೂ ನಾಟಕಗಳ ಬಗ್ಗೆ ಏನಾದರೂ ಮಾಡಬೇಕು. ನಾಟಕಕ್ಕಾಗಿ ಕೆಲಸ ಮಾಡಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡಿತು."

"ನಾಯಕತ್ವದ ಕಲೆ, ಪರಿಣಾಮಕಾರಿ ಸಂವಹನ, ಸಮಯ ನಿರ್ವಹಣೆ ಇಂಥಹ ಅನೇಕ ಕೌಶಲಗಳನ್ನು ವ್ಯವಸ್ಥಿತವಾಗಿ ಮೈಗೂಡಿಸಿಕೊಳ್ಳಬೇಕಾದದ್ದು ಒಬ್ಬ ನಾಟಕಕಾರನ ಮತ್ತು ನಟನ ಅಗತ್ಯ ಗುಣ. ಎಬಿವಿಪಿಯವರು ಹೇಗಿದ್ದರೂ ಇಂಥ ಕೌಶಲಗಳನ್ನು ಅನೇಕ ಕಾರ್ಯಕ್ರಮಗಳ ಮೂಲಕ ತಮ್ಮ ಹುಡುಗರಿಗೆ ಕಲಿಸುತ್ತಾರೆ. ಹಾಗೆ ಕಲಿತ ವಿಚಾರಗಳ ಅಭಿವ್ಯಕ್ತಿ ಹೇಗಾಗುತ್ತದೆ ಎಂದು ನೋಡಬೇಕು. ಅದಕ್ಕೆ ನಾಟಕಕ್ಕಿಂತ ಪರಿಣಾಮಕಾರಿ ಮಾಧ್ಯಮ ಯಾವುದಿದೆ?"

"ಈ ಒಂದು ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ೨೦೦೩ ರಲ್ಲಿ ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವವನ್ನು ’ರಂಗತೋರಣ’ ಎಂಬ ಹೆಸರಿನಲ್ಲಿ ಆರಂಭಿಸಿದೆವು. ಜಿಲ್ಲಾ ಮಟ್ಟದಲ್ಲಿ ನಡೆದ ಮೊದಲ ನಾಟಕೋತ್ಸವದಲ್ಲಿ ಏಳು ತಂಡಗಳು ಭಾಗವಹಿಸಿದ್ದವು."

"ನಂತರ ೨೦೦೪ರಲ್ಲಿ ಎರಡನೆಯ ರಂಗತೋರಣ ವಿಭಾಗ ಮಟ್ಟದಲ್ಲಿ ನಡೆಯಿತು. ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಾದ ಗುಲ್ಬರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿ ನಾಟಕ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದ್ದವು. ೨೦೦೭ನೆಯ ಇಸವಿಯಿಂದ ಈ ಉತ್ಸವ ರಾಜ್ಯಮಟ್ಟದ್ದಾಯಿತು."

"ಪಿಯುಸಿಯಿಂದ ಹಿಡಿದು ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳವರೆಗೆ ಈ ನಾಟಕೋತ್ಸವದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಸಿದ್ಧಾಂತ ಬೇಧಗಳನ್ನು ಮರೆತು ಎಲ್ಲ ರೀತಿಯ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ."

"ಈ ನಾಟಕೋತ್ಸವವನ್ನು ಪ್ರತಿ ವರ್ಷವೂ ಬಳ್ಳಾರಿಯಲ್ಲೇ ನಡೆಸುವುದಕ್ಕೆ ಕಾರಣವಿದೆ. ಬಳ್ಳಾರಿಯ ರಾಘವ ಅವರು ಮತ್ತು ಬೀಚಿಯವರು ನಾಟಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಸಂಪಾದಿಸಿದ್ದವರು. ಅದು ನಿಮಗೂ ಗೊತ್ತು. ಬಳ್ಳಾರಿಯ ರಾಘವರಂತೂ ಷೇಕ್ಸ್‌ಪಿಯರ್‌ನ ನಾಟಕಗಳನ್ನು ಜಾರ್ಜ್ ಬರ್ನಾರ್ಡ್ ಷಾ ಎದುರಿಗೆ ಆಡಿತೋರಿಸಿದ್ದರಂತೆ. ಷೇಕ್ಸ್‌ಪಿಯರ್‌ಗೂ ಬರ್ನಾರ್ಡ್ ಷಾಗೂ ಆಗಿಬರುತ್ತಿರಲಿಲ್ಲ. ಆದರೂ ಬರ್ನಾರ್ಡ್ ಷಾ ರಾಘವರು ಆ ನಾಟಕಗಳನ್ನು ಆಡುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ಅದನ್ನು ನೋಡುತ್ತಿದ್ದರಂತೆ."

"ಒಮ್ಮೆ ಗಾಂಧೀಜಿಯವರು ಇಲ್ಲಿಗೆ ಬಂದಿದ್ದಾಗ ಅವರೆದುರಿಗೆ ಒಂದು ನಾಟಕ ತೋರಿಸುವ ಆಸೆಯಾಯಿತಂತೆ. ಗಾಂಧೀಜಿಯವರಿಗೆ ಬಹಳ ಕೆಲಸವಿತ್ತು. ಆದರೂ ಇಪ್ಪತ್ತು ನಿಮಿಷಗಳ ಮಟ್ಟಿಗೆ ನಾಟಕ ನೋಡಲು ಕುಳಿತರು. ನಾಟಕ ನೋಡುವುದರಲ್ಲಿ ತಲ್ಲೀನರಾಗಿಬಿಟ್ಟ ಗಾಂಧೀಜಿ ತಮ್ಮ ಪ್ರಾರ್ಥನೆಯ ಸಮಯವನ್ನೂ ಮರೆತು ನಾಟಕ ನೋಡಿದರಂತೆ. ನಂತರ ರಾಘವರ ಬೆನ್ನು ತಟ್ಟಿ ಹೋದರಂತೆ. ಅಷ್ಟೇ ಅಲ್ಲದೆ, ತಿಲಕರೆದುರು ಮಹಾತ್ಮಾ ಕಬೀರ್ ನಾಟಕವನ್ನು ಆಡಿ ತೋರಿಸಿದ್ದರಂತೆ ನಮ್ಮ ರಾಘವರು."

"ಅಂಥ ನಾಟಕಕಾರರು ಮತ್ತು ಸಾಹಿತಿಗಳು ಜನಿಸಿದ ಈ ನಾಡಿನಲ್ಲಿ ನಾಟಕ ಕಾರ್ಯಕ್ರಮಗಳಿಗೆ ಬಹುವಾದ ಬೆಂಬಲವಿದೆ. ಇಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಬಹುದೊಡ್ಡ ದಂಡೇ ಇದೆ. ಇದು ಒಂದರ್ಥದಲ್ಲಿ ವೃತ್ತಿ ರಂಗಭೂಮಿ ಕಲಾವಿದರ ತವರೂರು."

"ಹಾಗಾಗಿ ಬಳ್ಳಾರಿಯ ಸಾಂಸ್ಕೃತಿಕ ಮುಖವನ್ನು ಜನರಿಗೆ ತೋರಿಸುವುದಕ್ಕೋಸ್ಕರ ಮತ್ತು ರಾಜಕೀಯದಾಚೆಗೂ ಬಳ್ಳಾರಿಗೆ ಒಂದು ಒಳ್ಳೆಯ ಹೆಸರಿದೆ ಎಂಬುದನ್ನು ಜನರಿಗೆ ತೋರಿಸಲು ಈ ಉತ್ಸವವನ್ನು ಬಳ್ಳಾರಿಯಲ್ಲೇ ನಡೆಸುತ್ತೇವೆ."

Thursday, September 10, 2009

ಸಹಿಷ್ಣುತೆಯ ಪಾಠ; ಪ್ರತ್ಯೇಕತೆಯ ಆಟ

ಭಾರತದಲ್ಲಿ ಕೋಮುಗಲಭೆಗಳು ಸಂಭವಿಸುವುದು, ಕೋಮುಗಲಭೆಗಳು ಅತಿರೇಕದ ಹಂತ ಮುಟ್ಟಿ, ಗಲಭೆ ನಡೆಸಿದವರಿಗೇ ಸುಸ್ತಾಗಿ ನಂತರ ತಣ್ಣಗಾಗುವುದು ನಮ್ಮಲ್ಲಿ ಯಾರಿಗೂ ಹೊಸ ವಿಚಾರವಲ್ಲ. ಹಾಗೆ ಗಲಭೆಗಳು ಸಂಭವಿಸಿ ತಣ್ಣಗಾದ ನಂತರ ಒಂದಿಷ್ಟು ಮಂದಿ ಸೇರಿ ಶಾಂತಿ ಸಭೆ ನಡೆಸಿ ಪತ್ರಿಕೆಗಳಲ್ಲಿ ಫೋಟೊ ಹಾಕಿಸಿಕೊಳ್ಳುವುದು, ಇನ್ನೊಂದಿಷ್ಟು ಮಂದಿ (ಅತಿ)ಬುದ್ಧಿಜೀವಿಗಳು ’ಸತ್ಯಶೋಧನಾ ಸಮಿತಿ’ ಎಂಬ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡು ಗಲಭೆ ನಡೆದ ಸ್ಥಳಕ್ಕೆ ಸ್ವಯಂಪ್ರೇರಣೆಯಿಂದ ತೆರಳಿ ’ಸತ್ಯಶೋಧನೆ’ ನಡೆಸುವುದು ಕೂಡ ನಮ್ಮ ಪಾಲಿಗೆ ತೀರಾ ಸಾಮಾನ್ಯ ಎಂಬಂತಾಗಿಬಿಟ್ಟಿದೆ.

ಹೆಚ್ಚಿನ ಸತ್ಯಶೋಧನಾ ಸಮಿತಿಗಳ ವರದಿಗಳು ಸಾಮಾನ್ಯವಾಗಿ ಒಂದೇ ರೀತಿ ರೀತಿಯಲ್ಲಿ ಇರುತ್ತವೆ ಎಂಬುದೂ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.

ಕೋಮುಗಲಭೆಗಳಿಗೆಲ್ಲ ಭಾರತದ ಬಹುಸಂಖ್ಯಾತರೇ ಕಾರಣರು. ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳೆಲ್ಲಾ ಕೋಮುವಾದವನ್ನೇ ಪ್ರತಿಪಾದಿಸುತ್ತವೆ ಮತ್ತು ಈ ದೇಶದಲ್ಲಿ ನಡೆಯುವ ಎಲ್ಲ ಕೋಮುಗಲಭೆಗಳಿಗೂ ಬಹುಸಂಖ್ಯಾತ ಸಮುದಾಯವನ್ನು ಪ್ರತಿನಿಧಿಸುವ ಸಂಘಟನೆಗಳೇ ಕಾರಣ ಎಂದು ಷರಾ ಬರೆಯುವುದು ನಮ್ಮಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿಯೇ ಆಗಿದೆ. ದೇಶದ ಬಹುಸಂಖ್ಯಾತರ ಸಂಘಟನೆಗಳೇ ಕೋಮುಗಲಭೆಯನ್ನು ಪ್ರಚೋದಿಸುತ್ತವೆ ಎಂಬುದನ್ನು ಬಹುಷಃ ಈ ಸತ್ಯಶೋಧನಾ ಸಮಿತಿಗಳು ಘಟನಾಸ್ಥಳಕ್ಕೆ ಆಗಮಿಸುವ ಮೊದಲೇ ನಿರ್ಧರಿಸಿಕೊಂಡು ಬಂದಿರುತ್ತವೆಯೇನೋ?!

ಅದಿರಲಿ. ಗಲಭೆಗಳು ನಡೆದ ಅನಂತರದಲ್ಲಿ ಬಹುಸಂಖ್ಯಾತ ಸಮುದಾಯದವರಿಗೆ ನೀವು ಸಹಿಷ್ಣುಗಳಾಗಿರಿ ಎಂದು ಹೇಳುವುದು ನಮ್ಮ ನಾಡಿನ ಬುದ್ಧಿಜೀವಿಗಳಿಗೆ, ವಿಚಾರವಾದಿಗಳಿಗೆ ಹುಟ್ಟುತ್ತಲೇ ಸಿದ್ಧಿಸಿರುವ ಕಲೆ.

ಸಹಿಷ್ಣು ಎಂಬ ಪದದ ವಾಚ್ಯಾರ್ಥ ಮತ್ತು ಭಾವಾರ್ಥ ಕಷ್ಟವನ್ನು ಸಹಿಸಿಕೊ ಎಂದಾಗುತ್ತದೆ. (ಸಹಿಷ್ಣು ಎಂಬ ಪದದ ಅರ್ಥ ಇದಲ್ಲ ಎಂದಾದರೆ ನಿಜಾರ್ಥ ಯಾವುದು ಎಂಬುದನ್ನು ಅಲ್ಲಗಳೆಯುವವರೇ ತಿಳಿಸಿಕೊಡಬೇಕು.)

ಮನುಷ್ಯನಾದವನು ಕಟುಕನನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕಷ್ಟಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಅನ್ಯಾಯಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಹಾಗೂ ಇನ್ನೂ ಅನೇಕ ಅಸಹಜ ಸಂಗತಿಗಳನ್ನು, ತಮ್ಮ ನಿರೀಕ್ಷೆಗೆ ವಿರುದ್ಧವಾಗಿ ಸಾಗುವ ಸಂಗತಿಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ. ಆದರೆ ಯಾರಿಗೂ ಕೂಡ ಸಹಜತೆಯನ್ನು ಸಹಿಸಿಕೊಳ್ಳುವ ಅಗತ್ಯವಿರುವುದಿಲ್ಲ.

ಮಲೆನಾಡಿನಲ್ಲಿ ಹುಟ್ಟಿದವನಿಗೆ ಜಡಿಮಳೆಯನ್ನು ಸಹಿಸಿಕೊಳ್ಳಬೇಕಾದ ಅಗತ್ಯವಿರುವುದಿಲ್ಲ; ಅವನಿಗೆ ಆ ಮಳೆಯನ್ನು ಒಫ್ಫಿಕೊಳ್ಳುವ ಅಗತ್ಯವಿರುತ್ತದೆ. ಏಕೆಂದರೆ ಮಲೆನಾಡಿನ ಪ್ರಕೃತಿಯೇ ಜಡಿಮಳೆಯನ್ನು ಪೋಷಿಸುತ್ತಿರುತ್ತದೆ. ಆದರೆ ಅದೇ ಮಲಿನಾಡಿನವನಿಗೆ ಬಯಲುಸೀಮೆಯ ಬಿರುಸೆಖೆ ಅಸಹನೀಯವೆನಿಸುತ್ತದೆ. ಅವನು ಕೆಲವು ಸಂದರ್ಭಗಳಲ್ಲಿ ಆ ಸೆಖೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ. ಯಾವುದು ಅವನ ಪ್ರಕೃತಿಗೆ ವಿರುದ್ಧವೋ ಅದನ್ನು ಅವನು ಸಹಿಸಿಕೊಳ್ಳಬೇಕು. ಯಾವುದು ಅವನ ಪ್ರಕೃತಿಗೆ ಪೂರಕವೋ ಅದನ್ನು ಆತ ಖುಷಿಯಿಂದ ಅನುಭವಿಸಬೇಕು ಮತ್ತು ಅನುಭವಿಸುತ್ತಾನೆ.

ಅಂದರೆ ಸಹಿಷ್ಣುಗಳಾಗಿರುವುದು ಅಂದರೆ ನಮಗೆ ಅಸಹನೀಯವೆನಿಸುವುದನ್ನೂ ಸಹಿಸಿಕೊಳ್ಳುವುದು. ಅಥವಾ ನಮಗೆ ಒಗ್ಗಿಬರದ್ದನ್ನು ಸಹಿಸಿಕೊಳ್ಳುವುದು. ಅದರ ಜೊತೆಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಂಡು ಬದುಕುವುದು ಎಂದರ್ಥ.

ಈ ದೇಶದ ಬಹುಸಂಖ್ಯಾತ ಸಮುದಾಯದವರ ಬಳಿ ನೀವು ಸಹಿಷ್ಣುಗಳಾಗಿರಬೇಕು ಎಂದು ಬುದ್ಧಿಜೀವಿಗಳು ಉಪದೇಶಿಸುವುದೂ ಇದೇ ಅರ್ಥದಲ್ಲಿಯೇ.

ಸರಿ, ಈ ರೀತಿಯ ಸಹಿಷ್ಣುತೆ ಪ್ರಜಾಪ್ರಭುತ್ವವಿರುವ ದೇಶದಲ್ಲಿ ಒಂದು ಹಂತದವರೆಗೆ ಅನಿವಾರ್ಯ. ಯಾರೂ ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದಲ್ಲದೆ ನಮ್ಮ ಸಂವಿಧಾನ ಪ್ರತಿಯೊಬ್ಬರಿಗೂ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿರುವಾಗ, ವಿವಿಧ ಮತ-ಧರ್ಮಗಳ ನಡುವೆ ಸಾಮರಸ್ಯವಿರಲು ಸಹಿಷ್ಣುತೆ ಅತ್ಯಗತ್ಯ. ಆದರೆ ಇವತ್ತು ಬಹುಸಂಖ್ಯಾತ ಸಮುದಾಯದವರನ್ನು ಸಹಿಷ್ಣುಗಳಾಗಿರಿ ಎಂದು ಹೇಳುವುದು ಮತ್ತು ಅಲ್ಪಸಂಖ್ಯಾತ ಸಮುದಾಯದ ಅಸಹಿಷ್ಣುತೆಯ ಬಗ್ಗೆ ಜಾಣ ಮೌನ ತೋರಿಸುವುದು ಬುದ್ಧಿಜೀವಿ ವರ್ಗ ಯಾವತ್ತಿಂದಲೂ ಬೆಳೆಸಿಕೊಂಡು ಬಂದಿರುವ ವೈಚಾರಿಕ ಇಬ್ಬಂದಿತನದ ಮುಂದುವರೆದ ಭಾಗವೇ ಅಗುತ್ತದೆ.

ನಮ್ಮ ದೇಶದ ಸಂವಿಧಾನ ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ನೀಡುವ ಭರವಸೆಯನ್ನು ನೀಡಿದೆ. ತಮ್ಮನ್ನಾಳುವ ಪ್ರಭುತ್ವವು ತಮ್ಮ ಜೀವರಕ್ಷಣೆಯ ಖಾತ್ರಿ ನೀಡಲಿ ಎಂದು ನಿರೀಕ್ಷಿಸುವುದು ಪ್ರತಿ ವ್ಯಕ್ತಿಯ ಮೂಲಭೂತ ಹಕ್ಕೂ ಹೌದು. ಇದೇ ಹಕ್ಕಿನಲ್ಲಿ ಬೇರೆಯವರಿಂದ ವಿನಾಕಾರಣ ಉಪಟಳಕ್ಕೆ ಈಡಾಗದೆ ಇರುವ ಹಕ್ಕೂ ಸೇರಿಕೊಳ್ಳುತ್ತದೆ. ಆದರೆ ಬಹುಸಂಖ್ಯಾತರು ಅಲ್ಪಸಂಖ್ಯಾತ ಸಮುದಾಯದವರಿಂದ ತೊಂದರೆಗೊಳಗಾದಾಗಲೆಲ್ಲ ನಮ್ಮ ಬುದ್ಧಿಜೀವಿ ವರ್ಗ ನೀವು ಸಹಿಷ್ಣುಗಳಾಗಿರಿ ಎಂದು ನೀತಿ ಬೋಧೆ ಮಾಡುತ್ತದೆ. ಹಾಗಂತ ಅನ್ಯರಿಗೆ ತೊಂದರೆ ಕೊಡಬೇಡಿ ಅಂತ ತೊಂದರೆ ಕೊಡುವವರಿಗೆ ಸೂಚಿಸುವುದಿಲ್ಲ.

ಇದು ಸಹಿಷ್ಣುತೆ ಎಂಬ ಪದವನ್ನುಪಯೋಗಿಸಿಕೊಂಡು ಮಾಡುವ ಠಕ್ಕ ಕೆಲಸವೇ ಅಲ್ಲವೇ? ತೊಂದರೆಗೊಳಗಾದವರು ಸಹಿಷ್ಣುಗಳಾಗಿರಲಿ ಎಂದರೆ ಏನರ್ಥ? ತೊಂದರೆ ಕೊಡುವವರು ಸುಖವಾಗಿರಲಿ, ಅವರಿಗೆ ಏನೂ ಅಪಾಯವಾಗದಿರಲಿ ಎಂದರ್ಥವೇ? ಸಹಿಷ್ಣುತೆಯ ಪಾಠ ಹೇಳಿಕೊಡುವವರು ಉತ್ತರಿಸಬೇಕು.

ಅವರು ಅಲ್ಪಸಂಖ್ಯಾತರಿರಲಿ ಅಥವಾ ಬಹುಸಂಖ್ಯಾತರಿರಲಿ ಇನ್ನೊಬ್ಬರಿಗೆ ತೊಂದರೆ ಕೊಟ್ಟಾಗ ತೊಂದರೆಗೊಳಗಾದವನಿಗೆ ಸಹಿಷ್ಣುತೆಯ ಪಾಠ ಹೇಳಿಕೊಡುವುದಕ್ಕಿಂತ ತೊಂದರೆ ನೀಡಿದವನಿಗೆ ಕಿವಿಹಿಂಡಿ ಬುದ್ಧಿ ಹೇಳಬೇಕಾಗುತ್ತದೆ. ಅದಲ್ಲದೇ ಸಂವಿಧಾನದಲ್ಲಿಯೇ ಘನತೆಯಿಂದ ಬದುಕುವ ಹಕ್ಕನ್ನು ಪ್ರತಿಯೊಬ್ಬ ವ್ಯಕ್ತಿಗೂ ನೀಡಿರುವುದರಿಂದ ಅವನು ತೊಂದರೆಗೆ ಒಳಗಾದಾಗ ಸಹಿಷ್ಣುವಾಗಿರುವ ಅವಶ್ಯಕತೆಗಿಂತ ಹೆಚ್ಚಾಗಿ ತೊಂದರೆ ನೀಡಿದವನಿಗೆ ಶಿಕ್ಷೆ ನೀಡಬೇಕಾದ ಅಗತ್ಯತೆ ಹೆಚ್ಚಿರುತ್ತದೆ.

ಮೊನ್ನೆ ಬಂಟ್ವಾಳದ ಕಾಲೇಜೊಂದರಲ್ಲಿ ಸಮವಸ್ತ್ರದ ವಿಚಾರವಾಗಿ ನಡೆದ ವಿವಾದದ ಸಮಯದಲ್ಲೂ ಬಹುಸಂಖ್ಯಾತರಿಗೆ ಸಹಿಷ್ಣುಗಳಾಗಿರಲು ಸೂಚಿಸಲಾಯಿತು. ಅಲ್ಪಸಂಖ್ಯಾತರಿಗೆ ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಸಂವಿಧಾನದತ್ತವಾಗಿಯೇ ಇದೆ ಹಾಗಾಗಿ ಅವರು ವಸ್ತ್ರಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಅಗತ್ಯವೇ ಇಲ್ಲ ಎಂದೂ ವಾದಿಸಲಾಯಿತು. ಅಲ್ಪಸಂಖ್ಯಾತ ಸಮುದಾಯದವರೊಬ್ಬರು ತಮ್ಮ ಧರ್ಮವನ್ನು ಮುಂದಿಟ್ಟುಕೊಂಡು ಕಾಲೇಜಿನ ನಿಯಮವನ್ನು ಅನುಸರಿಸುವುದಿಲ್ಲ ಎಂದರೆ ಕಾಲೇಜಿನಲ್ಲಿ ನಿಯಮಗಳನ್ನು ತರುವುದಾದರೂ ಏತಕ್ಕೆ? ಇದೇ ರೀತಿ ಅಲ್ಪಸಂಖ್ಯಾತ ಸಮುದಾಯದವರು ಕರ್ನಾಟದಾದ್ಯಂತ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಬ್ರಾಹ್ಮಣನೊಬ್ಬ ಕಚ್ಚೆ-ಪಂಜೆಯನ್ನುಟ್ಟುಕೊಂಡು ಬರುತ್ತೇನೆ ಅಂದರೆ ಅದನ್ನು ನಮ್ಮ ಬುದ್ಧಿಜೀವಿಗಳು ಒಪ್ಪುತ್ತಾರೆಯೇ? ಆಗ ನಮ್ಮ ಪ್ರಗತಿಪರರು ಅಲ್ಪಸಂಖ್ಯಾತರಿಗೆ ಸಹಿಷ್ಣುತೆಯ ಪಾಠ ಮಾಡಬಲ್ಲರೇ? ನಮ್ಮ ವಿಚಾರವಾದಿಗಳ, ಪ್ರಗತಿಪರರ ಇಂಥ ಇಬ್ಬಂದಿತನವೇ ಇಂದು ಅಲ್ಪಸಂಖ್ಯಾತರನ್ನು ದೇಶದ ಮುಖ್ಯವಾಹಿನಿಯಿಂದ ದೂರ ಸರಿಸುತ್ತಿದೆ.

ಹಾಗಂತ ಯಾವ ಅಲ್ಪಸಂಖ್ಯಾತರೂ ಈ ದೇಶಕ್ಕೆ ಎಂದಿಗೂ ಹೊರೆಯಲ್ಲ. ಅವರೆಲ್ಲರೂ ಈ ದೇಶದ ಮಕ್ಕಳೇ ಆಗಿರುತ್ತಾರೆ. ಜೈನ, ಬೌದ್ಧ, ಪಾರ್ಸಿ, ಶಕ, ಹೂಣರಂಥ ಅನೇಕ ಅಲ್ಪಸಂಖ್ಯಾತ ಸಮುದಾಯವನ್ನು ತನ್ನವರನ್ನಾಗಿಸಿಕೊಂದಿರುವ ಭಾರತೀಯ ಸಮಾಜಕ್ಕೆ ಮುಸ್ಲಿಂ, ಕ್ರಿಶ್ಚಿಯನ್ ಎಂದಿಗೂ ಹೊರೆಯಾಗಲು ಸಾಧ್ಯವಿಲ್ಲ. ಆದರೆ ಆ ಸಮುದಾಯ ಕೂಡ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾದ ಅಗತ್ಯತೆಯಿರುತ್ತದೆ. ಸಮಾನ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳುವುದು ಕೂಡ ಈ ಹೊಂದಾಣಿಕೆಯ ಪ್ರಕ್ರಿಯೆಯ ಒಂದು ಭಾಗವೇ ಆಗಿರುತ್ತದೆ. ಸಮಾನ ನಾಗರಿಕ ಸಂಹಿತೆಯನ್ನು ಒಪ್ಪಿಕೊಳ್ಳದೇ ಇರುವುದು ಮತ್ತು ಎಲ್ಲರೂ ಪಾಲಿಸುವ ವಸ್ತ್ರಸಂಹಿತೆಯನ್ನು ಪಾಲಿಸಲು ಒಪ್ಪದೇ ಇರುವುದೂ ಕೆಲ ಮಂದಿ ಅಲ್ಪಸಂಖ್ಯಾತರ ಅಸಹಿಷ್ಣುತೆಯ ರೂಪವಾಗುತ್ತದೆ. ಸಮಾಜದೊಂದಿಗೆ ಬೆರೆಯದೆ ಪ್ರತ್ಯೇಕತೆಯನ್ನು ಉಳಿಸಿಕೊಳ್ಳುವ ಮನಸ್ಥಿತಿಯ ಪ್ರತೀಕವಾಗುತ್ತದೆ.

ಇವತ್ತು ಸಹಿಷ್ಣುತೆಗಿಂತ ಹೆಚ್ಚು ಬೇಕಾಗಿರುವುದು ಸಮರಸತೆ. ಸಮರಸತೆಯಲ್ಲಿ ಯಾರೂ ಯಾರನ್ನೂ ಸಹಿಸಿಕೊಳ್ಳುವ ಅಗತ್ಯವಿರುವುದಿಲ್ಲ. ಬದಲಿಗೆ ಅಲ್ಲಿ ಒಬ್ಬರು ಇನ್ನೊಬ್ಬರನ್ನು ಪ್ರೀತಿಸಲು ಕಾರಣಗಳಿರುತ್ತವೆ. ನಿನಗೆ ನೋವಾಗುವಂಥ ಕೆಲಸವನ್ನು ನಾನು ಮಾಡಲಾರೆ; ನನಗೆ ನೋವಾಗುವಂಥದ್ದನ್ನು ನೀನೂ ಮಾಡಬೇಡ ಎಂಬ ಹೊಂದಾಣಿಕೆ, ಪರಸ್ಪರರ ಸಂವೇದನೆಗಳನ್ನು ಅರಿತುಕೊಳ್ಳುವ ಮನೋಭಾವ ಇಂದಿನ ಅಗತ್ಯ. ಅದಕ್ಕೆ ತೆರೆದ ಮನಸ್ಸು ಮತ್ತು ಬದಲಾವಣೆಗೆ ಒಪ್ಪಿಕೊಳ್ಳುವ ನಾಯಕತ್ವ ಬೇಕು. ಎಲ್ಲ ಮತ-ಧರ್ಮಗಳಲ್ಲಿಯೂ ಇರುವ ಹುಳುಕಗಳನ್ನು ಮತ್ತು ಜಾಡ್ಯಗಳನ್ನು ತೊಲಗಿಸುವ ಎದೆಗಾರಿಕೆ ಬೇಕು. ರಾಜಕೀಯ ಮತ್ತು ಧಾರ್ಮಿಕ ಆಯಾಮವನ್ನು ಮೀರಿದ ಸಮಾಜಮುಖಿ ಚಿಂತನೆಯುಳ್ಳ ಯುವಕರು ಬೇಕು. ಅಲ್ಲದೆ ನಮ್ಮ ಬುದ್ಧಿಜೀವಿ, ವಿಚಾರವಾದಿ ವರ್ಗದ ಬೆಂಬಲವೂ ಬೇಕಾಗುತ್ತದೆ.

ಆ ಒಂದು ನವ ದಿಗಂತದೆಡೆಗೆ ಮನಸ್ಸನ್ನು ತಿರುಗಿಸೋಣ. ಬದಲಿಗೆ ಸಹಿಷ್ಣುತೆಯ ಹೆಸರಿನಲ್ಲಿ ಅಲ್ಪಸಂಖ್ಯಾತರಲ್ಲಿ ಪ್ರತ್ಯೇಕತೆಯ ಮನೋಭಾವವನ್ನು ಬಿತ್ತುವುದು ಬೇಡ.

Monday, August 24, 2009

ಕುಪ್ಪಳಿಯ ಸಾಂಗತ್ಯ

ಕುಪ್ಪಳಿಯಲ್ಲಿ ಮೊನ್ನೆ ತಾನೆ ಮುಕ್ತಾಯವಾದ ಎರಡು ದಿನಗಳ ಚಿತ್ರೋತ್ಸವದ ಬಗ್ಗೆ ನನ್ನ ನಾಲ್ಕು ಮಾತು ಬರೆಯೋಣ ಎಂದು ಕುಳಿತರೆ ಏನು ಬರೆಯುವುದು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ. ಕಾರಣ; ಸಾಂಗತ್ಯ ತಂಡದವರು ಆಯೋಜಿಸಿದ ಚಿತ್ರೋತ್ಸವದ ಕೊನೆಯಲ್ಲಿ ಪ್ರದರ್ಶಿಸಿದ ಬಾಯ್ ಇನ್ ದಿ ಸ್ಟ್ರೈಪ್ಡ್ ಪಾಯ್ಜಾಮಾ ಚಿತ್ರದ ಗುಂಗಿನಿಂದ ಇನ್ನೂ ಹೊರಬರಲು ಆಗುತ್ತಿಲ್ಲ. ಅಷ್ಟೊಂದು ಮನಮುಟ್ಟುವ ಚಿತ್ರ ಅದು.

ಜೂನ್ ನಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಸಿಬಂತಿ ಪದ್ಮನಾಭ ಅವರು ಕುಪ್ಪಳಿಯಲ್ಲಿ ಸಾಂಗತ್ಯ ಬಳಗದವರು ನಡೆಸುವ ಚಿತ್ರೋತ್ಸವದ ಬಗ್ಗೆ ಹೇಳಿದ್ದರು. ಚಿತ್ರೋತ್ಸವಕ್ಕೆ ಬರಲು ಆಪ್ತ ಆಮಂತ್ರಣವನ್ನೂ ನೀಡಿದ್ದರು. ಆದರೂ ಮನಸ್ಸು ಮಾತ್ರ ಹೋಗಲೋ ಬೇಡವೋ ಎಂದು ಕಾಲಹರಣ ಮಾಡುತ್ತಿತ್ತು.

ನೀನು ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು, ತೃತೀಯ ಸೆಮಿಸ್ಟರ್ ಓದುತ್ತಿರುವವನಾಗಿದ್ದರೆ ಈ ಕಾರ್ಯಕ್ರಮಕ್ಕೆ ನೀನು ಕಡ್ಡಾಯವಾಗಿ ಬರಲೇಬೇಕು ಎಂದ ಸಿಬಂತಿ ಪದ್ಮನಾಭರ ಮಾತು ಮತ್ತು ಸಲಹೆ-ಚಿತ್ರೋತ್ಸವದಲ್ಲಿ ಬರುವಂತೆ ಮಾಡಿತು. ಆದರೂ ಚಿತ್ರೋತ್ಸವ ಹೇಗಾಗುತ್ತದೆಯೋ ಏನೋ, ಅಲ್ಲಿಗೆ ಯಾರ್ಯಾರು ಬರುತ್ತಾರೋ ಎಂಬ ಪ್ರಶ್ನೆಗಳೊಂದಿಗೆ ಕುಪ್ಪಳಿ ತಲುಪಿದ್ದೆ.

ಆದರೆ ಈಗ ಯಾವ ಪ್ರಶ್ನೆಗಳು, ಯಾವ ಅನುಮಾನಗಳೂ ಉಳಿದಿಲ್ಲ. ಅಲ್ಲಿನ ವಾತಾವರಣ, ಬಳಗದವರ ಆತ್ಮೀಯತೆ, ಪ್ರದರ್ಶಿಸಿದ ಚಿತ್ರಗಳು, ಮತ್ತೊಮ್ಮೆ ಸಿಕ್ಕ ಮತ್ತು ಮತ್ತೆ ಮತ್ತೆ ಸಿಗುವ ಸ್ನೇಹಿತರು ಈ ಕಾರ್ಯಕ್ರಮದ ನೆನಪುಗಳನ್ನು ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ.

ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಹಲವು ಚಿತ್ರಗಳ ಪೈಕಿ ಮೂರು ಚಿತ್ರಗಳು ನನ್ನನ್ನು ತೀವ್ರವಾಗಿ ಕಾಡಿವೆ. ಅವು ಕಾರಂತಜ್ಜನಿಗೊಂದು ಪತ್ರ, ಗೋಸ್ಟ್ ಆಂಡ್ ದಿ ಡಾರ್ಕ್‌ನೆಸ್ ಮತ್ತು ಮೊದಲೇ ಹೇಳಿದಂತೆ ಬಾಯ್ ಇನ್ ದಿ ಸ್ಟ್ರೈಪ್ಡ್ದಿ ಪಾಯ್ಜಾಮಾ.

ಕಾರಂತಜ್ಜನಿಗೊಂದು ಪತ್ರ ಚಿತ್ರ ಇಷ್ಟವಾಗಲು ನನ್ನೂರಾದ ಕರಾವಳಿಯಲ್ಲಿನ ಕಡಲ್ಕೊರೆತದ ಸಮಸ್ಯೆಯನ್ನು ಚಿತ್ರದ ಕಥೆಯನ್ನಾಗಿಸಿಕೊಂಡದ್ದು ಕಾರಣವಾಗಿರಬಹುದು. ಚಿತ್ರದಲ್ಲಿ ಬರುವ ಶಾನುಭೋಗರ ಮಗ ವಯಸ್ಸಿಗೆ ಅತಿ ಎನ್ನುವಂತಹ ಮಾತುಗಳನ್ನು ಆಡುತ್ತಾನಾದರೂ, ಒಟ್ಟಾರೆ ಆ ಚಿತ್ರ ನಮಗೆ ತಲುಪಿಸುವ ಸಂದೇಶ ನಿಜಕ್ಕೂ ಗಂಭೀರವಾದದ್ದು.

ಬಾಯ್ ಇನ್ ದಿ ಸ್ಟ್ರೈಪ್ಡ್ಸ್ಟ್ರಿಪಾಯ್ಜಾಮಾ ಹಿಟ್ಲರ್ ಕಾಲದ ಯಹೂದಿ ಮತ್ತು ಜರ್ಮನ್ ಮಕ್ಕಳಿಬ್ಬರ ನಡುವಿನ ಸ್ನೇಹವನ್ನು ಕಥೆಯನ್ನಾಗಿಸಿಕೊಂಡಿದೆ. ಅದರಲ್ಲಿ ಬರುವ ಯಹೂದಿ ಹುಡುಗನ ಅಭಿನಯವಂತೂ ಮತ್ತೆ ಮತ್ತೆ ಕಾಡುತ್ತದೆ. ಯಹೂದಿಗಳೆಲ್ಲಾ ಕೆಟ್ಟವರು ಅಂತ ಹಿಟ್ಲರ್ ಕಾಲದ ಜರ್ಮ್ನ್ ಪಠ್ಯಪುಸ್ತಗಳಲ್ಲಿ ಬರೆದಿದ್ದನ್ನು ಓದಿ ತಿಳಿದಿಕೊಂಡಿದ್ದ ಜರ್ಮನ್ ಬಾಲಕ ಯಹೂದಿ ಬಾಲಕನನ್ನು ಭೇಟಿಯಾದಾಗ ನಿನ್ನಪ್ಪ ನಿನ್ನನ್ನು ಪ್ರೀತಿಸುತ್ತಾನಾ? ಎಂದು ಪ್ರಶ್ನಿಸುತ್ತಾನೆ. ಕಾರಣ ಜರ್ಮನ್ ಬಾಲಕನ ಪ್ರಕಾರ ಯಹೂದಿಗಳೆಲ್ಲಾ ಕೆಟ್ಟವರು ಮತ್ತು ಅವರು ಕೆಟ್ಟವರಾಗಿರುವ ಕಾರಣ ಅವರು ಯಾರೂ ತಮ್ಮ ಮಕ್ಕಳನ್ನು ಪ್ರೀತಿಸುವುದಿಲ್ಲ.ನಿನ್ನಪ್ಪ ನಿನ್ನನ್ನು ಪ್ರೀತಿಸುವಷ್ಟೇ ನನ್ನಪ್ಪನೂ ನನ್ನನ್ನೂ ಪ್ರೀತಿಸುತ್ತಾನೆ ಎಂಬ ಯಹೂದಿ ಹುಡುಗನ ಮಾತು ಜರ್ಮನ್ ಬಾಲಕನನ್ನು ಒಂದು ಕ್ಷಣ ಮೂಕನನ್ನಾಗಿಸುತ್ತವೆ. ಪ್ರೇಕ್ಷಕರ ಮನಸ್ಸನ್ನೂ ಆರ್ದ್ರಗೊಳಿಸುತ್ತದೆ.

ಚಿತ್ರ ಪ್ರದರ್ಶನದ ನಂತರದ ಚರ್ಚೆಯ ಬಗ್ಗೆ ವಿಭಿನ್ನ ರೀತಿಯ ಅಭಿಪ್ರಾಯಗಳಿವೆ. ಸಾಂಗತ್ಯದ ಚಿತ್ರೋತ್ಸವದಲ್ಲಿ ಚಿತ್ರ ಪ್ರದರ್ಶನದ ನಂತರ ಒಮ್ಮೆ ಎಲ್ಲರೂ ಒಟ್ಟಾಗಿ ಕುಳಿತು ಆ ಚಿತ್ರದ ಬಗ್ಗೆ ಚರ್ಚಿಸುತ್ತಾರೆ. ಆ ಸಂದರ್ಭದಲ್ಲಿ ಕೆಲವು ಹಿರಿಯರ ಉಪಸ್ಥಿತಿ (ಉದಾ: ಡಾ. ಜಿ ಬಿ ಹರೀಶ್, ಪರಮೇಶ್ ಗುರುಸ್ವಾಮಿ) ವಿಮರ್ಶೆ/ಚರ್ಚೆಗೊಂದು ಘನತೆಯನ್ನು ತಂದುಕೊಟ್ಟಿತ್ತು.

ಆದರೆ ಚಿತ್ರಪ್ರದರ್ಶನದ ಕೂಡಲೇ ಆ ಚಿತ್ರದ ಬಗ್ಗೆ ಚರ್ಚೆ ನಡೆಸುವುದು ಚೆನ್ನಾಗಿರದು. ಹಾಗೆ ಮಾಡುವುದರಿಂದ ಪ್ರೇಕ್ಷಕನಿಗೆ ಚಿತ್ರವನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಾಗದು. ಪ್ರೇಕ್ಷಕ ಚಿತ್ರವನ್ನು ಸಂಪೂರ್ಣವಾಗಿ ಅನುಭವಿಸಿ, ಯೋಚಿಸಿ ಅನಂತರ ಮಾತಾಡಬೇಕು ಎಂಬ ವಾದವೂ ಇದೆ. ಈ ಸಾಧ್ಯತೆ ಬಗ್ಗೆಯೂ ಸಾಂಗತ್ಯ ತಂಡ ಯೋಚಿಸಲೆಂಬುದು ನನ್ನ ಮನವಿ.

ಉಳಿದಂತೆ ಎಲ್ಲವೂ ಖುಶ್… ಊಟ, ವಸತಿ, ಆತಿಥ್ಯ…. ಇವ್ಯಾವುದರ ಬಗ್ಗೆಯೂ ಎರಡು ಮಾತನಾಡುವಂತಿಲ್ಲ. ಇದೆಲ್ಲಕ್ಕೂ ಕಳಶಪ್ರಾಯವಾಗಿ ಕುಪ್ಪಳಿಯ ರಮ್ಯ ಪರಿಸರ, ಕವಿಶೈಲದ ಮನಮೋಹಕ, ಎದೆಗೂಡಲ್ಲಿ ಸದಾ ಬೆಚ್ಚಗಾಗಿರುವ ನೆನಪುಗಳು.

ಸಾಂಗತ್ಯ ತಂಡ ಮತ್ತೆ ಮತ್ತೆ ಈ ಚಿತ್ರೋತ್ಸವವನ್ನು ಕುಪ್ಪಳಿಯಲ್ಲೇ ನಡೆಸಲಿ. ನಮ್ಮನ್ನು ಪ್ರತಿ ಬಾರಿಯೂ ಮರೆಯದೇ ಆಹ್ವಾನಿಸಲಿ.

Tuesday, July 07, 2009

ಒಂದು ಪುಟಾಣಿ ಕತೆ

ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ರಾಮ, ಭೀಮ ಮತ್ತು ಸೋಮ ಎಂಬ ಮೂವರು ಚಡ್ಡಿ ದೋಸ್ತಿಗಳು ಇದ್ದರು. ಅವರದ್ದು ಎಂದಿಗೂ ಮುರಿಯಲಾರದಂತಹ ಸ್ನೇಹ. ಅವರಲ್ಲಿ ಪ್ರತಿಯೊಬ್ಬರೂ ಒಂದೊಂದು ವಿಷಯದಲ್ಲಿ ಅಸಾಮಾನ್ಯ ಬುದ್ಧಿವಂತರು.

ಹೀಗೆ ಒಂದು ದಿನ ಆ ಮೂವರು ಸ್ನೇಹಿತರು ಒಟ್ಟಿಗೆ ಅದು ಇದು ಅಂತ ಹರಟೆ ಹೊಡೆಯುತ್ತ ಚಹ ಕುಡಿಯುತ್ತ ಕುಳಿತಿದ್ದರು. ಆಗ ಅವರಲ್ಲಿ ಸೋಮನಿಗೆ ಜಗತ್ತಿನಲ್ಲಿ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳಲ್ಲಿ ಸರ್ವಕಾಲಗಳಲ್ಲಿಯೂ ಸತ್ಯವಾಗಿರುವ ಸಿದ್ಧಾಂತ ಯಾವುದು ಎಂಬ ಅನುಮಾನ ಮೂಡಿತು.

ಸರಿ, ತನ್ನ ಅನುಮಾನ ಬಗೆಹರಿಸಿಕೊಳ್ಳಲು ಸೋಮ ತನ್ನ ಮನಸಿನಲ್ಲಿ ಮೂಡಿದ ಪ್ರಶ್ನೆಯನ್ನು ರಾಮ ಮತ್ತು ಭೀಮನ ಮುಂದೆ ಕೇಳುವ ನಿರ್ಧಾರಕ್ಕೆ ಬಂದ.

"ನಿಮ್ಮ ಪ್ರಕಾರ ಜಗತ್ತಿನ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳ ಪೈಕಿ ಸಾರ್ವಕಾಲಿಕ ಸತ್ಯವಾದ ಸಿದ್ಧಾಂತ ಯಾವುದು?" ಅಂತ ಸೋಮ ತನ್ನ ಪ್ರಶ್ನೆಯನ್ನು ಉಳಿದಿಬ್ಬರ ಮುಂದೆ ಇಟ್ಟ.

ರಾಮ ಮತ್ತು ಭೀಮನ ಪೈಕಿ ರಾಮನಿಗೆ ಈ ಪ್ರಶ್ನೆಗೆ ಉತ್ತರಿಸುವುದು ಹೇಗೆ ಅನ್ನುವುದು ತಿಳಿಯಲಿಲ್ಲ. ಆದರೆ ಭೀಮ ಒಮ್ಮೆ ನಸುನಕ್ಕ. ಬಳಿಕ ಪ್ರಶ್ನೆ ಕೇಳಿದ ಸೋಮನ ಕಡೆಗೆ ತಿರುಗಿ "ನಿನ್ನ ಊಟ ಆಯಿತಾ?" ಎಂದು ಮರು ಪ್ರಶ್ನಿಸಿದ.

"ಆಯಿತು" ಎಂಬ ಉತ್ತರ ಸೋಮನ ಕಡೆಯಿಂದ ಬಂತು.

"ಹೊಟ್ಟೆ ತುಂಬಾ ಊಟ ಮಾಡಿದೆಯಾ? ಊಟ ತಕ್ಕಮಟ್ಟಿಗೆ ರುಚಿಯಾಗಿತ್ತಾ?" ಎಂದು ಮತ್ತೆ ಭೀಮ ಪ್ರಶ್ನಿಸಿದ.

"ಹೌದು, ರುಚಿಯಾಗಿತ್ತು. ಹೊಟ್ಟೆತುಂಬಾ ಊಟ ಮಾಡಿದೆ." ಎಂದುತ್ತರಿಸಿದ ಸೋಮ.

"ಜಗತ್ತಿನ ಪರಮ ಸತ್ಯ ಯಾವುದು ಮತ್ತು ಸಾರ್ವಕಾಲಿಕೆ ಸಿದ್ಧಾಂತ ಯಾವುದು ಎಂಬ ನಿನ್ನ ಪ್ರಶ್ನೆಗೆ ಇದೇ ನನ್ನ ಉತ್ತರ" ಎಂದ ಭೀಮ ಸೋಮನ ಉತ್ತರಕ್ಕೂ ಕಾಯದೆ ಎತ್ತಲೋ ಹೊರಟುಹೋದ.

***

(ನನ್ನ ಗುರುಗಳೊಬ್ಬರು ಹೇಳಿದ ಕತೆ)

Saturday, June 20, 2009

ದೀನದಯಾಳರ ನಿರಹಂಕಾರ

ಅದು ೧೯೬೦ರ ದಶಕ. ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ಲಾಲ್ ಕೃಷ್ಣ ಆಡ್ವಾಣಿಯವರು ಭಾರತೀಯ ಜನ ಸಂಘದ ಕೆಲವು ಜವಾಬ್ದಾರಿಗಳನ್ನೂ ವಹಿಸಿಕೊಂಡಿದ್ದರು. ಹಾಗೆಯೇ ಪಕ್ಷದ ಮತ್ತು ಸಂಘದ ಕೆಲ ಹಿರಿಯರ ಸೂಚನೆಯ ಮೇರೆಗೆ ೧೯೬೦ರಲ್ಲಿ ’ಆರ್ಗನೈಸರ್’ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಕಾಲ ಅದು.
ಆಡ್ವಾಣಿಯವರಿಗೆ ಜನಸಂಘದ ಮಾರ್ಗದರ್ಶಕರಲ್ಲೊಬ್ಬರಾಗಿದ್ದ, ಸಂತಸದೃಶ ಜೀವನ ನಡೆಸುತ್ತಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರೊಂದಿಗೆ ಆತ್ಮೀಯ ಸಂಬಂಧವಿತ್ತು. ತಮ್ಮ ಆತ್ಮಕಥೆಯಲ್ಲಿ ಆಡ್ವಾಣಿ ಪಂಡಿತ ದೀನದಯಾಳ ಉಪಾಧ್ಯಾಯರ ಬಗ್ಗೆ ಹೀಗೆ ಬರೆದಿದ್ದಾರೆ:
"ಅವರು ತಮ್ಮ ಬಗ್ಗೆ ಮಾತಾಡುವುದನ್ನು ಮುಜುಗರ ಎಂದು ತಿಳಿದಿದ್ದರು. ಅವರು ಹೇಳಿದ್ದನ್ನು ನಡೆಯಲ್ಲಿ ತೋರಿಸಿದರು. ಅವರ ನಾಯಕತ್ವದ ಬೇರುಗಳಿದ್ದದ್ದೇ ಎಲ್ಲರನ್ನು ಅಪ್ಪಿಕೊಳ್ಳುವ ದಾರ್ಶನಿಕತೆಯಲ್ಲಿ. ಅವರು ಮಾನವೀಯತೆಯ ಸಾಕಾರಮೂರ್ತಿ. ಅಧಿಕಾರದ ಬಗ್ಗೆ ನಿಕೃಷ್ಟತೆ ಇದ್ದ ರಾಜಕಾರಣಿ ಅವರಾಗಿದ್ದರು. ಅವರೇ ಪಂಡಿತ ದೀನದಯಾಳ್‌ಜೀ"
ಉಪಾಧ್ಯಾಯರೊಂದಿಗೆ ತಮಗಿದ್ದ ಆತ್ಮೀಯತೆಯನ್ನು ಬಳಸಿಕೊಂಡು ಆಡ್ವಾಣಿಯವರು ಒಮ್ಮೆ ಅವರಲ್ಲಿ ಆರ್ಗನೈಸರ್ ಪತ್ರಿಕೆಗೆ ಒಂದು ಅಂಕಣವನ್ನು ಬರೆಯಲಾರಂಭಿಸುವಂತೆ ಕೇಳಿಕೊಂಡರು.
ಆಡ್ವಾಣಿಯವರ ಒತ್ತಾಯದ ಮೇರೆಗೆ ಉಪಾಧ್ಯಾಯರು ’ರಾಜಕೀಯ ಡೈರಿ’ ಎಂಬ ಅಂಕಣವನ್ನು ಆರ್ಗನೈಸರ್‌ಗೆ ಬರೆಯಲಾರಂಭಿಸಿದರು. ಆಯಾ ವಾರದ ವಿವಿಧ ರಾಜಕೀಯ ವಿದ್ಯಮಾನಗಳನ್ನು ಉಪಾಧ್ಯಾಯರು ತಮ್ಮದೇ ಆದ ದೃಷ್ಟಿಕೋನದಿಂದ ಆ ಅಂಕಣದಲ್ಲಿ ವಿಮರ್ಶಿಸುತ್ತಿದ್ದರು. ಅವರ ಅನನ್ಯ ಒಳನೋಟಗಳ ಕಾರಣ ಆ ಅಂಕಣ ಬಹುಬೇಗ ಜನಪ್ರಿಯವಾಯಿತು. ಮುಂದೆ ಇದೇ ಅಂಕಣ ಬರಹಗಳ ಸಂಕಲನ ’ರಾಜಕೀಯ ಡೈರಿ’ ಎಂಬ ಹೆಸರಿನಲ್ಲಿಯೇ ಪುಸ್ತಕ ರೂಪದಲ್ಲಿ ಹೊರಬಂತು.
ಇದೆಲ್ಲವನ್ನು ಗಮನಿಸಿದ ಆಡ್ವಾಣಿ, ಉಪಾಧ್ಯಾಯರಲ್ಲಿ ತಮ್ಮ ಅಪಾರ ಅನುಭವ, ಪ್ರವಾಸ, ಒಳನೋಟಗಳಿಂದ ಕೂಡಿದ ವೈಯುಕ್ತಿಕ ಸ್ಪರ್ಷವಿರುವ ಅಂಕಣವೊಂದನ್ನು ಬರೆಯಿರಿ ಎಂದು ಕೇಳಿಕೊಂಡರು. ಆದರೆ ಉಪಾಧ್ಯಾಯರು ಇದಕ್ಕೆ ಖಡಾಖಂಡಿತವಾಗಿ ಒಲ್ಲೆ ಎಂದರು! ಕಾರಣ ಕೇಳಿದಾಗ: "ಈ ರೀತಿಯ ಅಂಕಣ ಆರಂಭಿಸಿದರೆ ಅನಗತ್ಯವಾಗಿ ’ನಾನು’ ಎಂಬ ಪದವನ್ನು ಅಂಕಣದುದ್ದಕ್ಕೂ ಉಲ್ಲೇಖಿಸಬೇಕಾದ ಪ್ರಮೇಯ ಬರುತ್ತದೆ. ನನಗದು ಇಷ್ಟವಿಲ್ಲದ ಸಂಗತಿ ಎಂದು ಹೇಳಿದರು!"
ಆದರೂ ಆಡ್ವಾಣಿಯವರು ನಿಮ್ಮ ಬರಹ ಓದುಗರಿಗೆ ಇಷ್ಟವಾಗುತ್ತದೆ ಎಂದು ತುಂಬ ಒತ್ತಾಯ ಮಾಡಿದಾಗ ಉಪಾಧ್ಯಾಯರು ಬರೆಯಲು ಒಪ್ಪಿದರು. ಆದರೆ ಎರಡು ಅಂಕಣ ಬರೆದು, ಅದು ಪ್ರಕಟವಾದ ನಂತರ ಆಡ್ವಾಣಿಯವರಲ್ಲಿಗೆ ಬಂದ ಉಪಾಧ್ಯಾಯರು ನಾನು ಇನ್ನು ಈ ಅಂಕಣವನ್ನು ಮುಂದುವರೆಸುವುದಿಲ್ಲ ಎಂದುಬಿಟ್ಟರಂತೆ.
"ನಾನು ಯಾವುದೇ ವಿಷಯದ ಬಗ್ಗೆ ಬೇಕಾದರೂ ಬರೆಯುತ್ತೇನೆ. ಆದರೆ ನನ್ನ ಬಗೆಗಲ್ಲ. ಅದು ನನಗೆ ಆಗಿಬರುವುದಿಲ್ಲ" ಎಂದು ಉಪಾಧ್ಯಾಯರು ಕಾರಣ ನೀಡಿದ್ದರು.
ಉಪಾಧ್ಯಾಯರ ಈ ನಿರಹಂಕಾರದ ಮನಸ್ಥಿತಿಗೊಂದು ಪ್ರಣಾಮಗಳು.
 

ವಿರಾಟ್ Copyright © 2009 BeMagazine Blogger Template is Designed by Blogger Template
In Collaboration with fifa